ಸಾರಾಂಶ
ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣಾ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉದ್ಯಾವರ
ಈ ಆಧುನಿಕ ದಿನಮಾನದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಕೊಡುವಷ್ಟೇ ಮಹತ್ವವನ್ನು ಆರೋಗ್ಯದ ರಕ್ಷಣೆಗೂ ನೀಡಬೇಕಾಗಿದೆ. ಅತಿಯಾದ ಕೃತಕ ಆಹಾರವನ್ನು ಬಳಸುವುದರಿಂದ ವಿದ್ಯಾರ್ಥಿಗಳಿಗೆ ಸಣ್ಣ ಪ್ರಾಯದಲ್ಲಿ ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅನಾರೋಗ್ಯ ಶಿಕ್ಷಣದ ಮೇಲೆ ಪರಿಣಾಮವನ್ನು ಬೀರುತ್ತದೆ. ದೈನಂದಿನ ಸರಳ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶ್ಯಾಮಿಲಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜ್ ಮೋಹನ್ ಅವರು ಕಿವಿಮಾತು ಹೇಳಿದ್ದಾರೆ.ಅವರು ಇಲ್ಲಿನ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಇಂದು ಪುಸ್ತಕವನ್ನು ಹಾಳು ಮಾಡದೆ ಅದನ್ನ ಜತನದಿಂದ ಕಾಪಾಡಿ ಉಪಯೋಗಿಸಿದರೆ, ಆ ಪುಸ್ತಕವೂ ಕೂಡ ನಮ್ಮನ್ನು ಮುಂದೆ ಕಾಪಾಡುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಯು.ಎ.ಇ. ಉದ್ಯಾವರ ಮುಸ್ಲಿಂ ಯುನಿಟಿಯ ಅಧ್ಯಕ್ಷ ಖಾಲಿಖ್ ಹೈದರ್, ಸಂಸ್ಥೆಯ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ವಾಸು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.ಯು.ಎಫ್.ಸಿ. ಪುಸ್ತಕ ಭಂಡಾರದಿಂದ ಊರ ಮತ್ತು ಪರವೂರ 150 ವಿದ್ಯಾರ್ಥಿಗಳು ಪುಸ್ತಕವನ್ನು ಪಡೆದುಕೊಂಡರು.