ಬೆಂಡೋಣೆ ವಿಎಸ್‌ಎಸ್‌ಎನ್ ನಲ್ಲಿ ಭಾರಿ ಅಕ್ರಮ

| Published : Sep 26 2025, 01:00 AM IST

ಸಾರಾಂಶ

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು ೫೦ಕ್ಕೂ ಹೆಚ್ಚು ಬಡ ರೈತ ಜನರಿಗೆ ಸಹಕಾರ ಸಂಘದ ನಿಯಮ ಮೀರಿ ನಕಲಿ ಠೇವಣಿ ಬಾಂಡ್ ವಿತರಿಸಿ ವಂಚನೆ ಮಾಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು ೫೦ಕ್ಕೂ ಹೆಚ್ಚು ಬಡ ರೈತ ಜನರಿಗೆ ಸಹಕಾರ ಸಂಘದ ನಿಯಮ ಮೀರಿ ನಕಲಿ ಠೇವಣಿ ಬಾಂಡ್ ವಿತರಿಸಿ ವಂಚನೆ ಮಾಡಿರುವ ಘಟನೆ ನಡೆದಿದೆ.ತುಮಕೂರು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹಣದ ವಂಚನೆಯನ್ನು ಬೆಂಡೋಣೆ ವಿಎಸ್‌ಎಸ್‌ಎನ್ ವ್ಯಾಪ್ತಿಯಲ್ಲಿ ನಡೆದಿದ್ದು, ಸುಮಾರು ೭೦ ಲಕ್ಷ ರುಪಾಯಿ ವಂಚನೆ ಆಗಿರಬಹುದು ಎನ್ನಲಾಗಿದೆ. ಗ್ರಾಮಿಣ ಭಾಗದ ಬಡ ಜನರಿಗೆ ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಿ ಸುಮಾರು ೫೦ಕ್ಕೂ ಹೆಚ್ಚು ನಕಲಿ ಠೇವಣಿ ಬಾಂಡ್ ವಿತರಣೆ ಮಾಡಿರುವ ವಿಎಸ್‌ಎಸ್‌ಎನ್ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಆರ್ ರಮೇಶ್ ಮತ್ತು ಟೀಂ ನಿಂದ ನಕಲಿ ಠೇವಣಿ ಬಾಂಡ್ ವಿತರಣೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಮೀಣ ಭಾಗದ ಬಡ ಮಹಿಳೆಯರು ಮತ್ತು ಬಡ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆ ಬಟ್ಟೆಯನ್ನು ಕಟ್ಟಿ ತಮ್ಮ ಕೂಲಿ ಹಣದಿಂದ ಬಂದ ಅಲ್ಪ ಸ್ವಲ್ಪ ಕೂಡಿಟ್ಟ ಹಣವನ್ನು ವಿಎಸ್‌ಎಸ್ ಎನ್‌ನಲ್ಲಿ ಠೇವಣಿ ಇಟ್ಟಿದ್ದಾರೆ ಸಹಕಾರ ಸಂಘದ ಮೇಲಾಧಿಕಾರಿಗಳ ಕಣ್ಣು ತಪ್ಪಿಸಿ ನಕಲಿ ಠೇವಣಿ ಬಾಂಡ್‌ಗಳನ್ನು ಜನರಿಗೆ ನೀಡಿ ಯಾಮಾರಿಸಿರುವ ಘಟನೆ ಬೆಂಡೋಣೆ ವಿಎಸ್‌ಎಸ್‌ಎನ್ ಆಡಳಿತ ಮಂಡಳಿ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಆರ್ ರಮೇಶ ಕಾರ್ಯಲೋಪಗಳ ಬಗ್ಗೆ ಆಂತರಿಕ ವಿಚಾರಣೆಗೆ ಕಾಯ್ದಿರಿಸಿಕೊಂಡು ಮೇ.೧೫ ರಂದು ಅಮಾನತ್ತಿನ ಆದೇಶ ಮಾಡಲಾಗಿದೆ. ಸಹಕಾರ ಸಂಸ್ಥೆಯಲ್ಲಿ ತನಿಖೆ ನಡೆಸಿ ಅಕ್ರಮ ಸಾಬೀತು ಆದರೆ ರಮೇಶ್ ಅವರಿಗೆ ಸೇರಿದ ಆಸ್ತಿಗಳನ್ನು ಸಹಾಯಕ ನಿಬಂಧಕರು ಮುಟ್ಟುಗೋಲು ಹಾಕಿ ಕೊಳ್ಳಲು ಸಹಕಾರ ಸಂಸ್ಥೆಯ ಅಧಿಕಾರಿಗಳು ಸೂಚಿಸಿದ್ದಾರೆ.

