ಮಹಾತ್ಮಗಾಂಧಿಯನ್ನು ಸದಾ ಸ್ಮರಿಸಬೇಕು: ಶಾಸಕ ಡಿ. ರವಿಶಂಕರ್

| Published : Oct 03 2024, 01:23 AM IST / Updated: Oct 03 2024, 01:24 AM IST

ಸಾರಾಂಶ

ಜಯಂತಿ ಆಚರಣೆ ಮತ್ತು ಭಾಷಣಗಳಿಂದ ಅವರ ಆಶಯಗಳು ಈಡೇರುವುದಿಲ್ಲ, ಬದಲಾಗಿ ಅಂತಹ ಇತಿಹಾಸ ಪುರುಷರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿಗೆ ಆಚರಣೆಗೆ ಅರ್ಥ ಬರಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರರಾಷ್ಟ್ರಪಿತ ಮಹಾತ್ಮಗಾಂಧಿ ಅವರ ನಿರಂತರ ಹೋರಾಟ ಮತ್ತು ಸತ್ಯಾಗ್ರಹದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದಕ್ಕಾಗಿ ನಾವು ಆ ಮಹಾತ್ಮನನ್ನು ಸದಾ ಸ್ಮರಣೆ ಮಾಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಆಡಳಿತ ಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಯ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿಯವರು ಜಗತ್ತಿನ ನಾಯಕ ಎಂಬ ಗೌರವ ದೊರೆತಿರುವುದು ಭಾರತೀಯರಿಗೆ ಸಿಕ್ಕ ಹೆಗ್ಗಳಿಕೆ ಎಂದರು. ಜಯಂತಿ ಆಚರಣೆ ಮತ್ತು ಭಾಷಣಗಳಿಂದ ಅವರ ಆಶಯಗಳು ಈಡೇರುವುದಿಲ್ಲ, ಬದಲಾಗಿ ಅಂತಹ ಇತಿಹಾಸ ಪುರುಷರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿಗೆ ಆಚರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಜೈ ಜವಾನ್ ಜೈ ಕಿಶಾನ್ ಎಂಬ ಘೋಷ ವಾಕ್ಯದೊಂದಿಗೆ ರೈತರಿಗೆ ಸಾಕಷ್ಟು ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದರು ಇಂತಹ ಮಹಾತ್ಮರ ಜಯಂತಿಯನ್ನು ಮುಂದಿನ ವರ್ಷ ವಿನೂತನವಾಗಿ ಆಚರಣೆ ಮಾಡಲು ಕ್ರಮ ವಹಿಸುವುದಾಗಿ ನುಡಿದರು.ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದ್ದು, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನಶಿಲ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಗಳನ್ನು ಹೊರತು ಪಡಿಸಿ ಉಳಿದ ಜಯಂತಿ ಆಚರಣೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.ಕಾರ್ಯಕ್ರಮಕ್ಕೂ ಮೊದಲು ಶಾಸಕ ಡಿ.ರವಿಶಂಕರ್ ಮತ್ತು ಪುರಸಭೆ ಸಿಬ್ಬಂದಿ ಹಾಗೂ ವಿವಿದ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಪಟ್ಟಣದ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಶ್ರಮದಾನ ಮಾಡಿದರು.ಐದು ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ವಿಜಯಲಕ್ಷ್ಮಿ ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಮಾತನಾಡಿದರು. ನಗರ ಯೋಜನಾ ಪ್ರಾಧಿಕರಾದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಸೈಯದ್ ಅಸ್ಲಾಂ, ಇಒ ಕುಲ್ ದೀಪ್, ಬಿಇಒ ಆರ್. ಕೃಷ್ಣಪ್ಪ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಟಿಎಚ್ಒ ಡಾ.ಡಿ. ನಟರಾಜ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ನೀರಾವರಿ ಇಲಾಖೆಯ ಎಇಇ ಅಯಾಜ್ ಪಾಷ, ವಲಯ ಅರಣ್ಯಾಧಿಕಾರಿ ಟಿ.ವಿ. ಹರಿಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಶಂಕರ್, ಮುಖಂಡರಾದ ತಿಮ್ಮಶೆಟ್ಟಿ, ಕೆ.ಪಿ. ಜಗದೀಶ್, ಬಿ.ಎಚ್. ಕುಮಾರ್ ಇದ್ದರು.