ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಿರ್ವಹಿಸಿ-ಜಿಲ್ಲಾಧಿಕಾರಿ

| Published : Apr 07 2024, 01:54 AM IST

ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಿರ್ವಹಿಸಿ-ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸೆಕ್ಟರ್ ಅಧಿಕಾರಿಗಳು ಸರಿಯಾಗಿ ಮನನ ಮಾಡಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಮತದಾನ ಪ್ರಕ್ರಿಯೆ ಸಂಪೂರ್ಣ ಮೇಲ್ವಿಚಾರಣೆ ಮೂಲಕ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ ಸುಗಮವಾಗಿ ಚುನಾವಣೆ ನಡೆಸಲು ಸಿದ್ಧರಾಗಿ.

ಹಾವೇರಿ: ಮತದಾನ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಸಂಶಯ ಹಾಗೂ ಗೊಂದಲಗಳಿಗೆ ಎಡೆಮಾಡಿಕೊಡಬಾರದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸೆಕ್ಟರ್ ಅಧಿಕಾರಿಗಳು ಸರಿಯಾಗಿ ಮನನ ಮಾಡಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಮತದಾನ ಪ್ರಕ್ರಿಯೆ ಸಂಪೂರ್ಣ ಮೇಲ್ವಿಚಾರಣೆ ಮೂಲಕ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ ಸುಗಮವಾಗಿ ಚುನಾವಣೆ ನಡೆಸಲು ಸಿದ್ಧರಾಗಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮತದಾನ ದಿನದ ಪ್ರಕ್ರಿಯೆಗಳ ಕುರಿತಂತೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.ಸೆಕ್ಟರ್ ಅಧಿಕಾರಿಗಳಿಗೆ ದಂಡಾಧಿಕಾರಿಗಳ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಮತಗಟ್ಟೆಗಳ ಪೂರ್ಣ ಸಿದ್ಧತೆ, ಮತದಾನದ ಪ್ರಕ್ರಿಯೆಗಳಿಗೆ ಅಗತ್ಯವಾದ ಸಿದ್ಧತೆ, ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ, ಮೇಲ್ವಿಚಾರಣೆ, ಮಾರ್ಗದರ್ಶನಕ್ಕಾಗಿ ಈಗಾಗಲೇ ಚುನಾವಣಾ ಆಯೋಗದ ಕೈಪಿಡಿಯನ್ನು ನೀಡಲಾಗಿದೆ. ಎರಡು ಸುತ್ತಿನ ತರಬೇತಿ ನೀಡಿ, ತಮ್ಮ ಕರ್ತವ್ಯಗಳನ್ನು ವಿವರಿಸಲಾಗಿದೆ. ಇನ್ನೂ ಯಾವುದಾದರೂ ಸಂಶಯ, ಪ್ರಶ್ನೆಗಳಿದ್ದರೆ ಮತ್ತೊಂದು ತರಬೇತಿ ಮೂಲಕ ಸ್ಪಷ್ಟ ಪಡಿಸಲಾಗುವುದು. ಸರಿಯಾಗಿ ಅರ್ಥಮಾಡಿಕೊಂಡು ಪಾರದರ್ಶಕವಾಗಿ ಚುನಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಯಾವುದೇ ಸಂದೇಹ ಇದ್ದರೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಷ್ಟನೆ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.