ವಾರ್ಷಿಕ ಮಹಾಸಭೆಯಲ್ಲಿ ಮೇಲ್ವಿಚಾರಕ ತಿಮ್ಮರಾಜುಗೆ ಗೇರಾವ್.

ಬೆಂಡೋಣೆ ವಿಎಸ್‌ಎಸ್‌ಎನ್ ನಲ್ಲಿ ನಿಶ್ಚಿತ ಠೇವಣಿ ಹಣ ಹೂಡಿಕೆ ಮಾಡಿದ್ದ ಜನರ ಹಣವನ್ನು ತಕ್ಷಣವೇ ಬಡ್ಡಿ ಸಮೇತ ವಾಪಸ್ ಕೊಡಿಸಿ ಕೊಡಿಸಬೇಕು ಎಂದು ವಾರ್ಷಿಕ ಮಹಾಸಭೆಯಲ್ಲಿ ಮೇಲ್ವಿಚಾರಕ ತಿಮ್ಮರಾಜುಗೆ ಘೇರಾವ್ ಹಾಕಿದ ಗ್ರಾಹಕರು. ನಮಗೆ ಸೂಕ್ತ ನ್ಯಾಯ ಒದಗಿಸಿ ತಪ್ಪಿತಸ್ಥರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣರವರಲ್ಲಿ ಮನವಿ ಮಾಡಿದ್ದಾರೆ.

ಕೋಟ್;-ನಾನು ನನ್ನ ಮಗಳ ಮದುವೆಗಾಗಿ ವಿಎಸ್‌ಎಸ್‌ಎನ್ ನಲ್ಲಿ ಎರಡು ಲಕ್ಷ ಹಣವನ್ನು ಠೇವಣಿ ಮಾಡಿದ್ದೆ. ಸಿಇಒ ಮಾಡಿರುವ ಮೋಸಕ್ಕೆ ನನ್ನ ಕುಟುಂಬ ಈಗ ಬೀದಿಗೆ ಬಂದಿದೆ. ನನ್ನ ಹಣವು ಇಲ್ಲ ನನಗೆ ಸೇರಬೇಕಾದ ಠೇವಣಿ ಬಡ್ಡಿಯೂ ಇಲ್ಲ ನಾನು ಯಾರ ಬಳಿ ನ್ಯಾಯ ಕೇಳಬೇಕು. - ರಾಜಣ್ಣ. ಗೌಜಗಲ್ಲು ಗ್ರಾಮಸ್ಥ.ನನ್ನ ಮೊಮ್ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ನಾನು ಐದು ಲಕ್ಷ ರುಪಾಯಿಗಳನ್ನು ಇಲ್ಲಿ ಠೇವಣಿ ಇಟ್ಟಿದ್ದೆ. ನನಗೆ ನಕಲಿ ಠೇವಣಿ ಬಾಂಡ್ ನೀಡಿ ನನ್ನನು ವಂಚಿಸಿದ್ದಾರೆ. .ನನ್ನ ಕುಟುಂಬಕ್ಕೆ ಈಗ ನ್ಯಾಯ ಬೇಕಿದೆ ನನ್ನ ಮೊಮ್ಮಗಳನ್ನು ಪದವಿ ಮಾಡಿಸಬೇಕು ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣರಲ್ಲಿ ಮನವಿ ಮಾಡುತ್ತಿದ್ದೇನೆ.- ಸಿದ್ಧಲಿಂಗಮ್ಮ. ಮಲ್ಲೇಕಾವು ಗ್ರಾಮದ ಮಹಿಳೆ.

ವಿಎಸ್‌ಎಸ್‌ಎನ್ ನಲ್ಲಿ ನಕಲಿ ಠೇವಣಿ ಬಾಂಡ್‌ನಿಂದ ಅನ್ಯಾಯಕ್ಕೆ ಒಳಗಾದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಾವು ಮಾಹಿತಿ ತಿಳಿದ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು ಎಲ್ಲ ಠೇವಣಿದಾರರ ಹಣವನ್ನು ಶೀಘ್ರವೇ ವಾಪಸು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಾಜಿ ಕಾರ್ಯದರ್ಶಿ ಎಚ್ ಆರ್ ರಮೇಶ್ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದ ಮೊರೆ ಹೋಗಿ ಅವರಿಗೆ ಸೇರಿದ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ತಿಮ್ಮರಾಜು. ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೊರಟಗೆರೆ.