ಸಾರಾಂಶ
ಹುಬ್ಬಳ್ಳಿ: ಅಂಗವಿಕಲರ ಬಾಳಿಗೆ ಬೆಳಕು ನೀಡುವಂಥ ಕೆಲಸವನ್ನು ಮಜೇಥಿಯಾ ಫೌಂಡೇಷನ್ ಮಾಡುತ್ತಿದೆ. ಸರ್ಕಾರದಂತೆಯೇ ಫೌಂಡೇಷನ್ ಸೇವೆ ಮುಂದುವರಿಯಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ 128 ಅಂಗವಿಕಲರಿಗೆ ಕೃತಕ ಕೈ-ಕಾಲು ಜೋಡಣೆ ಶಿಬಿರದಲ್ಲಿ ಅವರು ಮಾತನಾಡಿದರು.ಸತತ 17 ವರ್ಷದಿಂದ ಅಂಗವಿಕಲರಿಗೆ ಕಲ್ಯಾಣ ಮಾಡುವುದರ ಜತೆಗೆ ಸಮಾಜ ಸೇವೆಯಲ್ಲಿ ಜಿತೇಂದ್ರ ಮಜೇಥಿಯಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಹೀನರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಆಲದ ಮರವಾಗಿ ಇತರರಿಗೆ ನೆರಳು ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ಫೌಂಡೇಷನ್ ಸ್ಥಾಪಿಸಲಾಗಿದೆ. ಬಡವರು, ದೀನ-ದಲಿತರಿಗೆ ಶಿಕ್ಷಣ, ಆರೋಗ್ಯ ಕೊಡುವ ಉದ್ದೇಶವನ್ನು ಹೊಂದಿದೆ. ಫೌಂಡೇಷನ್ ನೆರವು ಪಡೆಯಬಹುದು ಎಂದರು.ಡಾ. ಸಂದೀಪ ನೀರಲಗಿ ಅವರು ಅಂಗವಿಕಲರಿಗೆ ಆರೋಗ್ಯದ ಟಿಪ್ಸ್ಗಳನ್ನು ನೀಡಿದರು. ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಟ್ರಸ್ಟಿಗಳಾದ ಕಶ್ಯಪ ಮಜೇಥಿಯಾ, ಡಾ. ರಮೇಶ ಬಾಬು, ಡಾ. ವಿ.ಬಿ. ನಿಟಾಲಿ, ಎಚ್.ಆರ್. ಪ್ರಹ್ಲಾದರಾವ್, ಅಮರೇಶ ಹಿಪ್ಪರಗಿ, ಸಿಇಒ ಸುನಿಲಕುಮಾರ ಕುಕನೂರ, ಪ್ರಮುಖರಾದ ಶ್ರೀಧರ ಜೋಶಿ, ಡಾ. ಶಂಕರ ಕಮಟೆ, ಡಾ. ಕವಿತಾ ಮೊಹರೆ, ಡಾ. ಶ್ರೀಧರ ದಂಡಪ್ಪನವರ, ನವೀನ ಮಾಲಿನ್, ಶ್ವೇತಾ ಜೈನ್, ಬಾಲಚಂದ್ರ ಡಂಗನವರ, ರಜತ ಉಳ್ಳಾಗಡ್ಡಿಮಠ ಇತರರು ಇದ್ದರು.
--