ಹವಾಮಾನ ಅತ್ಯಂತ ಪ್ರತಿಕೂಲವಾಗಿರುವುದರಿಂದ ಅತ್ಯಂತ ಬಿಸಿಲು ಇರುವುದರಿಂದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳಿಗೆ ಕುಡಿಯುವ ನೀರು, ಊಟ, ಉಪಾಹಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಬೇಕು. ಒಂದೊಮ್ಮೆ ಮತದಾನದ ದಿನ ಮಳೆಯಾಗುವ ಸಂಭವ ಉಂಟಾದರೆ ಸುರಕ್ಷಿತವಾಗಿ ಮತದಾನ ಯಂತ್ರಗಳ ಸಾಗಾಣಿಕೆ ಹಾಗೂ ಮತದಾನ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ನಿಯೋಜಿತ ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿದ್ಯುನ್ಮಾನ ಮತ ಯಂತ್ರಗಳನ್ನು ಸುರಕ್ಷಿತವಾಗಿ ಮತಗಟ್ಟೆಗಳಿಗೆ ಸಾಗಾಣಿಕೆ ಮಾಡಬೇಕು. ಮೇ ೭ರಂದು ಮತದಾನ ನಡೆಯಲಿದ್ದು, ಹಿಂದಿನ ದಿನ ಆಯೋಗದ ಮಾರ್ಗಸೂಚಿಯಂತೆ ಮತಗಟ್ಟೆಗಳ ಸಿದ್ಧತೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮತಯಂತ್ರಗಳಿಗೆ ಬಿಸಿಲು ಬೀಳದಂತೆ ಕ್ರಮವಹಿಸಬೇಕು. ಕಿಟಕಿಯ ಬಳಿ ವಿವಿಪ್ಯಾಟ್, ವೋಟಿಂಗ್ ಕಂಪಾರ್ಟ್‌ಮೆಂಟ್ ಇಡದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಅರಿವಿರಬೇಕು. ಇವಿಎಂ ಮತ್ತು ವಿವಿಪ್ಯಾಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ಚುನಾವಣಾ ಏಜೆಂಟರುಗಳ ನೇಮಕ, ಮತಗಟ್ಟೆ ವ್ಯಾಪ್ತಿ ಗುರುತಿಸುವಿಕೆ, ಮತದಾನಕ್ಕೆ ಮತದಾರರ ಗುರುಪತ್ರ ಪರಿಗಣಿಸುವಿಕೆ, ಮತದಾನದ ಗೌಪ್ಯತೆ ಕಾಪಾಡುವುದು ಸೇರಿದಂತೆ ಅತ್ಯಂತ ಪಾರದರ್ಶಕವಾಗಿ ಯಾವುದೇ ಸಂಶಯ, ಗೊಂದಲಗಳಿಗೆ ಅವಕಾಶ ನೀಡದಂತೆ ಪಕ್ಷಾತೀತವಾಗಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಮತಗಟ್ಟೆಗಳಲ್ಲಿ ಏಜೆಂಟರು, ಯಾವುದೇ ಪಕ್ಷದ ಚಿಹ್ನೆ, ಬಾವುಟ ಹಾಗೂ ಅಭ್ಯರ್ಥಿಯ ಭಾವಚಿತ್ರ, ಹೆಸರುಗಳನ್ನು ಹಾಕದಂತೆ ಕ್ರಮವಹಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ರಾಜಕೀಯ ನಾಯಕರ ಭಾವಚಿತ್ರಗಳು ಇದ್ದಲ್ಲಿ ಮುಂಚಿತವಾಗಿ ಅವುಗಳನ್ನು ಮುಚ್ಚಬೇಕು ಎಂದರು.

