ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಅಯೋಧ್ಯೆಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೆ ಪೊಲೀಸರು ವ್ಯಕ್ತಿಯೊಬ್ಬನನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶೇಕ್ಸಾಬ್ ವಲಿ(58) ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ವ್ಯಕ್ತಿ. ಈತ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಸಿ ಗ್ರೂಪ್ ನೌಕರ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಈತ ತಾನು ಉದ್ದೇಶಪೂರ್ವಕವಾಗಿ ಆ ರೀತಿ ಹೇಳಿಲ್ಲ, ಕೋಪದ ಭರದಲ್ಲಿ ಆ ರೀತಿ ಹೇಳಿದ್ದಾಗಿ ಹೇಳಲಾಗಿದೆ.ಅಯೋಧ್ಯೆಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲು ಹೊಸಪೇಟೆಯಲ್ಲಿ ನಿಂತಾಗ ವ್ಯಕ್ತಿಯೊಬ್ಬ ರೈಲು ಹತ್ತಿದ್ದರು.
ಹುಬ್ಬಳ್ಳಿಗೆ ತೆರಳುವ ರೈಲು 3ನೇ ಪ್ಲಾಟ್ ಫಾರಂನಲ್ಲಿ ನಿಂತಿದ್ದು, ಒಂದನೇ ಪ್ಲಾಟ್ ಫಾರಂನಲ್ಲಿ ಅಯೋಧ್ಯೆಯಿಂದ ಬಂದಿದ್ದ ರೈಲು ನಿಂತಿತ್ತು.
ಮೇಲ್ಸೇತುವೆ ಮೂಲಕ ಹೋದರೆ ರೈಲು ಹಿಡಿಯುವುದು ಕಷ್ಟವಾಗುತ್ತದೆ ಎಂದು ಅಯೋಧ್ಯೆ ರೈಲಿನ ಮೂಲಕ ಹಳಿ ದಾಟಿ ಹೋಗಲು ಯತ್ನಿಸಿದ್ದಾರೆ.
ಆಗ ರೈಲಿನಲ್ಲಿದ್ದ ಹಿಂದೂಪರ ಕಾರ್ಯಕರ್ತರು ಇದು ರಿಸರ್ವ್ ಆದ ಬೋಗಿ ಯಾರೂ ಹತ್ತಬಾರದು ಎಂದು ಹೇಳಿದಾಗ ವಾಗ್ವಾದವಾಗಿದೆ.
ಆಗ ಆ ವ್ಯಕ್ತಿ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಸಿದ್ದಾನೆ. ನಂತರ ಆ ವ್ಯಕ್ತಿ ಹುಬ್ಬಳ್ಳಿ ರೈಲು ಹತ್ತಿ ತೆರಳಿದ್ದಾರೆ.
ಇದನ್ನು ಖಂಡಿಸಿ ಶ್ರೀರಾಮಭಕ್ತರು ಜೈಶ್ರೀರಾಮ್ ಘೋಷಣೆ ಕೂಗಿ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದು, ಪೊಲೀಸರು ಮಧ್ಯೆಪ್ರವೇಶಿಸಿ ಪ್ರಕರಣವನ್ನು ತಿಳಿಗೊಳಿಸಿದ್ದರು.
ಈ ಕುರಿತು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅದರಂತೆ ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಇದೀಗ ವಿಚಾರಣೆ ನಡೆಸಲಾಗುತ್ತಿದೆ.