ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸೇರಿದಂತೆ ವಿವಿಧ ಸ್ಥಳಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹೆರಿಗೆ ವಾರ್ಡ್‌ಗಳು, ಆಪರೇಷನ್ ಕೊಠಡಿಗಳನ್ನು ಪರಿಶೀಲಿಸುವ ವೇಳೆ ಆಸ್ಪತ್ರೆಗೆ ಬಂದಿದ್ದ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ವೈದ್ಯರಿಗೆ ಹಲವು ಸಲಹೆ ಸೂಚನೆ ನೀಡಿದರು. ಹೆರಿಗೆ ವಾರ್ಡ್ ಗಳಲ್ಲಿರುವ ಮಕ್ಕಳನ್ನು ಎತ್ತಿ ಮುದ್ದಾಡಿ ತಾಯಿ ಮಗುವಿಗೆ ಶುಭ ಹಾರೈಸಿದರು.

ಸಾರ್ವಜನಿಕ ಆಸ್ಪತ್ರೆ ಡಿ ಗ್ರೂಪ್ ನೌಕರರೊಬ್ಬರು ನೆಲಮಾಕನಹಳ್ಳಿಯಲ್ಲಿ ಹಲವು ವರ್ಷಗಳಿಂದ ಜೀವನ ಮಾಡುತ್ತಿದ್ದು, ತಾವು ವಾಸಿಸುತ್ತಿರುವ ಸ್ಥಳಕ್ಕೆ ಹಕ್ಕು ಪತ್ರ ಕೊಡಿಸಬೇಕೆಂದು ಮನವಿ ಮಾಡಿದರು. ಸ್ಥಳದಲ್ಲಿಯೇ ದೂರವಾಣಿ ಮೂಲಕ ತಾಪಂ ಇಒ ಶ್ರೀನಿವಾಸ್ ಅವರನ್ನು ಸಂಪರ್ಕಿಸಿ ನಿವೇಶನ ಕೊಡಿಸಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಪಟ್ಟಣದ ಮನಿಸ್ವೀನಿ ಎಂಬ ಯುವತಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡರು. ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಅವರಿಗೆ ಯುವತಿಗೆ ನೌಕರಿ ಕೊಡಿಸುವಂತೆ ಸೂಚಿಸಿದರು.


ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಹಿಳೆಯೊಬ್ಬರು ಸಂಪರ್ಕಿಸಿ ಅಪಘಾತದಲ್ಲಿ ತಮ್ಮ ಪತಿ ನಿಧನರಾಗಿದ್ದು, ಯಾವುದೇ ಪರಿಹಾರದ ಹಣ ಸಿಕ್ಕಿಲ್ಲ. ವಕೀಲರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ನ್ಯಾಯಕೊಡಿಸಬೇಕೆಂದು ಮನವಿ ಮಾಡಿಕೊಂಡರು. ಸ್ಥಳದಲ್ಲಿಯೇ ಇದ್ದ ಸಿಡಿಪಿಓ ಸಿ. ನಂಜಮಣಿ ಅವರಿಗೆ ಇಲಾಖೆ ವತಿಯಿಂದ ವಕೀಲರನ್ನು ನೇಮಿಸಿ ನ್ಯಾಯ ಒದಗಿಸಬೇಕೆಂದು ಹೇಳಿದರು.

ಆಸ್ಪತ್ರೆ ಸೌಲಭ್ಯಕ್ಕೆ ಪ್ರಸಂಸೆ:

ಬಹುತೇಕ ಬಡಜನರು, ಕೂಲಿಕಾರ್ಮಿಕರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಇಂಥ ವ್ಯವಸ್ಥೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ಪಾಲನೆಯೂ ಮುಖ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉತ್ತಮವಾಗಿ ಚಿಕಿತ್ಸೆ ದೊರೆಯುತ್ತದೆ ಎನ್ನುವುದಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾಕ್ಷಿಯಾಗಿದೆ ಎಂದರು.

