ರಾಜ್ಯ ಸರ್ಕಾರ, ಜಿಲ್ಲಾಡಳಿತ ರೈತರಿಂದ ಖರೀದಿಸಿದ ಹಿಂಗಾರು ಜೋಳದ ಬಾಕಿ ಮೊತ್ತವನ್ನು ಸೆ.14ರೊಳಗೆ ರೈತರ ಖಾತೆಗಳಿಗೆ ಜಮಾ ಮಾಡಬೇಕು ಇಲ್ಲವಾದಲ್ಲಿ ಸೆ.15 ಮಂಗಳವಾರ ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಸಂಚಾರ ತಡೆ ನಡೆಸಿ ಬೃಹತ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ ಪಾಷಾ ದಿದ್ದಿಗಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯ ಸರ್ಕಾರ, ಜಿಲ್ಲಾಡಳಿತ ರೈತರಿಂದ ಖರೀದಿಸಿದ ಹಿಂಗಾರು ಜೋಳದ ಬಾಕಿ ಮೊತ್ತವನ್ನು ಸೆ.14ರೊಳಗೆ ರೈತರ ಖಾತೆಗಳಿಗೆ ಜಮಾ ಮಾಡಬೇಕು ಇಲ್ಲವಾದಲ್ಲಿ ಸೆ.15 ಮಂಗಳವಾರ ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಸಂಚಾರ ತಡೆ ನಡೆಸಿ ಬೃಹತ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ ಪಾಷಾ ದಿದ್ದಿಗಿ ಎಚ್ಚರಿಕೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 5 ಸಾವಿರ ರೈತರಿಂದ ಜೋಳ ಖರೀದಿ ಮಾಡಿರುವ ಸರ್ಕಾರವು 130 ಕೋಟಿ ರು. ಹಣವನ್ನು ಕಳೆದ ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದು, ಈ ಕುರಿತು ಹಲವಾರು ಬಾರಿ ಹೋರಾಟಗಳನ್ನು ನಡೆಸಿದರು ಸರ್ಕಾರ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಒಂದು ತಿಂಗಳಾದರೂ ಶಾಸಕರ, ಅಧಿಕಾರಿಗಳ ಸಂಬಳ ನಿಂತಿರುವುದನ್ನು ಕೇಳಿದ್ದಾರೆ. ಆದರೆ ರೈತರು ಕಷ್ಟು ಪಟ್ಟು ಬೆಳೆದ ಜೋಳದ ಹಣವನ್ನು ವರ್ಷದಿಂದ ಬಿಡುಗಡೆ ಮಾಡದೇ ಸರ್ಕಾರ ರೈತ ದ್ರೋಹಿಯಾಗಿ ಮಾರ್ಪಟ್ಟಿದೆ. ಎಲ್ಲೆಡೆ ಬರಗಾಲ ಆವರಿಸಿದೆ, ಕೃಷಿಯನ್ನೇ ಅವಲಂಬಿಸಿರುವ ರೈತರ ಬದುಕು ದುಸ್ತರ ಗೊಂಡಿದೆ. ಇಂತಹ ಸಮಯದಲ್ಲಿ ಹಣದ ಅಗತ್ಯವಿದೆ ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವಲ್ಲಿ ಆಡಳಿತ ವರ್ಗ ವಿಫಲಗೊಂಡಿದೆ. ಚುನಾವಣೆ ಪೂರ್ವದಲ್ಲಿ ರೈತಪರ ಎನ್ನುವ ಸರ್ಕಾರಗಳು ನಂತರ ಯಾರ ಪರ ಎಂಬುವುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಶಾಸಕರ, ಅಧಿಕಾರಿಗಳ ಹಾಗೂ ನೌಕರರ ವೇತನಗಳು ಕಾಲ ಕಾಲಕ್ಕೆ ಪರಿಷ್ಕೃತಗೊಳ್ಳುತ್ತವೆ. ಆದರೆ, ರೈತರಿಗೆ ಸರ್ಕಾರ ಕೊಡುವ ಪರಿಹಾರದ ಮೊತ್ತದ ಪ್ರಮಾಣ ಮಾತ್ರ ಮೂರು ದಶಕಗಳಿಂದ ಪರಿಷ್ಕೃತಗೊಂಡಿಲ್ಲ. ಭತ್ತ, ಹತ್ತಿಗೆ ಎಕರೆಗೆ 8 ಸಾವಿರ ನಿಗದಿಪಡಿಸಿದ್ದು, ಇದು ಈ ಕಾಲದಲ್ಲಿ ಯಾವುದಕ್ಕೂ ಸಾಲದು, ಅದ್ದರಿಂದ ತಕ್ಷಣ ಪರಿಹಾರ ಮೊತ್ತದ ಪರಿಷ್ಕರಣೆಗೆ ಸರ್ಕಾರ ಮುಂದಾಗಬೇಕು ಮತ್ತು ಕೃಷಿ ಕೋಯ್ಲೋತ್ತರ ಖರ್ಚು-ವೆಚ್ಚಗಳನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ರಾಜಶೇಖರ ಗೌಡ, ರಾಮನಗೌಡ, ಪಾರ್ಶ್ವನಾಥ ಗೌಡ, ನಾಗನಗೌಡ, ಯಲ್ಲಪ್ಪ ಸೇರಿ ಇತರರು ಇದ್ದರು.