ಇಂದಿನ ಸ್ಪರ್ಧಾತ್ಮಕ ಯಗದಲ್ಲಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ವಿಷಯಜ್ಞಾನದ ಜೊತೆಗೆ ಕೌಶಲ್ಯಗಳು ಬೇಕು. ಅವುಗಳ ಸಮರ್ಪಕ ಬಳಕೆಯಾದಾಗ ಅವಕಾಶಗಳು ಬರಲು ಸಾಧ್ಯ ಎಂದು ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮಾರುತಿ ಪಾಟೋಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ಸ್ಪರ್ಧಾತ್ಮಕ ಯಗದಲ್ಲಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ವಿಷಯಜ್ಞಾನದ ಜೊತೆಗೆ ಕೌಶಲ್ಯಗಳು ಬೇಕು. ಅವುಗಳ ಸಮರ್ಪಕ ಬಳಕೆಯಾದಾಗ ಅವಕಾಶಗಳು ಬರಲು ಸಾಧ್ಯ ಎಂದು ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮಾರುತಿ ಪಾಟೋಳಿ ಹೇಳಿದರು.ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತಾವು ಆಯ್ಕೆ ಮಡಿಕೊಂಡ ವಿಷಯದ ಬಗ್ಗೆ ಗೌರವವಿರಬೇಕು. ಇತಿಹಾಸದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಬೇಕು. ತಮ್ಮತನವನ್ನು ಗಟ್ಟಿಗೊಳಿಸಿ ತಮ್ಮಲ್ಲಿನ ಶಕ್ತಿ ಬಿಟ್ಟುಕೊಡದೇ ಪರಿಶ್ರಮದಿಂದ ಗುರಿಮುಟ್ಟಬೇಕೆಂದರು.ಸ್ವ-ಸಾಮರ್ಥ್ಯದ ಮೇಲೆ ನಂಬಿಕೆಯನ್ನಿಟ್ಟು ವಿಚಾರಶಕ್ತಿ ಬೆಳೆಸಿಕೊಳ್ಳಬೇಕು. ಸಂವಹನ ಕಲೆ ಬೆಳೆಸಿಕೊಳ್ಳುವುದರ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಂಟೀ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ ಮಾತನಾಡಿ, ಸಮಯ ಮತ್ತು ಅವಕಾಶಗಳ ಸದ್ಬಳಕೆಗೆ ಸಹನೆ ಬೇಕು. ಜೀವನದಲ್ಲಿ ಯಶ ಸಾಧನೆಗೆ ಪ್ರಯತ್ನ ಬೇಕು. ಉತ್ತಮ ಬದುಕಿಗೆ ಮೌಲ್ಯ ಹಾಗೂ ಸಂಸ್ಕಾರ ಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ, ವ್ಯಕ್ತಿಯ ವರ್ತನೆಯನ್ನು ಪರಿವರ್ತಿಸುವಲ್ಲಿ ಶಿಕ್ಷಣ ಒಂದು ಉತ್ತಮ ಸಾಧನವಾಗಿದೆ. ವ್ಯಕ್ತಿಯ ಅಂತಿಮ ಗುರಿಯಾಗಿರುವ ವ್ಯಕ್ತಿತ್ವದ ವಿಕಾಸವನ್ನು ಇದರ ಮೂಲಕ ಸಾಧಿಸಬಹುದಾಗಿದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬರಬೇಕೆಂದರು.
ವಿದ್ಯಾರ್ಥಿಗಳ ಪರವಾಗಿ ಜ್ಯೋತಿ ಬಿಳಿಜಾಡರ ಮತ್ತು ಎಚ್.ಡಿ. ಮುದ್ದಾಪೂರ ಮಾತನಾಡಿದರು. ಬಸಮ್ಮ ಪ್ರಾರ್ಥಿಸಿದರು. ಸುಷ್ಮಿತಾ ಹಂಡರಗಲ್ ಸ್ವಾಗತಿಸಿದರು. ಐಶ್ವರ್ಯ ಲೋಖಂಡೆ ಪರಿಚಯಿಸಿದರು. ಅಭಿಷೇಕ ದಾಸಣ್ಣವರ ವಂದಿಸಿದರು. ಪ್ರಶಾಂತ ಭಜಂತ್ರಿ ನಿರೂಪಿಸಿದರು. ಸಂಯೋಜಕ ಎಂ.ಡಿ. ಕೋರವಾರ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು.ವಿಜ್ಞಾನ-ತಂತ್ರಜ್ಞಾನ ಸಹಿತ ಹಲವು ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ನಮ್ಮಲ್ಲಿನ ಜ್ಞಾನ ಹಾಗೂ ಕೌಶಲಗಳನ್ನು ಪರಿಷ್ಕರಿಸಿಕೊಳ್ಳಬೇಕು. ಉದ್ಯೋಗ ಪಡೆಯಲು ಪ್ರಮಾಣಪತ್ರಗಳು ಅರ್ಹತೆಯ ಮಾನದಂಡಗಳಾಗುತ್ತವೆ. ಆದರೆ ನಡೆ-ನುಡಿ-ವ್ಯಕ್ತಿತ್ವದಿಂದ ಯೋಗ್ಯತೆ ನಿರ್ಧಾರವಾಗುತ್ತದೆ ಎಂಬ ಅಂಶವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.ಹಣ ಸಂಪಾದನೆಯ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಬೇಕು. ಜೀವನದಲ್ಲಿ ಮಾಡುವ ಸಾಧನೆಯೇ ವಿದ್ಯಾರ್ಥಿಗಳು ಮಾತೃಸಂಸ್ಥೆಗೆ ನೀಡುವ ದೊಡ್ಡ ಕೊಡುಗೆ.
- ಡಾ.ಮಾರುತಿ ಪಾಟೋಳಿ ಉಪನ್ಯಾಸಕರು