ಮಳವಳ್ಳಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೀನುಗಾರಿಕೆಗೆ ಅನುಕೂಲವಾಗುವಂತೆ ಮೀನು ಮಾರುಕಟ್ಟೆ ನಿರ್ಮಾಣ, ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗಲು ಸ್ತ್ರೀ ಶಕ್ತಿ ಭವನ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಚಾಲನೆ ತರಬೇತಿ ನೀಡಲು ಕೆಎಸ್‌ಆರ್‌ಟಿಸಿ ಚಾಲಕ ತರಬೇತಿ ಕೇಂದ್ರ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯವನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಸಿದ್ಧಾರ್ಥನಗರ, ಎನ್‌ಇಎಸ್ ಬಡಾವಣೆಯಲ್ಲಿ ಸುಮಾರು ಒಂದುವರೆ ಕೋಟಿ ರು. ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.

ಕಿರಿದಾದ ರಸ್ತೆಯಿಂದಾಗಿ ಹಳ್ಳಿಯಂತಿದ್ದ ಪಟ್ಟಣವನ್ನು ಸುಗಮ ಸಂಚಾರಕ್ಕಾಗಿ ಅಗಲವಾದ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಸುಂದರ ಪಟ್ಟಣವನ್ನಾಗಿ ರೂಪುಗೊಳಿಸಲಾಗಿದೆ ಎಂದರು.

ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೀನುಗಾರಿಕೆಗೆ ಅನುಕೂಲವಾಗುವಂತೆ ಮೀನು ಮಾರುಕಟ್ಟೆ ನಿರ್ಮಾಣ, ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗಲು ಸ್ತ್ರೀ ಶಕ್ತಿ ಭವನ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಚಾಲನೆ ತರಬೇತಿ ನೀಡಲು ಕೆಎಸ್‌ಆರ್‌ಟಿಸಿ ಚಾಲಕ ತರಬೇತಿ ಕೇಂದ್ರ ಸೇರಿದಂತೆ ಹಲವು ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.

10ನೇ ವಾರ್ಡ್ ಸಿದ್ಧಾರ್ಥ ನಗರದ 6,7, ಮತ್ತು 8ನೇ ಕ್ರಾಸ್, ಹಾಗೂ 3 ನೇ ವಾರ್ಡ್ ನ ಎನ್‌ಇಎಸ್ ಬಡಾವಣೆಯಲ್ಲಿ ನಗರೋತ್ಥಾನ ಹಂತದ ಯೋಜನೆಯಡಿ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಇದೇ ವೇಳೆ ಮುಖಂಡರಾದ ಮನ್ಮುಲ್ ನಿರ್ದೇಶಕ ಅರ್.ಎನ್ ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ದೇವರಾಜು, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಸಿದ್ದಾರ್ಥನಗರದ ಸಂತೋಷ್, ಮರಿದೇವರು, ವೇದಮೂರ್ತಿ, ಮಹೇಶ್, ಸಿದ್ದಪ್ಪ, ಕಿರಣ್‌ಶಂಕರ್, ವೆಂಕಟೇಶ್, ನಂಜುಂಡಯ್ಯ, ನುರುಲ್ಲಾ, ಸಫಿವುಲ್ಲಾ, ಕೃಷ್ಣಪ್ಪ, ಶಿವರಾಜು, ಯಜಮಾನ್ ವೆಂಕಟೇಶ್, ಲಕ್ಷ್ಮಮ್ಮ, ಗಂಗರಾಜೇಅರಸ್ ಸೇರಿದಂತೆ ಇತರರು ಇದ್ದರು.