ಹೊಸ ಮೆಡಿಕಲ್‌ ಕಾಲೇಜು ಸ್ಥಾಪನೆಗಿಂತ ಜನರನ್ನು ಆರೋಗ್ಯವಂತರಾಗಿಸುವುದು ಮುಖ್ಯ

| Published : Dec 19 2024, 12:30 AM IST

ಹೊಸ ಮೆಡಿಕಲ್‌ ಕಾಲೇಜು ಸ್ಥಾಪನೆಗಿಂತ ಜನರನ್ನು ಆರೋಗ್ಯವಂತರಾಗಿಸುವುದು ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಿ ಹೆಚ್ಚು ಹೆಚ್ಚು ವೈದ್ಯರನ್ನು ಸಮಾಜಕ್ಕೆ ನೀಡುವ ಬದಲಾಗಿ, ಜನರ ಆರೋಗ್ಯವನ್ನುಹೆಚ್ಚಿಸಿ ಆರೋಗ್ಯವಂತರನ್ನಾಗಿಸುವತ್ತ ಸರ್ಕಾರ, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಗಮನ ನೀಡಬೇಕಾದುದು ಇಂದಿನ ಅವಶ್ಯಕತೆಯಾಗಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ರಾಮನಾಥ್ ಅಭಿಪ್ರಾಯಿಸಿದರು. ವಾರಕ್ಕೊಮ್ಮೆ ಒಂದು ಹೊತ್ತಿನ ಊಟ ತ್ಯಜಿಸುವುದರಿಂದ ನಮ್ಮಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದು ಆಯುರ್ವೇದದ ಪ್ರಮುಖ ಸಿದ್ಧಾಂತ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಿ ಹೆಚ್ಚು ಹೆಚ್ಚು ವೈದ್ಯರನ್ನು ಸಮಾಜಕ್ಕೆ ನೀಡುವ ಬದಲಾಗಿ, ಜನರ ಆರೋಗ್ಯವನ್ನುಹೆಚ್ಚಿಸಿ ಆರೋಗ್ಯವಂತರನ್ನಾಗಿಸುವತ್ತ ಸರ್ಕಾರ, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಗಮನ ನೀಡಬೇಕಾದುದು ಇಂದಿನ ಅವಶ್ಯಕತೆಯಾಗಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ರಾಮನಾಥ್ ಅಭಿಪ್ರಾಯಿಸಿದರು.

ಅವರು ನಗರದ ರಾಜೀವ್‌ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಷ್ಯೋಪನಯನ ಹಾಗೂ ಕಾಲೇಜು ವಾರ್ಷಿಕೋತ್ಸವ ವಿಸ್ಮಯ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯವಂತ ಸಮಾಜದ ಸೃಷ್ಟಿ ನಮ್ಮೆಲ್ಲರ ಹೊಣೆಯಾಗಿದೆ. ಸಮಾಜದ ಸ್ವಾಸ್ಥ್ಯರಕ್ಷಣೆ ದೇಶದ ಪ್ರಗತಿಗೆ ಅವಶ್ಯ ಎಂದರು.

ಆಯುರ್ವೇದವು ಮನುಷ್ಯ ಆರೋಗ್ಯವಂತನಾಗಿರಲು ಬೇಕಾದ ಎಲ್ಲಾ ತತ್ವಗಳನ್ನು ತಿಳಿಸಿದೆ. ಇದರ ಅರಿವು ಪ್ರತಿಯೊಬ್ಬರಿಗೂ ಇಲ್ಲ. ಇದನ್ನು ತಲುಪಿಸುವ ಕೆಲಸ ಆಯುರ್ವೇದ ವೈದ್ಯರುಗಳಿಂದ ಆಗಬೇಕಿದೆ. ವಾರಕ್ಕೊಮ್ಮೆ ಒಂದು ಹೊತ್ತಿನ ಊಟ ತ್ಯಜಿಸುವುದರಿಂದ ನಮ್ಮಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದು ಆಯುರ್ವೇದದ ಪ್ರಮುಖ ಸಿದ್ಧಾಂತ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಟೈಮ್ಸ್ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಪ್ರತಿಯೊಬ್ಬ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಸಮರ್ಥನೇ, ನಿಮ್ಮ ಬಗ್ಗೆ ನಿಮಗೆ ಅಪನಂಬಿಕೆ ಬೇಡ, ಸಾಧಿಸುವ ಛಲ ನಿಮಗಿರಲಿ. ಧೈರ್ಯವಾಗಿ ನಿರ್ಣಯಗಳನ್ನು ತೆಗೆದುಕೊಂಡಾಗ ಸಾಧನೆ ಸಾಧ್ಯ. ಸಕಾರಾತ್ಮಕವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜನಮಿತ್ರ ಪ್ರಾದೇಶಿಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಸಿ.ಆರ್‌. ನವೀನ್ ಮಾತನಾಡಿ, ರಾಜೀವ್‌ ಆಯುರ್ವೇದ ಮಹವಿದ್ಯಾಲಯವು ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ದೇಶದಲ್ಲೇ ಹೆಸರು ಮಾಡಿದೆ. ಆಸ್ಪತ್ರೆಯು ಉತ್ತಮ ಪಂಚಕರ್ಮಯುಕ್ತ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿದೆ. ಬೇರೆ ರಾಜ್ಯಗಳಿಂದಲೂ ರೋಗಿಗಳು ಬರುತ್ತಿರುವುದು ಸಂತಸದ ವಿಷಯ. ಆಯುರ್ವೇದದಲ್ಲಿ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಲಭ್ಯವಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಎ. ನಿತಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜೀವ್‌ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ಅನೇಕ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಕಾಲೇಜು ಉತ್ತಮ ಆಯುರ್ವೇದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹಾಗೂ ಸುತ್ತಮುತ್ತಲ ರಾಜ್ಯಗಳಿಂದಲೂ ವಿದ್ಯಾಥಿಗಳನ್ನು ಆಕರ್ಷಿಸುತ್ತಿದೆ. ಮುಂದೆ ಸ್ನಾತಕೋತ್ತರ ಸಂಸ್ಥೆಯನ್ನು ತೆರೆಯುವುದರ ಜೊತೆಗೆ ವಿಶ್ವಮಾನ್ಯ ಗುಣಮಟ್ಟದಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ರಂಜಿತ್‌ ರಾಜೀವ್, ಕಾರ್ಯದರ್ಶಿ ಡಾ. ಬಿ.ಎನ್. ರತ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಿದರು. ಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವರ್ಗಗಳ ಸಿಬ್ಬಂದಿಗಳನ್ನು, ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.====

ಫೋಟೋ:

ರಾಜೀವ್‌ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಷ್ಯೋಪನಯನ ಹಾಗೂ ಕಾಲೇಜು ವಾರ್ಷಿಕೋತ್ಸವ ವಿಸ್ಮಯ-೨೦೨೪ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.