ಸಂಸ್ಕಾರೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಅನಂತಕುಮಾರ ಹೆಗಡೆ
ಕನ್ನಡಪ್ರಭ ವಾರ್ತೆ ಯಲ್ಲಾಪುರ ಹೊಸ ತಲೆಮಾರಿಗೆ ಬಲವಂತದಿಂದ ಸಂಸ್ಕಾರ ನೀಡಲಾಗದು. ತಂದೆ-ತಾಯಿಗಳ ನಡೆ-ನುಡಿಯನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ಅಂತಹ ಮೇಲ್ಪಂಕ್ತಿಯ ವ್ಯಕ್ತಿಗಳು ನಾವಾದಾಗ ಮಾತ್ರ ಸಂಸ್ಕಾರವಂತರಾಗಲು ಸಾಧ್ಯ. ಹಣ ಸಂಪಾದನೆಯೇ ಸರ್ವಸ್ವವಲ್ಲ. ಬ್ರಾಹ್ಮಣತ್ವ ಜಾತಿಯಲ್ಲ. ಅದು ಯೋಗ್ಯತೆಯ ಆದರ್ಶ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ, ಯಲ್ಲಾಪುರ ತಾಲೂಕಾ ಹವ್ಯಕ ಸಂಘ, ಅಂಕೋಲಾ ಹವ್ಯಕ ಸಾಂಸ್ಕೃತಿಕ ಸಂಘ, ಜೋಯಿಡಾ ಹವ್ಯಕ ಬಳಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವ ಉದ್ಘಾಟಿಸಿ ಮಾತನಾಡಿದರು.ಬ್ರಾಹ್ಮಣ್ಯ ನಶಿಸುತ್ತಿದೆ. ಆಚಾರ-ವಿಚಾರದಲ್ಲಿ ದೂರ ಹೋಗುತ್ತಿದ್ದೇವೆ. ಬ್ರಾಹ್ಮಣತ್ವ, ಯೋಗ್ಯತೆ, ಅರ್ಹತೆ ಇದು ಜಾತಿಯಿಂದ ಮಾತ್ರ ಅಲ್ಲ. ಸಂಸ್ಕಾರ ಮನೆಯಿಂದಲೇ ಪ್ರಾರಂಭವಾಗಬೇಕು. ಅದು ಪಾಠದಿಂದ, ಶಾಲೆಗಳಿಂದ ಬರುವಂತದ್ದಲ್ಲ. ಸಂಸ್ಕಾರ ದೃಢೀಕರಣ ಎಲ್ಲಿಯೂ ದೊರೆಯುವುದಿಲ್ಲ. ಆದರ್ಶದ ಮೇಲ್ಪಂಕ್ತಿಯ ವ್ಯಕ್ತಿತ್ವ ನಿರ್ಮಾಣಗೊಂಡಾಗ ಸಾಧ್ಯ. ಇಂತಹ ಸಂಸ್ಕಾರೋತ್ಸವದಿಂದ ಸಾರ್ಥಕತೆ ಕಾಣಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಪರಿಚಯಿಸುವ ದೃಷ್ಟಿಯಿಂದ ಸಂಸ್ಕಾರೋತ್ಸವ ಹಮ್ಮಿಕೊಂಡಿದ್ದು, ನಮ್ಮನ್ನು ನಾವೇ ಸರಿಪಡಿಸಿಕೊಂಡು ಆದರ್ಶಪ್ರಾಯರಾಗಬೇಕು. ಸಮಾಜದ ಸೇವೆಯಲ್ಲಿ ನಾವು ಸಮಾಜದ ಋಣ ಎಂಬ ಭಾವದಿಂದ ತೊಡಗಿಸಿಕೊಳ್ಳಬೇಕು ಎಂದರು. ಹಿರಿಯ ಚಿಂತಕ ಪ್ರಮೋದ ಹೆಗಡೆ ಮಾತನಾಡಿ, ಇಂದು ಎಐ ಬಂದಿದೆ. ಹಳ್ಳಿಯಲ್ಲಿ ಯುವಕರಿಲ್ಲ, ಕೆಲಸ ಮಾಡುವ ಜನರಿಲ್ಲ. ನಾಳೆಯ ಬಗ್ಗೆ ಚಿಂತನೆ ಮಾಡಿದರೆ ಭೀತಿಯಾಗುತ್ತಿದೆ. ಹಳ್ಳಿಯ ಶಾಲೆಗಳು ಮುಚ್ಚುತ್ತಿವೆ. ಇಂತಹ ಸ್ಥಿತಿಯಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಚಿಂತನ-ಮಂಥನ ನಡೆಯಬೇಕು ಎಂದರು. