ಸಾರಾಂಶ
ಸಾಗರದ ಮಹಿಳಾ ಕಾಲೇಜಿನಲ್ಲಿ ಅಂತರಕ್ರಿಯಾ ಚಟುವಟಿಕೆ ಭಾಗವಾಗಿ ಗಿಡ ನೆಡಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಮನುಷ್ಯರಿಲ್ಲದೆ ಸಸ್ಯ ಸೇರಿದಂತೆ ಮೊದಲಾದ ಜೀವಿಗಳು ಬದುಕಬಲ್ಲದು. ಆದರೆ ಸಸ್ಯಗಳಿಲ್ಲದೆ ಮನುಷ್ಯ ಬದುಕುವುದು ಅಸಾಧ್ಯ ಎಂದು ಪರಿಸರ ಹೋರಾಟಗಾರ ಶ್ರೀಪಾದ ಬಿಚ್ಚುಗತ್ತಿ ಅಭಿಪ್ರಾಯಪಟ್ಟರು.ಪಟ್ಟಣದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರಕ್ರಿಯಾ ಚಟುವಟಿಕೆ ಕಾರ್ಯಕ್ರಮದಲ್ಲಿ ವೃಕ್ಷರೋಪಣ ನೆರವೇರಿಸಿ ಮಾತನಾಡಿದ ಅವರು, ಭೂಮಿಯ ಮೇಲಿನ ಮೊದಲ ಅತಿಥಿಯಾಗಿರುವ ಸಸ್ಯ ಜೀವಿಗಳ ಉಳಿವು ಮತ್ತು ರಕ್ಷಣೆ ತೀರ ಅಗತ್ಯ. ವೈಜ್ಞಾನಿಕ ವಿವೇಚನೆಯ ಜೊತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದವರು ಸಸ್ಯ ಸಂರಕ್ಷಣೆಯ ಕಾರ್ಯದ ಜೊತೆಗೆ ಅಪರೂಪದ ಸಸ್ಯ ಪ್ರಬೇಧಗಳನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು.ಔಷಧಿ ಸಸ್ಯಗಳ ತಜ್ಞ ಆನೆಗುಳಿ ಸುಬ್ಬರಾವ್ ಮಾತನಾಡಿ, ಸ್ಥಳೀಯ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಜೊತೆಗೆ ಅದರ ಬಗ್ಗೆ ಅರಿವು ಮೂಡಿಸಬೇಕು. ಅಪರೂಪದ ಸಸ್ಯಗಳನ್ನು ಸಂರಕ್ಷಣೆ ಮಾಡುವ ಮನೋಭಾವ ವೃದ್ಧಿಯಾಗಬೇಕು. ಮಾನವನ ಆರೋಗ್ಯಪೂರ್ಣ ಬದುಕಿಗೆ ಸಸ್ಯಗಳ ಉಳಿಯುವಿಕೆ ಅತ್ಯಗತ್ಯ ಎಂದು ಹೇಳಿದರು.
ಇಂದಿರಾಗಾಂಧಿ ಕಾಲೇಜು ಆವರಣದ ಸಸ್ಯಪ್ರಬೇಧಗಳ ದಾಖಲಾತಿ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಮಲೆನಾಡು ಉರಗ ಪ್ರಬೇಧಗಳ ಹಾಗೂ ಸಸ್ಯ ಪ್ರಬೇಧಗಳ ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಯಿತು. ಪ್ರಾಚಾರ್ಯೆ ಡಾ.ಎಚ್.ರಾಜೇಶ್ವರಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಎಸ್. ಭಟ್, ಡಾ.ಅಶ್ವಿನಿ, ಕೌಶಿಕ್, ಗಿರೀಶ್ ಜನ್ನೆ, ಡಾ.ಎಂ.ಜಿ.ರಂಗಣ್ಣನವರ್, ಡಾ.ರತ್ನಾಕರ್, ಡಾ.ರಮೇಶ್, ಬಿ.ಎನ್.ಸೌಮ್ಯ ಸೇರಿ ಇನ್ನಿತರರು ಹಾಜರಿದ್ದರು.