ಸಾರಾಂಶ
- ಕಾರ್ಯಕರ್ತೆಯರಿಗೆ ₹15000, ಸಹಾಯಕಿಯರಿಗೆ ₹10000 ಗೌರವಧನಕ್ಕೆ ಒತ್ತಾಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಎಚ್ಕೆಆರ್ ಬಣದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿ ನಡೆಸಿದ ನೌಕರರು, ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಮಾತನಾಡಿ, ರಾಜ್ಯದ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₹15 ಸಾವಿರ, ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ನಿವೃತ್ತರಾದ ಎಲ್ಲ ನೌಕರರಿಗೂ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು ಎಂದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಗ್ರಾಚ್ಯುಟಿ ನೀಡುವ ಜೊತೆ ಅಂಗನವಾಡಿ ನೌಕರರ ಸೇವೆಯನ್ನು ನಾಗರೀಕ ಸೇವೆಯಾಗಿ ಪರಿಗಣಿಸಿ, ಕಾರ್ಯಕರ್ತೆಯರನ್ನು ಸಿ ಮತ್ತು ಸಹಾಯಕಿಯರನ್ನು ಡಿ ದರ್ಜೆ ನೌಕಕರೆಂದು ಕಾಯಂ ಮಾಡಬೇಕು. ಸಂಘದ ಬೇಡಿಕೆಗಳನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಅತ್ಯಂತ ಕನಿಷ್ಠ ಪ್ರಮಾಣದ ಗೌರವಧನ ನೀಡುವ ಮೂಲಕ ಸರ್ಕಾರಗಳು ಸೇವೆ ಮಾಡಿಸಿಕೊಳ್ಳುತ್ತಿವೆ. ಕೇವಲ ಗೌರವ ಸೇವೆ ಎಂಬುದಾಗಿ ಪರಿಗಣಿಸಿ, ಬೇಕಾದಷ್ಟು ಸಂಭಾವನೆ ನೀಡದೇ, ಶೋಷಣೆ ಸರಿಯಲ್ಲ. ರಾಜ್ಯದಲ್ಲಿ 1.40 ಲಕ್ಷ ಅಂಗನವಾಡಿ ನೌಕರರು ಸೇರಿದಂತೆ ದೇಶದಲ್ಲಿ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದಾರೆ. ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ ಎಂದರು.
ಸಮಾಜದ ಕಟ್ಟಕಡೆಯ ವರ್ಗದ ಮಕ್ಕಳಿಗೆ ಪೌಷ್ಟಿಕ ಆಹಾರ, ಲಾಲನೆ, ಪಾಲನೆ, ಆರೋಗ್ಯ, ಶಾಲಾ ಪೂರ್ವ ಶಿಕ್ಷಣ ನೀಡುವುದೂ ಸೇರಿದಂತೆ ಗರ್ಭಿಣಿ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಮೂಲಕ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸೈನಿಕರಂತೆ ಸೇವೆ ಸಲ್ಲಿಸುತಿದ್ದಾರೆ. ಇಂತಹ ಮಹಿಳೆಯರ ಬದುಕಿಗೆ ಸರ್ಕಾರ ಸ್ಪಂದಿಸಲಿ ಎಂದು ವಿಶಾಲಾಕ್ಷಿ ಒತ್ತಾಯಿಸಿದರು.ಸಂಘದ ಮುಖಂಡರಾದ ಎಂ.ಸರ್ವಮ್ಮ, ಜೆ.ಎಂ.ಉಮಾ, ಸಿ.ಬಿ.ಕಾಳಮ್ಮ, ಎಂ.ಎಸ್.ಹೊನ್ನಮ್ಮ, ಸುಧಾ, ಇಂದಿರಾ, ಚೌಡಮ್ಮ, ಸಾವಿತ್ರಮ್ಮ, ಎನ್.ಜಿ.ಪುಷ್ಪ, ಗಾಯತ್ರಿ ಬಾಯಿ ಜಾಧವ್, ಅಯೀಷಾ ಇತರರು ಇದ್ದರು.
- - - -24ಕೆಡಿವಿಜಿ7, 8:ದಾವಣಗೆರೆ ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಎಚ್ಕೆಆರ್ ಬಣದಿಂದ ಪ್ರತಿಭಟಿಸಲಾಯಿತು.