ಉಡುಪಿ: ಇಲ್ಲಿನ ಅನಂತ ವೈದಿಕ ಕೇಂದ್ರದಲ್ಲಿ ಪ್ರಸಿದ್ಧ ರಂಗಕರ್ಮಿ ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ 2 ದಿನಗಳ ಕೊಂಕಣಿ ರಂಗಾಂತರ’ರಂಗಭೂಮಿ ಕಾರ್ಯಾಗಾರ ಮೇ 30ರಂದು ಒಳಕಾಡು ಪದ್ಮಾವತಿ ಸಭಾ ಸದನದಲ್ಲಿ ತರಂಗ ವಾರ ಪತ್ರಿಕೆ ಸಂಪಾದಕಿ ಸಂಧ್ಯಾ ಪೈ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೊಂಕಣಿ ಸಾಹಿತ್ಯ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿ. ಮಕ್ಕಳಿಗೆ ಕಲೆ, ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದರೆ ಅವರು ಕೂಡ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಸರಗೋಡು ಚಿನ್ನಾ ಮಾತನಾಡಿ, ಕೊಂಕಣಿ ಭಾಷೆ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯ ಹಮ್ಮಿಕೊಂಡಿದ್ದು, ರಂಗ ಕ್ಷೇತ್ರದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಮಾಜ ಬಾಂಧವರು ಕೈಜೋಡಿಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾದ ಪುತ್ತೂರು ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ್ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ನಾಯಕ್, ದೈವಜ್ಞ ಬ್ರಾಹ್ಮಣ ಸಮಾಜ ಉಡುಪಿ ಅಧ್ಯಕ್ಷ ಶಿವಶಂಕರ ಶೇಟ್ ಆಗಮಿಸಿದ್ದರು. ಸಮಾಜ ಸೇವಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವ ಅಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ರಂಗಾತರಂಗ ಸಂಚಾಲಕ ಶಶಿಭೂಷಣ ಕಿಣಿ ಉಪಸ್ಥಿತರಿದ್ದರು. ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೇಮೂ ಚೆಂಪಿ ರಾಮಚಂದ್ರ ಭಟ್ ಸ್ವಾಗತಿಸಿದರು. ಕೊಂಕಣಿ ಮಾತನಾಡುವ ವಿವಿಧ ಸಮಾಜದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.