ಹಾಸನಾಂಬೆ ದರ್ಶನ ಪಡೆದ ಶ್ರವಣಬೆಳಗೊಳದ ಮಹಾಸ್ವಾಮೀಜಿ

| Published : Oct 27 2024, 02:45 AM IST

ಸಾರಾಂಶ

ಹಾಸನಾಂಬೆ ದೇವಿ ದರ್ಶನ ಮಾಡಲು ಶನಿವಾರದಂದು ಬೆಳಿಗ್ಗೆ ಆಗಮಿಸಿದ್ದ ಶ್ರವಣಬೆಳಗೊಳ ಮಠದ ಮಠಾಧೀಶರಾದ ಶ್ರೀ ಚಾರು ಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಭಟ್ಟಾ ಚಾರ್ಯವರ್ಯ ಮಹಾ ಸ್ವಾಮೀಜಿ ಅವರು ದರ್ಶನ ಪಡೆದರು. ಮಹಾಸ್ವಾಮೀಜಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಡಳಿತದಿಂದ ಮಂಗಳ ವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಿ ಬರಮಾಡಿಕೊಂಡರು. ಮೊದಲು ಹಾಸನಾಂಬೆ ದೇವಿ ದರ್ಶನ ಪಡೆದು, ದರ್ಬಾರ್‌ ಗಣಪತಿ, ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದೇವಿ ದರ್ಶನ ಮಾಡಲು ಶನಿವಾರದಂದು ಬೆಳಿಗ್ಗೆ ಆಗಮಿಸಿದ್ದ ಶ್ರವಣಬೆಳಗೊಳ ಮಠದ ಮಠಾಧೀಶರಾದ ಶ್ರೀ ಚಾರು ಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಭಟ್ಟಾ ಚಾರ್ಯವರ್ಯ ಮಹಾ ಸ್ವಾಮೀಜಿ ಅವರು ದರ್ಶನ ಪಡೆದರು.

ಮಹಾಸ್ವಾಮೀಜಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಡಳಿತದಿಂದ ಮಂಗಳ ವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಿ ಬರಮಾಡಿಕೊಂಡರು. ಮೊದಲು ಹಾಸನಾಂಬೆ ದೇವಿ ದರ್ಶನ ಪಡೆದು, ದರ್ಬಾರ್‌ ಗಣಪತಿ, ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ ಜಿಲ್ಲಾಡಳಿತದಿಂದ ಗೌರವಿಸಲಾಯಿತು. ನಂತರ ಆಶೀರ್ವಚನದಲ್ಲಿ ಸ್ವಾಮೀಜಿ ಮಾತನಾಡಿ, ಇಡೀ ನಾಡಿಗೆ ಹಾಸನಾಂಬೆ ದೇವಿ ಅನುಗ್ರಹ ಇರಲಿ, ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ, ಸಾಕಷ್ಟು ಮಂದಿ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕಾಗಿ ದುಡಿದಿದ್ದಾರೆ ಎಂದರು.

ಜಿಲ್ಲಾಡಳಿತ ಭಕ್ತರಿಗೆ ಉತ್ತಮವಾದ ವ್ಯವಸ್ಥೆ ಕಲ್ಪಿಸಿದೆ. ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲು ಜಿಲ್ಲಾಧಿಕಾರಿ ಅವರು ಅತ್ಯಂತ ಶ್ರಮಪಟ್ಟಿದ್ದಾರೆ. ದೇವಿ ಎಲ್ಲರಿಗೂ ಒಳಿತು ಮಾಡಲಿ ಎಂದು ಆಶಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸಿ ಮಾರುತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಎಎಸ್ಪಿ ಕೆ.ಎಂ. ತಮ್ಮಯ್ಯ ಇತರರು ಉಪಸ್ಥಿತರಿದ್ದರು.