ಅಣಕು ಮತದಾನ ಕಡ್ಡಾಯ: ಮತದಾನ ನಡೆಯುವ ಮೇ ೭ರ ಮುಂಜಾನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಬೆಳಗ್ಗೆ ೫-೩೦ ಗಂಟೆಗೆ ಏಜೆಂಟರ್ ಸಮ್ಮುಖದಲ್ಲಿ ಕಡ್ಡಾಯವಾಗಿ ಅಣಕು ಮತದಾನ ಮಾಡಬೇಕು. ಅಣಕು ಮತದಾನ ನಂತರ ಮತಯಂತ್ರದಿಂದ ಅಣಕು ಮತದಾನದ ವಿವರವನ್ನು ಶೂನ್ಯಗೊಳಿಸಿ ದೃಢೀಕರಿಸಿ, ನಂತರ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ರವರೆಗೆ ನೈಜ ಮತದಾನವನ್ನು ನಡೆಸಬೇಕು. ಮತದಾನ ಅವಧಿ ಮುಗಿಯುವ ೧೫ ನಿಮಿಷ ಮುಂದಿತವಾಗಿ ಕೂಗಿ ಹೇಳಬೇಕು. ಮತದಾನ ಅವಧಿ ಮುಗಿದ ನಂತರವೂ ಸರತಿ ಸಾಲಿನಲ್ಲಿ ಮತದಾರರಿದ್ದರೆ ಚೀಟಿ ನೀಡಿ ಮತದಾನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದರು.ಮತದಾರರಿಗೆ ಎಡಗೈ ತೋರುಬೆರಳಿಗೆ ಶಾಹಿ ಹಾಕಬೇಕು. ಅಂಧ ಹಾಗೂ ದುರ್ಬಲ ಮತದಾರರ ಸಹಾಯಕರಾಗಿ ಬಂದವರಿಗೆ (೧೮ ವರ್ಷ ಮೇಲ್ಪಟ್ಟವರಿಗೆ) ಬಲ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಬೇಕು. ಮತದಾನ ಆರಂಭವಾದ ಎರಡು ಗಂಟೆಗೊಮ್ಮೆ ಅಂಕಿಅಂಶ ವರದಿ ಮಾಡಬೇಕು. ಮೂರು ಗಂಟೆಗೊಮ್ಮೆ ವಿಶೇಷಚೇತನ ಮತದಾರ ಅಂಕಿ ಅಂಶ ನೀಡಬೇಕು. ಮಹಿಳಾ, ಪುರುಷ, ವಿಶೇಷಚೇತನ ಹಾಗೂ ದುರ್ಬಲ ಮತದಾರರಿಗೆ ಪ್ರತ್ಯೇಕ ಸಾಲುಗಳನ್ನು ವ್ಯವಸ್ಥೆ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮತ ಯಂತ್ರ ಪೂಜೆ ನಿಷೇಧ: ಮತಗಟ್ಟೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಮತದಾನಕ್ಕೆ ಮುನ್ನ ಮತಯಂತ್ರಗಳ ಪೂಜೆ, ಆರತಿ ಹಾಗೂ ದೀಪ ಬೆಳಗುವುದು ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಲಾಗಿದೆ ಎಂದರು.

ಪ್ರವೇಶ ನಿಷೇಧ: ಮತದಾನ ಕೊಠಡಿಯೊಳಗೆ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಯಾರನ್ನೂ ಒಳಗೆ ಪ್ರವೇಶ ನೀಡಬಾರದು. ಮತದಾನಕ್ಕೆ ಮಾತ್ರ ಸರತಿಯಂತೆ ನಿಯಮಬದ್ಧವಾಗಿ ಮತದಾರರಿಗೆ ಪ್ರವೇಶಾವಕಾಶವಿರುತ್ತದೆ ಎಂದು ಹೇಳಿದರು.ಗುರುತುಪತ್ರ ಕಡ್ಡಾಯ: ಮತದಾನ ಮಾಡಲು ವೋಟರ್ ಸ್ಲೀಪ್ ಜೊತೆಗೆ ಭಾರತ ಚುನಾವಣಾ ಆಯೋಗ ನೀಡಿದ ಎಪಿಕ್ ಕಾರ್ಡ್ ಅಥವಾ ಚುನವಣಾ ಆಯೋಗ ಮಾನ್ಯ ಮಾಡಿದ ಭಾವಚಿತ್ರವಿರುವ ಇತರ ೧೧ ಗುರುತು ಪತ್ರಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಆದರೆ ತಾವು ಮತ ಚಲಾಯಿಸಲು ಬಂದ ಮತಗಟ್ಟೆಯಲ್ಲಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದು ಕಡ್ಡಾಯ ಎಂದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಮಾತನಾಡಿ, ಈ ಹಿಂದಿನ ಎಷ್ಟೇ ಬಾರಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಿದರೂ ಈ ಚುನಾವಣೆ ಮೊದಲಿನದು ಎಂಬಂತೆ ನಿಯಮಾವಳಿಗಳನ್ನು ಸ್ಪಷ್ಟವಾಗಿ ಓದಬೇಕು, ಅರ್ಥಮಾಡಿಕೊಳ್ಳಬೇಕು. ಉದಾಸೀನತೆ, ಅಸಡ್ಡೆಯಿಂದ ಕಾರ್ಯನಿರ್ವಹಿಸದೇ ಭಯ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಮತಗಟ್ಟೆ ಅಧಿಕಾರಿಗಳಿಗೆ ಸರಿಯಾಗಿ ಮಾರ್ಗದರ್ಶನಮಾಡಿ, ಚುನಾವಣೆ ಯಶಸ್ವಿಗೊಳಿಸಿ. ಚುನಾವಣಾ ತರಬೇತಿ, ಮತದಾನದ ದಿನ ಅಧಿಕಾರಿ, ಸಿಬ್ಬಂದಿಗಳಿಗೆ ಊಟ-ಉಪಹಾರದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ. ಜಿಲ್ಲೆಯಲ್ಲಿ ೪,೧೦೦ ಜನ ಸಿಬ್ಬಂದಿಗಳಿದ್ದರೂ ೫,೪೫೧ ಜನರಿಗೆ ಹೆಚ್ಚುವರಿಯಾಗಿ ಕೊರತೆಯಾಗದಂತೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಊಟ-ಉಪಾಹಾರದಲ್ಲಿ ಯಾವುದೇ ವ್ಯತ್ಯಯವಾದರೂ ತಹಶೀಲ್ದಾರಗಳನ್ನು ಅಮಾನತ್ ಮಾಡಲಾಗುವುದು ಎಂದು ಎಚ್ಚರಿಸಿದರು.ಮಾಸ್ಟರ್ ತರಬೇತುದಾರ ಶಬ್ಬೀರ್ ಮನೀಯಾರ್ ಅವರು ಮತಗಟ್ಟೆಗಳ ಸಿದ್ಧತೆ, ಮತದಾನ ಪೂರ್ವ, ಮತದಾನ ಪ್ರಕ್ರಿಯೆ ಹಾಗೂ ಮತದಾನ ನಂತರ ಪ್ರಕ್ರಿಯೆಗಳ ಕುರಿತಾಗಿ ವಿವರವಾಗಿ ಮಾಹಿತಿ ನೀಡಿದರು.ಅಣಕು ಮತದಾನದ ಮಹತ್ವ, ಏಜೆಂಟರ ನೇಮಕ, ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಗಳ ಕರ್ತವ್ಯ, ಮತದಾನ ಪ್ರಕ್ರಿಯೆಗೆ ಮತಯಂತ್ರಗಳ ಜೋಡಣೆ, ಮತದಾರರ ಪಟ್ಟಿ ಮಾರ್ಕಿಂಗ್, ಮತಯಂತ್ರಗಳ ನಿರ್ವಹಣೆ, ಮತ ಯಂತ್ರದ ತಾಂತ್ರಿಕ ಲೋಪದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮ, ನಿಷೇಧಿತ ಹಾಗೂ ನಿರ್ಬಂಧಿತ ಸ್ಥಳಗಳ ನಿಗದಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಟ್ಟೆ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗ ಕಾರ್ಯನಿರ್ವಹಣೆ ಹಾಗೂ ವಿವಿಧ ನಮೂನೆಗಳ ಭರ್ತಿಮಾಡುವುದು, ಲಕೋಟೆಗಳ ನಿರ್ವಹಣೆ ಹಾಗೂ ಮತದಾನ ಸಂದರ್ಭದಲ್ಲಿ ಟೆಂಡರ್ ವೋಟ್ ಸೇರಿದಂತೆ ಸಮಗ್ರ ಪ್ರಕ್ರಿಯೆಗಳನ್ನು ವಿವರಿಸಿದರು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಹಾವೇರಿ ಉಪ ವಿಭಾಗಾಧಿಕಾರಿ ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖೀಜರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಮಮತಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಹಾಗೂ ತಹಶೀಲ್ದಾರಗಳು, ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು.