ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಸಿ
KannadaprabhaNewsNetwork | Published : Oct 17 2023, 12:45 AM IST
ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಸಿ
ಸಾರಾಂಶ
ಡಿಎಆರ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ
ಡಿಸಿ ಸಲಹೆಗಳೇನು? - ನ.1ರಂದು ಬೆಳಗ್ಗೆ 8ರಿಂದ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ - ಶ್ರೀ ಭುವನೇಶ್ವರಿದೇವಿ ಪ್ರತಿಮೆ ಅಲಂಕಾರ, ವಾಹನ ವ್ಯವಸ್ಥೆ ಕೈಗೊಳ್ಳಬೇಕು - ಇಲಾಖೆಗಳು ಟ್ಯಾಬ್ಲೋಗಳನ್ನು ತಯಾರಿಸಿ ಪ್ರದರ್ಶಿಸಬೇಕು - ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು - ಪ್ರಮುಖ ರಸ್ತೆಗಳಲ್ಲಿರುವ ವೃತ್ತಗಳಿಗೆ ಆಕರ್ಷಕ ವಿದ್ಯುತ್ ಅಲಂಕಾರ ಕೈಗೊಳ್ಳಬೇಕು - ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು, ಅಧಿಕಾರಿಗಳು ಹಾಜರಾಗಬೇಕು - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ನವೆಂಬರ್ 1 ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಈ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳು ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಿದ್ಧತೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಮುದ್ರಣಗೊಂಡ ಆಹ್ವಾನ ಪತ್ರಿಕೆಗಳನ್ನು ಸಮಾರಂಭದ ಅತಿಥಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ಕನ್ನಡ ಸಂಘಟನೆಗಳು ಹಾಗೂ ನಾಗರಿಕರಿಗೆ ಜಾರಿ ಮಾಡಲು ಸೂಚಿಸಿದರು. ನ.1ರಂದು ಬೆಳಗ್ಗೆ 8ರಿಂದ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಹೊರಡುವುದು. ಮೆರವಣಿಗೆಯಲ್ಲಿ ಪೊಲೀಸ್, ಹೋಂ ಗಾರ್ಡ್ಸ್, ಸೇವಾದಳ, ಎನ್ಸಿಸಿ ಬ್ಯಾಂಡ್, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಭಜನೆ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ತಲಾ ಎರಡು ಕಲಾ ತಂಡಗಳನ್ನು ಕಳುಹಿಸಿಕೊಂಡುವಂತೆ ಅವರು ತಿಳಿಸಿದರು. ಭುವನೇಶ್ವರಿದೇವಿ ಪ್ರತಿಮೆ ಅಲಂಕಾರ ಮತ್ತು ವಾಹನ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು ಮಾಡಬೇಕು. ಧ್ವಜಾರೋಹಣಕ್ಕೆ ಅಗತ್ಯ ವ್ಯವಸ್ಥೆಗಳಾದ ಧ್ವಜ, ಧ್ವಜಸ್ತಂಭ, ವೇದಿಕೆ ಅಲಂಕಾರ ಇತ್ಯಾದಿ ವ್ಯವಸ್ಥೆಯನ್ನು ಪಾಲಿಕೆ ಆಯುಕ್ತರು, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಕೈಗೊಳ್ಳಬೇಕು. ಸ್ವಾಗತ ಕಮಾನು, ಹೂವಿನ ತೋರಣ, ಅತಿಥಿ ಸತ್ಕಾರ, ಪೂರ್ವ ಸಿದ್ಧತೆಯನ್ನು ಸಾರಿಗೆ ಉಪ ಆಯುಕ್ತರು, ನಿರ್ಮಿತಿ ಕೇಂದ್ರ ಮತ್ತು ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯವರು ನಿರ್ವಹಿಸಬೇಕು ಎಂದು ಹೇಳಿದರು. ಕೃಷಿ ಇಲಾಖೆ, ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕೆಎಸ್ಆರ್ಟಿಸಿ, ಆರೋಗ್ಯ ಇಲಾಖೆಯವರು ಟ್ಯಾಬ್ಲೋಗಳನ್ನು ತಯಾರಿಸಿ ಪ್ರದರ್ಶಿಸುವಂತೆ ಸೂಚಿಸಿದರು. ಶಾಲಾ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ರೂಟ್ ಮ್ಯಾಪ್ ತಯಾರಿಸಿ ನಿರ್ವಹಿಸಬೇಕು. ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಮೈದಾನದಲ್ಲಿ ಷಾಮಿಯಾನ, ಉತ್ತಮ ಸೌಂಡ್ ಸಿಸ್ಟಂ ಇತರೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ, ಆಸನ ವ್ಯವಸ್ಥೆಯನ್ನು ತಹಸೀಲ್ದಾರರು, ಪಾಲಿಕೆಯವರು ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪಾಲನೆ ಮತ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಿ ಹಂಚಿಕೆಯನ್ನು ಶಿಮುಲ್, ಪಾಲಿಕೆ, ಡಿಡಿಪಿಐ ನೋಡಿಕೊಳ್ಳುವಂತೆ ತಿಳಿಸಿದರು. ಪ್ರಮುಖ ರಸ್ತೆಗಳಲ್ಲಿಯ ವೃತ್ತಗಳಿಗೆ ಆಕರ್ಷಕ ವಿದ್ಯುತ್ ಅಲಂಕಾರವನ್ನು ಮೆಸ್ಕಾಂ, ಪಾಲಿಕೆ ಆಯುಕ್ತರು, ಸೂಡಾ ಆಯುಕ್ತರು ಹಾಗೂ ಧ್ವನಿವರ್ಧಕದ ಮೂಲಕ ಕನ್ನಡ ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡುವ ವವಸ್ಥೆಯನ್ನು ಅಬಕಾರಿ ಇಲಾಖೆ, ನೋಂದಣಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯವರು ನೋಡಿಕೊಳ್ಳಬೇಕೆಂದು ತಿಳಿಸಿದರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ, ಪಾಲಿಕೆ ಆಯುಕ್ತರು ನಿರ್ವಹಿಸಬೇಕು. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ಜಿಲ್ಲಾ ಸರ್ಜನ್ರು ಹಾಗೂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನಿರ್ವಹಿಸಬೇಕು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಸಮಾರಂಭಕ್ಕೆ ಹಾಜರಾಗುವಂತೆ ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎಸಿ ಸತ್ಯನಾರಾಯಣ್ ಸೇರಿದಂತೆ ಹಲವರು ಇದ್ದರು. - - - -16ಎಸ್ಎಂಜಿಕೆಪಿ01: ರಾಜ್ಯೋತ್ಸವ ಸಿದ್ಧತೆ ಕುರಿತು ಸೋಮವಾರ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಲಹೆ-ಸೂಚನೆ ನೀಡಿದರು.