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ನಿರ್ದೇಶಕ ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು. ಮಹೇಶ ಭಟ್ಟ, ಶ್ರೀರಾಮ ಭಟ್ಟ ವೇದಘೋಷ ಪಠಿಸಿದರು. ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಮಹಾಸಭಾದ ನಿರ್ದೇಶಕ ಗೋಪಾಲಕೃಷ್ಣ ಹಂಡ್ರಮನೆ ಸ್ವಾಗತಿಸಿದರು. ವೀಣಾ ಹೆಗಡೆ, ರವೀಂದ್ರ ಗಾಂವ್ಕರ ನಿರ್ವಹಿಸಿದರು. ಸಂಚಾಲಕ ಸಣ್ಣಪ್ಪ ಭಾಗ್ವತ ವಂದಿಸಿದರು.ಶಿಕ್ಷಣದಿಂದ ಮಾತ್ರ ಸಂಸ್ಕಾರ ಜಾಗೃತಿ ಕುರಿತು ಚಿಂತನ ಮಂಥನ ಗೋಷ್ಠಿಯಲ್ಲಿ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಅಧ್ಯಕ್ಷತೆ ವಹಿಸಿ ಗೋಷ್ಠಿ ನಡೆಸಿಕೊಟ್ಟರು. ಚಿಂತನ ಮಂಥನ ಗೋಷ್ಠಿಯಲ್ಲಿ ಶಿಕ್ಷಕರಾದ ನಾಗರಾಜ ಹೆಗಡೆ, ರಮೇಶ ಹೆಗಡೆ, ವೀಣಾ ಹೆಗಡೆ, ಭಾಸ್ಕರ ಗಾಂವ್ಕರ್, ಶ್ರೀಧರ ಹೆಗಡೆ, ವಿನೋದ ಭಟ್ಟ ಉಪಸ್ಥಿತರಿದ್ದು, ತಮ್ಮ ವಿಚಾರ ಮಂಡಿಸಿದರು.ಮನಸ್ಸಿಗೆ ಶಿಕ್ಷಣ ನೀಡುವ ಕಾರ್ಯ ಆಗಲಿ
ಮನಸ್ಸನ್ನು ವಿಸ್ತಾರಗೊಳಿಸುವುದೇ ನಿಜವಾದ ಶಿಕ್ಷಣ ಎಂದು ವಾಗ್ಮಿ ಜಿ.ಎಸ್. ನಟೇಶ ಹೇಳಿದರು.ಪಟ್ಟಣದ ಕಾರ್ಮಿಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವದಲ್ಲಿ ಸಂಸ್ಕಾರಗಳ ವೈಜ್ಞಾನಿಕ ಹಿನ್ನೆಲೆ ಕುರಿತು ಉಪನ್ಯಾಸ ನೀಡಿದರು.ಮನಸ್ಸಿಗೆ ಸಂಸ್ಕಾರ ನೀಡಲು ಯಾವುದೇ ಕಂಪನಿಗಳಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಮನಸ್ಸಿಗೆ ಶಿಕ್ಷಣ ನೀಡುವ ಕಾರ್ಯ ಆಗಬೇಕೆಂದರು. ವಿದ್ವಾಂಸ ವಿದ್ವಾನ್ ಜಗದೀಶ ಶರ್ಮಾ ಸಂಪ ಷೋಡಶ ಸಂಸ್ಕಾರಗಳ ಕುರಿತು ಉಪನ್ಯಾಸ ನೀಡಿ, ಮನಸ್ಸು, ಪಂಚೇಂದ್ರಿಯಗಳು ಆತ್ಮದಲ್ಲಿ ನೆಲೆಗೊಳ್ಳಬೇಕು. ವ್ಯಕ್ತಿಯ ಬದುಕಿನಲ್ಲಿ ಷೋಡಶ ಸಂಸ್ಕಾರಗಳು ಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಸಂಸ್ಕಾರ ಕ್ರಿಯಾಜನ್ಯವಾದದ್ದು. ಸಂಸ್ಕಾರಕ್ಕೆ ಗಟ್ಟಿಯಾದ ನೆಲೆ ಬೇಕು. ಸಂಸ್ಕಾರದ ಜತೆಗೆ ಆತ್ಮಗುಣಗಳು ಬೇಕು ಎಂದರು.