ಕನ್ನಡಪ್ರಭ ವಾರ್ತೆ ಪಾಂಡವಪುರ

ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಗ್ರಾಮಗಳ ಸ್ವಚ್ಛತೆಗೆ ಸಹಕರಿಸಿ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಿವಿಮಾತು ಹೇಳಿದರು.

ತಾಲೂಕಿನ ಕಾಮನಾಯಕನಹಳ್ಳಿಯಲ್ಲಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಆಯೋಜಿಸಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಅವಶ್ಯಕತೆಯೂ ನಿಮ್ಮ ಜವಾಬ್ದಾರಿಯಾಗಬೇಕು ಎಂದರು.

ಡೇರಿ ನಿರ್ದೇಶಕ ಸಿ.ಶಿವಕುಮಾರ್‌ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣ ಸಾಕಾರಗೊಳ್ಳಲು ಯುವ ಸಮುದಾಯದಿಂದ ಮಾತ್ರ ಸಾಧ್ಯ ಎಂದು ಎನ್‌ಎಸ್‌ಎಸ್ ಶಿಬಿರಗಳು ಎಲ್ಲಾ ಗ್ರಾಮಗಳಿಗೂ ತಲುಪುತ್ತಿದೆ ಎಂದರು.

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಪ್ರತಿ ವರ್ಷದಂತೆ ಈ ವರ್ಷವು ಕಾಮನಾಯಕನ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು 7 ದಿನಗಳಿಂದ ಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.


ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಮಂಡ್ಯ ವಿವಿ ಎನ್ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಪ್ರಮೀಳರ ಮಾರ್ಗದರ್ಶನದಲ್ಲಿ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕಾಳಚೆನ್ನೆಗೌಡರು ಶಿಬಿರ ಉದ್ಘಾಟಿಸಿ 7 ದಿನಗಳ ಕಾಲ ಗ್ರಾಮದ ಜನರಲ್ಲಿ ಸ್ಪಚ್ಛತೆ ಹಾಗೂ ಸಾಮಾಜಿಕ ಅರಿವು, ಜಾಥಾ, ಬೀದಿನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಪಶು ವೈದ್ಯಾಧಿಕಾರಿ ಡಾ.ಕೆ.ಹಿಮಚಲ ನಾರಾಯಣಪುರ ಸಾಕುಪ್ರಾಣಿಗಳ ಬಗ್ಗೆ ಅರಿವು, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ರಾಜೇಂದ್ರ ಸಾವಯವ ಕೃಷಿ, ಅಗ್ನಿಶಾಮಕ ಠಾಣಾಧಿಕಾರಿ ರವಿ ಅಗ್ನಿಅವಘಡ ಮತ್ತು ಅರಿವು, ಪಿಡಿಒ ವಿಜಯ್ ಚೌಡೇನಹಳ್ಳಿ ಗ್ರಾಮೀಣ ಬೇರು ಜಾಗತಿಕ ಮೇರು ಹಾಗೂ ಪಿಡಿಒ ಡಾ.ಶೋಭಾರಾಣಿ ಋತು ಸ್ರಾವ ಮತ್ತು ಶುಚಿತ್ವ ಎಂಬ ವಿಷಯಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ಶಿಬಿರದಲ್ಲಿ ಗ್ರಾಮಸ್ಥರಿಗಾಗಿ ಆರೋಗ್ಯ ತಪಾಸಣೆ, ಕೀಲುನೋವು ತಪಾಸಣೆ, ದಂತ ತಪಾಸಣೆ, ಕಣ್ಣಿನ ತಪಾಸಣೆ, ರಕ್ತದಾನಶಿಬಿರ, ಡಿಜಿಟಲ್ ಡ್ರೈವ್ ಜೊತೆಗೆ ಕಲ್ಯಾಣಿಗಳ ಅಭಿವೃದ್ಧಿ ದೇವಾಲಯಗಳ ಸ್ವಚ್ಛತೆಯ ಶ್ರಮದಾನ ಶಿಬಿರಾರ್ಥಿಗಳು ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಪಂ ಮಾಜಿ ಸದಸ್ಯ ರಾಮಕೃಷ್ಣ, ಸುರೇಶ್, ಕೆ.ಜಿ.ಭಾಸ್ಕರ್, ಶ್ರೀನಿವಾಸ್ ಹಾಗೂ ಊರಿನ ಯಜಮಾನರು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಶಿಬಿರಾಧಿಕಾರಿ ಬಿ.ಎಸ್.ಕುಮಾರ್, ಸಹ ಶಿಬಿರಾಧಿಕಾರಿ ವಿ.ಶ್ರೀಧರ, ಚರಣ್‌ರಾಜ್, ರಘುನಂದನ್, ಪೂಜಾ, ಓಂಕಾರ್, ಇ.ನಿರಂಜನ್, ಡಿ.ಎಂ.ಸುರಭಿ, ಸಚಿನ್ ಹಾಜರಿದ್ದರು. ಇದೇ ವೇಳೆ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಿದರು.