ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹಾಯ್ದು ಹೋಗುವ ಸರ್ವಿಸ್‌ ರಸ್ತೆಗಳನ್ನು ಆಯಾಯ ಗ್ರಾಮಗಳ ಜನರ ಅಪೇಕ್ಷೆಯಂತೆ ಮಾಡಿಕೊಡಬೇಕು ಎಂದು ಸಂಸದ ಗೋವಿಂದ ಕಾರಜೋಳ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಸಿರಿಗೆರೆ : ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹಾಯ್ದು ಹೋಗುವ ಸರ್ವಿಸ್‌ ರಸ್ತೆಗಳನ್ನು ಆಯಾಯ ಗ್ರಾಮಗಳ ಜನರ ಅಪೇಕ್ಷೆಯಂತೆ ಮಾಡಿಕೊಡಬೇಕು ಎಂದು ಸಂಸದ ಗೋವಿಂದ ಕಾರಜೋಳ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ಸಮೀಪದ ಚಿಕ್ಕಬೆನ್ನೂರು ಹಾಗೂ ಕೊಳಹಾಳ್‌ ಗ್ರಾಮದ ಬಳಿ ಇರುವ ಸರ್ವಿಸ್‌ ರಸ್ತೆಗಳನ್ನು ವೀಕ್ಷಿಸಿದ ನಂತರ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು.

ಅವೈಜ್ಞಾನಿಕ ಸರ್ವಿಸ್‌ ರಸ್ತೆಗಳು:

ಈಗಾಗಲೇ ನಿರ್ಮಾಣಗೊಂಡಿರುವ ಸರ್ವಿಸ್‌ ರಸ್ತೆಗಳು ತೀರಾ ಅವೈಜ್ಞಾನಿಕವಾಗಿವೆ. ಅವು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಿಲ್ಲ. ಸಿರಿಗೆರೆ ಕಡೆಗೆ ಸಂಚರಿಸುವ ವಾಹನಗಳು ಸುಮಾರು 3.5 ಕಿ.ಮೀ. ದೂರದ ಚಿಕ್ಕಬೆನ್ನೂರು ಬಳಿ ಸರ್ವಿಸ್‌ ರಸ್ತೆ ಬಳಸುವಂತೆ ಮಾಡಲಾಗಿದೆ. ಅಲ್ಲಿನ ಒಂದು ಕಿ.ಮೀ. ರಸ್ತೆಯಲ್ಲಿ ೧೩ ರಸ್ತೆ ತಡೆಗಳನ್ನು ಹಾಕಲಾಗಿದೆ. ಇದು ಪ್ರಯಾಣಿಕರಿಗೆ ತೀರಾ ತೊಂದರೆಯಾಗಿದೆ ಎನ್ನುವ ಸಂಗತಿಯನ್ನು ಜನರು ಸಂಸದರ ಗಮನಕ್ಕೆ ತಂದರು.

ದ್ವಿಪಥದ ರಾಷ್ಟ್ರೀಯ ಹೆದ್ದಾರಿ ಇದ್ದಾಗ ಹೇಗೆ ಸರ್ವಿಸ್‌ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತೋ, ಅದೇ ಸ್ಥಳದಲ್ಲಿ ಅದನ್ನು ಮುಂದುವರೆಸದೆ ಬೇರೊಂದು ಸ್ಥಳದಲ್ಲಿ ಸರ್ವಿಸ್‌ ರಸ್ತೆಗೆ ಇಳಿಯುವಂತೆ ಮಾಡಲಾಗಿದೆ. ಮೊದಲಿನಂತೆಯೇ ಅದನ್ನು ಮಾಡಿಕೊಡಬೇಕು ಎಂದು ಸಂಸದರಿಗೆ ಮನವಿ ಮಾಡಿದರು.ರಸ್ತೆ ನವೀಕರಣ ಮಾಡುವಾಗ ಜನರ ನಿರೀಕ್ಷೆಗಳನ್ನು ಗಮನಿಸಬೇಕಿತ್ತು. ಈಗ ಇವುಗಳನ್ನು ಪರಿಹರಿಸಬೇಕಾಗಿದೆ. 

ಆದುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿದ ಸಂಸದರು, ಈ ಕಾಮಗಾರಿಗೆ ತಕ್ಕ ಪ್ರಸ್ತಾವನೆಯನ್ನು ಸಿದ್ಧಗೊಳಿಸಿ ಸಲ್ಲಿಸಬೇಕೆಂದು ಸೂಚಿಸಿದರು.ಚಿಕ್ಕಬೆನ್ನೂರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘದ ಕಟ್ಟಡ, ಗೋಡೌನ್‌ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ೨೦ ಲಕ್ಷ ರು.ಗಳನ್ನು ನೀಡಬೇಕು ಎಂದು ಅಧ್ಯಕ್ಷ ಗೌಡ್ರ ಬಿ.ಜಿ. ತೀರ್ಥಪ್ಪ ಮನವಿ ಸಲ್ಲಿಸಿದರು. ಸಂಸದರು ರೈತರಿಗೆ ನೆರವಾಗುವ ಉದ್ದೇಶದ ಈ ಕಟ್ಟಡಕ್ಕೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಹೆದ್ದಾರಿ ಪ್ರಾಧಿಕಾರದ ಗೌರನ್‌ ಗಡ್ಡಿಪಾಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡ ಮುರಳಿ, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್‌ ಕುಮಾರ್‌, ಸಿರಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಮೋಹನ್‌, ಪೆಟ್ರೋಲ್‌ ಬಸವರಾಜ್‌, ಮಾಧುರಿ ಗಿರೀಶ್‌, ಜಿ.ಬಿ.ತೀರ್ಥಪ್ಪ, ಕೊಳಹಾಳ್‌ ರಾಜಣ್ಣ ಮತ್ತಿತರರಿದ್ದರು.

ಸರ್ಕಾರಿ ಬಸ್‌ ಸಿರಿಗೆರೆ ಸರ್ಕಲ್ಲಿನಲ್ಲಿ ನಿಲುಗಡೆಗೆ ಕ್ರಮ ತೆಗೆದುಕೊಳ್ಳಿ

ಚಿತ್ರದುರ್ಗ : ದಾವಣಗೆರೆ ಮಧ್ಯೆ ಇರುವ ಸಿರಿಗೆರೆ ಸರ್ಕಲ್ಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ನಿಲ್ಲುತ್ತಿಲ್ಲ. ಇದಕ್ಕಾಗಿ ಹಲವು ಬಾರಿ ಚಳುವಳಿಗಳೇ ಆಗಿವೆ. ಪ್ರತಿಷ್ಠಿತ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಹೋಗಿ ಬರುವ ಭಕ್ತರಿಗೆ, ಅಲ್ಲಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನಾನುಕೂಲವಾಗಿದೆ. ಸಂಸದರು ರಾಜ್ಯ ಸಾರಿಗೆ ಬಸ್‌ಗಳು ಸಿರಿಗೆರೆ ಸರ್ಕಲ್ಲಿನಲ್ಲಿ ನಿಲುಗಡೆಗೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.