ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಿ: ಡಾ.ಕುಮಾರ

| Published : Dec 16 2023, 02:00 AM IST / Updated: Dec 16 2023, 02:01 AM IST

ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಿ: ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಸಿರು ನ್ಯಾಯಪೀಠ ನಿರ್ದೇಶನಗಳ ಅನುಷ್ಠಾನದ ಪ್ರಗತಿ ಪರಿಶೀಲನೆಯಲ್ಲಿ ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ಬೇರ್ಪಡಿಸಿ ಗೊಬ್ಬರವನ್ನು ತಯಾರಿಸಿ ನಿಯಮಾನುಸಾರ ರೈತರಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳ ೨೦೧೬ರ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಪೀಠದ ನಿರ್ದೇಶನಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಬ್ರಾಂಡ್ ರೂಪ ಕೊಡಿ:

ಕಸವನ್ನು ರಸಮಾಡಿ ನಗರ ಸ್ಥಳೀಯ ಸಂಸ್ಥೆಗಳು ತಯಾರಿಸಿದ ಗೊಬ್ಬರವನ್ನು ಬ್ರಾಂಡಿಂಗ್ ಮಾಡಲು ಕ್ರಮ ವಹಿಸಬೇಕು. ಪ್ರತಿ ತಿಂಗಳು ಮಾರಾಟ ಮಾಡಿದ ಗೊಬ್ಬರದ ಪ್ರಮಾಣ ಮತ್ತು ಅದರಿಂದ ಬರುವ ಆದಾಯದ ವರದಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವುದು. ತಯಾರಿಸಿದ ಗೊಬ್ಬರವನ್ನು ಅಧಿಕೃತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನಿಯಮಾನುಸಾರ ಮಾರಾಟ ಮಾಡಿ ಎಂದು ಸೂಚಿಸಿದರು.

ಪೌಲ್ಟ್ರಿ ತ್ಯಾಜ್ಯ ಸಂಗ್ರಹಿಸಿ:

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪೌಲ್ಟ್ರಿ ತ್ಯಾಜ್ಯವನ್ನು ನಿಯೋಜಿತ ಖಾಸಗಿ ಸಂಗ್ರಹಣಾದಾರರಿಗೆ ನೀಡಿ ಅದನ್ನು ಉಪಯೋಗ ಮಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ಮಾಹೆಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಬೈಲಾದಂತೆ ಸೇವಾ ಶುಲ್ಕವನ್ನು ಸಂಗ್ರಹಿಸಿ ವರದಿ ಸಲ್ಲಿಸಿ ಎಂದರು.

ಘನತ್ಯಾಜ್ಯ ವಸ್ತು ನಿರ್ವಹಣೆಯ ಯಂತ್ರೋಪಕರಣ ಅಳವಡಿಕೆ ಹಾಗೂ ನಿರ್ವಹಣೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.

ಕುಡಿಯುವ ನೀರು ಪರೀಕ್ಷಿಸಿ:

ಸರ್ಕಾರಿ ಹಾಗೂ ಖಾಸಗಿ ಕುಡಿಯುವ ನೀರು ಶುದ್ಧೀಕರಣ ಘಟಕಗಳ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ನಿಗದಿತ ೧೨ ಮಾನದಂಡಗಳ ಪ್ರಕಾರ ಪರೀಕ್ಷೆ ಮಾಡಿಸಿ. ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿ ಪ್ರತಿ ವಾರಕ್ಕೊಮ್ಮೆ ಕಚ್ಚಾ ನೀರು ಮತ್ತು ಶುದ್ಧೀಕರಣ ಘಟಕದ ಶುದ್ಧ ನೀರಿನ ಮಾದರಿಯನ್ನು ಪರೀಕ್ಷಿಸಿ. ಸಾರ್ವಜನಿಕ ಶೌಚಾಲಯಗಳು ಉಪಯೋಗಕ್ಕೆ ಯೋಗ್ಯವಾಗಿದೆಯೇ ಎಂದು ಪರಿಶೀಲಿಸಿ ಎಂದರು.

ಸಭೆಯಲ್ಲಿ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಗರಸಭೆ ಆಯುಕ್ತ ಆರ್.ಮಂಜುನಾಥ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.