ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

| Published : Jun 13 2025, 02:27 AM IST

ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ನೂರು ವರ್ಷಗಳ ಜಗತ್ತಿನ ಪ್ರಯಾಣಕ್ಕಾಗಿ ಬೇಕಾಗಿರುವ ಜ್ಞಾನ ಪಡೆದುಕೊಳ್ಳಲು ಅಕ್ಷರಾಭ್ಯಾಸ ಮಾಡಿಸಬೇಕು. ಮರೆಯಲಾಗದ, ಯಾರಿಂದಲೂ ನಾಶಪಡಿಸಲಾಗ ವಿದ್ಯೆಯೇ ಅಕ್ಷರ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠ ಪ್ರವಚನಗಳು ಅರ್ಥವಾಗಿದ್ದರೆ ಶಿಕ್ಷಕರನ್ನು ವಿದ್ಯಾರ್ಥಿಗಳು ಪ್ರಶ್ನಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಕ್ಷರ ಆಶೀರ್ವಾದ, ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ನಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲಿರುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶ, ಸ್ವಾತಂತ್ರವನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಸಮಾಜದಲ್ಲಿ ನಾಚಿಕೆ, ಅವಮಾನ ಅನುಭವಿಸಬೇಕಾಗುತ್ತದೆ ಎಂದರು.

ಮುಂದಿನ ನೂರು ವರ್ಷಗಳ ಜಗತ್ತಿನ ಪ್ರಯಾಣಕ್ಕಾಗಿ ಬೇಕಾಗಿರುವ ಜ್ಞಾನ ಪಡೆದುಕೊಳ್ಳಲು ಅಕ್ಷರಾಭ್ಯಾಸ ಮಾಡಿಸಬೇಕು. ಮರೆಯಲಾಗದ, ಯಾರಿಂದಲೂ ನಾಶಪಡಿಸಲಾಗ ವಿದ್ಯೆಯೇ ಅಕ್ಷರ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠ ಪ್ರವಚನಗಳು ಅರ್ಥವಾಗಿದ್ದರೆ ಶಿಕ್ಷಕರನ್ನು ವಿದ್ಯಾರ್ಥಿಗಳು ಪ್ರಶ್ನಿಸಬೇಕು, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಶಿಸ್ತು, ಸಂಯಮ ಬೆಳೆಸಿಕೊಂಡು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯೂ ಉತ್ತಮ ಪರಿಸರದಿಂದ ಕೂಡಿದೆ. ಈ ಪರಿಸರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ ಎಂದು ಬಣ್ಣಿಸಿದರು.

ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಮಕ್ಕಳು ಓದುವುದಕ್ಕೆ ಪೋಷಕರೇ ಅಡ್ಡಗಾಲಾಗಿದ್ದರು, ಶಾಲೆಗೆ ಓದಲು ಹೋಗುವ ಮಕ್ಕಳನ್ನು ನೋಡಿ ಲೇವಡಿ ಮಾಡುವವರು ಹೆಚ್ಚಾಗಿದ್ದರು. ಆದರೀಗ ಕಾಲ ಬದಲಾಗಿದೆ. ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ, ಪೋಷಕರು ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಓದಿಸಲು ಮುಂದಾಗುತ್ತಿದ್ದಾರೆ ಎಂದರು.

ಪ್ರೊ.ಎಂ.ಪಂಚಲಿಂಗೇಗೌಡ ಮಾತನಾಡಿ, ಸಂಸ್ಥೆಯೂ ಆರಂಭಗೊಂಡು 37 ವರ್ಷಗಳನ್ನು ಪೂರೈಸಿದೆ. 31 ಅಂಗ ಸಂಸ್ಥೆಗಳನ್ನು ಹೊಂದಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ರಾಷ್ಟ್ರೀಯತೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಗುಣಗಳನ್ನು ಬೆಳೆಸುವ ಕೆಲಸ ಮಾಡಿದ್ದೇವೆ ಎಂದರು.

ಇದೇ ವೇಳೆ ಭಾರತೀಯ ಖೋ-ಖೋ ವಿಶ್ವಕಪ್ ವಿಜೇತ ತಂಡ ಆಟಗಾರ್ತಿ ಶಾಲೆ ವಿದ್ಯಾರ್ಥಿನಿ ಬಿ.ಚೈತ್ರ, ಅಮೂಲ್ಯ, ವಿದ್ಯಾರ್ಥಿ ಎಂ.ಕೆ. ಗೌತಮ್, ಸೇರಿದಂತೆ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಭೇಟಿಕೊಟ್ಟು ಶುಭಹಾರೈಸಿದರು.

ಸಮಾರಂಭದಲ್ಲಿ ಕೊಮ್ಮೇರಹಳ್ಳಿ ಶಾಖಾಮಠದ ಪೀಠಾಧ್ಯಕ್ಷ ಶ್ರೀಪುರುಷೋತ್ತಮನಂದನಾಥಸ್ವಾಮೀಜಿ, ಸಂಸ್ಥೆ ಅಧ್ಯಕ್ಷ ಪಿ.ಹೊನ್ನರಾಜು, ಮಾಜಿ ಅಧ್ಯಕ್ಷ ಶ್ರೀನಿವಾಸ್, ಟ್ರಸ್ಟ ಶಾರಧಮ್ಮ, ಆಡಳಿತಾಧಿಕಾರಿ ಅಕ್ಷಯ್, ಗೌತಮ್, ಡಿ.ಎಸ್.ದೇವರಾಜು, ಕೆ.ಕುಬೇರ, ಪ್ರಾಂಶುಪಾಲ ಶ್ರೀಕಾಂತ್ ಸೇರಿದಂತೆ ಶಿಕ್ಷಕ ವೃಂದವರು ಹಾಜರಿದ್ದರು.