ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ದಲಿತ ಸಂಘಟನೆ ಮುಖಂಡ ಕೆ.ಎಂ.ನಾಗರಾಜು ಸುದ್ದಿಗೋಷ್ಠಿ ನಡೆಸಿದರು.
ಚಾಮರಾಜನಗರ: ಸೆ.29ರಂದು ಮೈಸೂರಿನಲ್ಲಿ ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬ ಮಹಿಷ ದಸರಾ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಿಂದ 5 ಸಾವಿರ ಜನರು ಮಹಿಷ ದಸರಾಕ್ಕೆ ಭಾಗವಹಿಸಲಿದ್ದೇವೆ ಎಂದು ದಲಿತ ಸಂಘಟನೆ ಮುಖಂಡ ಕೆ.ಎಂ. ನಾಗರಾಜು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ದಲಿತ ಸಂಘಟನೆಗಳು, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಅಂಬೇಡ್ಕರ್ ಸಂಘಟನೆಗಳ ಸಹಯೋಗದೊಂದಿಗೆ ಮೈಸೂರಿನಲ್ಲಿ 30 ಸಾವಿರ ಜನರು ಮಹಿಷ ದಸರಾದಲ್ಲಿ ಭಾಗವಹಿಸಲಿದ್ದೇವೆ ಎಂದರು. 29ರಂದು ಬೆಳಗ್ಗೆ 8.30 ಗಂಟೆಗೆ ಮಹಿಷ ಬೆಟ್ಟಕ್ಕೆ ಮೆರವಣಿಗೆ ನಡೆಸಿ ಮಹಿಷ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದು, ನಂತರ ಮೈಸೂರಿನ ಪುರಭವನದದಲ್ಲಿ ವೇದಿಕೆ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದರು.3ನೇ ಶತಮಾನದಲ್ಲಿ ಮಹಿಷಾಸುರ ಎಂಬ ರಾಜನಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದ್ದು, ಮಹಿಷಾಸುರ ಎಂಬ ರಾಜನ ಹೆಸರಿನಿಂದಲೇ ಮೈಸೂರು ಇದೆ. ಅಲ್ಲಿದ್ದ ಮೂಲನಿವಾಸಿಗಳು ಮಹಿಷಾಸುರನ ಜಯಂತಿ ಹಾಗೂ ಮಹಿಷ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು. ದಲಿತ ಮುಖಂಡ ಶಿವಣ್ಣ ಮಾತನಾಡಿ, ನಾವು ಚಾಮುಂಡಿ ದೇವಿಯ ವಿರೋಧಿಗಳಲ್ಲ. ಮಹಿಷ ಮೂಲ ನಿವಾಸಿಗಳ ದೊರೆಯಾಗಿರುವುದರಿಂದ ಮಹಿಷ ದಸರಾ ಆಚರಿಸುತ್ತಿದ್ದೇವೆ. ಮಾಜಿ ಸಂಸದ ಪ್ರತಾಪ್ಸಿಂಹ ಮೂಲನಿವಾಸಿಗಳ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ದಲಿತ ಮುಖಂಡ ಸಂಘಸೇನಾ ಮಾತನಾಡಿ, ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು, ಮಹಿಷ ದಸರಾ ಯಶಸ್ವಿಗೆ ಸಹಕರಿಸಬೇಕು ಇಲ್ಲದಿದ್ದರೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಯರಿಯೂರು ರಾಜಣ್ಣ, ಸುಭಾಷ್ ಮಾಡ್ರಹಳ್ಳಿ, ಬಂಗಾರಸ್ವಾಮಿ, ಪರಶಿವಮೂರ್ತಿ ಇದ್ದರು.