ರೋಗಿಗಳನ್ನು ಸೌಲಭ್ಯದ ಬಗ್ಗೆ ವಿಚಾರಿಸಿದ್ದಾಗ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಸ್ವಚ್ಚತೆ, ನಿರ್ವಹಣೆ, ಔಷಧ ಶೇಖರಣೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡಿದೆ. ವ್ಯವಸ್ಥೆ ಮತ್ತು ಶಿಸ್ತು ಹಾಗೂ ತಾಯಿ-ಮಗುವಿನ ಬಗ್ಗೆ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ವಹಿಸುತ್ತಿರುವ ಕಾಳಜಿಯನ್ನು ಪ್ರಶಂಸೆ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಬರುತ್ತಿದಂತೆ ಕುಳಿತಿದ್ದ ವೃದ್ದ ದಂಪತಿಗಳ ಆರೋಗ್ಯವನ್ನು ವಿಚಾರಿಸಿದರು. ನಿಮ್ಮ ಜೊತೆಯಲ್ಲಿ ಮಕ್ಕಳು ಬಂದಿಲ್ಲವೇ, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದ್ದಿಯೇ ಎಂದು ಪ್ರಶ್ನಿಸಿದರು.

ನಂತರ ಗ್ರಾಮಾಂತರ ಪೊಲೀಸ್ ಠಾಣೆಗೆ ಬೇಟಿ ನೀಡಿ ಮಕ್ಕಳು ಮತ್ತು ಮಹಿಳೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದರು. ನೊಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸುವಂತೆ ಧೈರ್ಯ ತುಂಬಬೇಕು. ತೆರದ ಮನೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೃದ್ಧ ದಂಪತಿ ಮಾತನಾಡಿ, ಆಸ್ಪತ್ರೆಯಲ್ಲಿ ವೈದರು ಸಮರ್ಪಕವಾಗಿ ಸ್ಪಂದಿಸುತ್ತಿದ್ದಾರೆ. ಇಲ್ಲಿಯೇ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಮ್ಮ ಪತಿ ಇರುವ ತನಕ ನನಗೆ ಯಾವುದೇ ಭಯವಿಲ್ಲ ಎಂದು ವೃದ್ದೆ ಮಹಿಳೆ ಹೇಳುತ್ತಿದ್ದಂತೆ ನಾಗಲಕ್ಷ್ಮಿ ಚೌಧರಿ ನಿಮ್ಮ ಅದರ್ಶ ಎಲ್ಲಾರಿಗೂ ಸ್ಫೂರ್ತಿ ಎಂದು ಅಶೀರ್ವಾದ ಪಡೆದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ವೀಕ್ಷಣೆ ಮಾಡಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟು ಓದಿದರೇ ಮಾತ್ರ ಸಾಧನೆ ಮಾಡಲು ಸಹಾಯವಾಗುತ್ತದೆ. ಪ್ರೌಢಾವ್ಯಸ್ಥೆಯಲ್ಲಿರುವ ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರೀಕರಿಸಿ ಸಾಧನೆಯತ್ತ ಮುಖಮಾಡಬೇಕು ಎಂದರು.

ತಾಲೂಕಿನಾದ್ಯಂತ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳು ಡಿಜಿಟಲೀಕರಣಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಶಾಂತಿ ಕಾಲೇಜು ಸಮೀಪದ ಬಿಸಿಎಂ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಂದ ಹಲವು ಮಾಹಿತಿ ಪಡೆದರು.

ಈ ವೇಳೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್, ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಸಿಡಿಪಿಓ ನಂಜಮಣಿ, ಸರ್ಕಲ್ ಇನ್ಸ್ ಪೆಕ್ಟರ್ ಬಸವರಾಜು, ಬಿ.ಇ.ಒ ಉಮಾ ಸೇರಿದಂತೆ ಇತರರು ಇದ್ದರು.