ಇಲ್ಲಸಲ್ಲದ ಆರೋಪ ಮಾಡುವುದು ಸಮಂಜಸವಲ್ಲ: ಜಗದೀಶ ಗೌಡ

| Published : Jun 10 2025, 04:17 AM IST

ಸಾರಾಂಶ

ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜನರು ತಮ್ಮ ಸಮಸ್ಯೆ ಮುಕ್ತವಾಗಿ ಶಾಸಕರಿಗೆ ತಿಳಿಯಬಹುದಾಗಿದೆ

ಶಿರಸಿ: ವೈಯಕ್ತಿಕ ಲಾಭಕ್ಕಾಗಿ ಶಾಸಕರ ಆಡಳಿತ ವೈಖರಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸಮಂಜಸವಲ್ಲ. ಶಿರಗುಣಿ ಭಾಗದ ಸಮಸ್ಯೆಗೆ ಶಾಸಕರು ಈಗಾಗಲೇ ಸ್ಪಂದಿಸಿದ್ದಾರೆ ಎಂದು ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಹೇಳಿದರು.

ಅವರು ಸೋಮವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ವಾನಳ್ಳಿ ಗ್ರಾಪಂ ವ್ಯಾಪ್ತಿಯ ಶಿರಗುಣಿ ಭಾಗದಲ್ಲಿ ವೃದ್ದೆಯೋರ್ವರನ್ನು ಕಂಬಳಿಯಲ್ಲಿ ಹೊತ್ತು ಮನೆಗೆ ಸಾಗಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಬಗೆಹರಿಸುವಂತೆ ತಿಳಿಸಿದ್ದಾರೆ. ಆದರೆ ಅನಂತಮೂರ್ತಿ ಹೆಗಡೆ ಸ್ಥಳೀಯರನ್ನು ಎತ್ತಿಕಟ್ಟಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಾನಳ್ಳಿ ಗ್ರಾಪಂ ವ್ಯಾಪ್ತಿಯ ರಸ್ತೆಗಳನ್ನು ಸುಧಾರಣೆ ಮಾಡಲು ₹೧೦೦ ಕೋಟಿ ಅನುದಾನ ಬೇಕಾಗಬಹುದು. ಹಂತಹಂತವಾಗಿ ಅಲ್ಲಿನ ಸಮಸ್ಯೆ ಶಾಸಕರು ಪರಿಹರಿಸುತ್ತಾರೆ. ಅನಂತಮೂರ್ತಿ ಹೆಗಡೆ ಹೋರಾಟಗಳನ್ನು ನಾವು ನೋಡಿದ್ದೇವೆ. ಮತ್ತಿಘಟ್ಟಾ ಕೆಳಗಿನ ಕೇರಿ ರಸ್ತೆಯ ಬಗ್ಗೆಯೂ ಹೋರಾಟ ಮಾಡಿದ್ದರು. ಜಿಲ್ಲಾಧಿಕಾರಿಗಳ ಬಳಿಯೂ ಹೋಗಿದ್ದರು. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಅನಂತಮೂರ್ತಿ ಹೆಗಡೆ ಮಾಡುತ್ತಿದ್ದಾರೆ. ಎರಡು ಬಾರಿ ಶಿರಗುಣಿಗೆ ಶಾಸಕರು ಹೋಗಿದ್ದಾರೆ. ಹಂತಹಂತವಾಗಿ ಶಿರಗುಣಿ ಭಾಗದ ರಸ್ತೆಯನ್ನು ಶಾಸಕರು ಸುಧಾರಣೆ ಮಾಡುತ್ತಾರೆ. ₹೯೫ ಲಕ್ಷ ಕಾಂಕ್ರೀಟ್ ರಸ್ತೆ ಮಂಜೂರಾಗಿದೆ. ಟೆಂಡರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದರು.

ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜನರು ತಮ್ಮ ಸಮಸ್ಯೆ ಮುಕ್ತವಾಗಿ ಶಾಸಕರಿಗೆ ತಿಳಿಯಬಹುದಾಗಿದೆ. ಶಿರಗುಣಿ ಭಾಗದಲ್ಲಿ ರಸ್ತೆ ಸಂಪರ್ಕ ಸಮಸ್ಯೆವಿರುವುದು ಸತ್ಯ ಸಂಗತಿ. ಶಾಸಕ ಭೀಮಣ್ಣ ನಾಯ್ಕ ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಜಿಪಂ ಇಂಜಿನಿಯರ್ ಅವರಿಗೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ನಡೆಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಗೀತಾ ಶೆಟ್ಟಿ, ಬಸವರಾಜ ದೊಡ್ಮನಿ, ಅಣ್ಣು ಗೌಡ, ಶ್ರೀನಿವಾಸ ನಾಯ್ಕ, ವಿ.ಎನ್. ಭಟ್ಟ ಮುಸ್ಕಿ, ಶ್ರೀಧರ ಭಟ್ಟ, ನಾಗರಾಜ, ಶಮಿನಾಭಾನು, ಕೃಷ್ಣ ಗೌಡ, ಅಜಯ್ ಸಿದ್ದಿ, ಪ್ರಕಾಶ ಸೇರಿದಂತೆ ಮತ್ತಿತರರು ಇದ್ದರು.

ಅಭಿವೃದ್ಧಿ ಪೂರಕವಾದ ಚಿಂತನೆಗಳನ್ನು ಮಾಡಬೇಕಿದೆ. ಆಚಾರ ಹೇಳುವುದರಿಂದ ಯಾವುದೇ ಕೆಲಸವಾಗುವುದಿಲ್ಲ ಎಂದು ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಹೇಳಿದರು.