ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಕಾಪಾಡಿ: ಸಿಇಒ ಪೂರ್ಣಿಮಾ ಕರೆ

| Published : Aug 06 2024, 12:35 AM IST

ಸಾರಾಂಶ

ರಸ್ತೆ ಬದಿಗಳಲ್ಲಿ ಇರುವಂತಹ ಟೀ ಅಂಗಡಿಗಳು, ಬೇಕರಿ, ಉಪಹಾರ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು ಹಾಗೂ ಕಸ ಸಂಗ್ರಹಣೆ ಮಾಡಲು ಪ್ರತಿ ಅಂಗಡಿಗಳಲ್ಲೂ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡು ಕಸವನ್ನು ಆಟೋಗಳಿಗೆ ಹಾಕುವಂತೆ ಸೂಚನೆ ನೀಡಿದರು. ಎಲ್ಲ ಅಂಗಡಿ ಮಾಲೀಕರ ಸಭೆ ಕರೆದು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ.

ಹಾಸನ: ದುದ್ದ ಗ್ರಾಪಂಗೆ ಭೇಟಿ ನೀಡಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಜಾಗೃತಿ ಮೂಡಿಸಿದರು.

ಸರ್ಕಾರದ ನಿರ್ದೇಶನದಂತೆ ನಗರದಲ್ಲಿ ಹಾಸನ ತಾಪಂ ವ್ಯಾಪ್ತಿಯ ದುದ್ದ ಗ್ರಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ಅವರು ಟೀ ಅಂಗಡಿಗಳು, ಬೇಕರಿ, ರಸ್ತೆ ಬದಿಗಳು, ಬಸ್ ಸ್ಟ್ಯಾಂಡ್, ಮನೆಗಳ ಸುತ್ತಮುತ್ತ ಹಾಗೂ ಸಂತೆ ನಡೆಯುವ ಸ್ಥಳಗಳಲ್ಲಿ ಕಸ ಸಂಗ್ರಹಣೆ ಮಾಡಿ ಸ್ವಚ್ಛಗೊಳಿಸಿದರು ಹಾಗೂ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.

ಆಸ್ಪತ್ರೆ, ಶಾಲೆಗಳು, ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಗಮನವಹಿಸಬೇಕು ಹಾಗೂ ಡೆಂಘೀ ಸೇರಿ ಇನ್ನಿತರ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಬದಿಗಳಲ್ಲಿ ಇರುವಂತಹ ಟೀ ಅಂಗಡಿಗಳು, ಬೇಕರಿ, ಉಪಹಾರ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು ಹಾಗೂ ಕಸ ಸಂಗ್ರಹಣೆ ಮಾಡಲು ಪ್ರತಿ ಅಂಗಡಿಗಳಲ್ಲೂ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡು ಕಸವನ್ನು ಆಟೋಗಳಿಗೆ ಹಾಕುವಂತೆ ಸೂಚನೆ ನೀಡಿದರು. ಎಲ್ಲ ಅಂಗಡಿ ಮಾಲೀಕರ ಸಭೆ ಕರೆದು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಎಂದರು.

ಪ್ರತಿ ಮನೆಯವರು ತಮ್ಮ ಮನೆಗಳ ಸುತ್ತಮುತ್ತ ಹಾಗೂ ಚರಂಡಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದರಲ್ಲದೇ ಟೀ ಅಂಗಡಿಗಳು, ಬೇಕರಿಗಳು, ಉಪಹಾರ ಕೇಂದ್ರಗಳು ಸೇರಿ ಮುಂತಾದ ಅಂಗಡಿಯವರು ಸ್ವಚ್ಛತೆಯನ್ನು ಕಾಪಾಡದಿದ್ದಲ್ಲಿ ದಂಡ ವಿಧಿಸುವಂತೆ ಪಿಡಿಒ ಅವರಿಗೆ ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಪಂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಹಾಸನ ತಾಪಂ ಸಿಇಒ ಗಿರೀಶ್ ಎಚ್.ಡಿ., ಪಿಡಿಒ ರೇಖಾ, ದುದ್ದ ಹೋಬಳಿಯ ಪಿಡಿಒಗಳು, ಕಾರ್ಯದರ್ಶಿಗಳು, ತಾಪಂ ಮತ್ತು ದುದ್ದ ಗ್ರಾಪಂ ಸಿಬ್ಬಂದಿ ಹಾಜರಿದ್ದರು.