ರಾಮನಗರ: ವ್ಯಕ್ತಿಯೊಬ್ಬ ಮಾಟಮಂತ್ರದ ಹೆಸರಿನಲ್ಲಿ ಯುವತಿಗೆ 30 ಲಕ್ಷ ರುಪಾಯಿ ಆಮಿಷವೊಡ್ಡಿ, ಬೆತ್ತಲೆಯಾಗಿ ಪೂಜೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದ ಕಿರಣ್, ಪಕ್ಕದ ಮನೆಯ ಯುವತಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಫೋಟೋಗೆ ಪೀಡಿಸಿದವನು.

ಬೆಂಗಳೂರಿನಲ್ಲಿ ಕಾರು ಚಾಲಕನಾಗಿರುವ ಆರೋಪಿ ಕಿರಣ್, ಯುವತಿಗೆ ಮನಿ ಡಬ್ಲಿಂಗ್ ಮಾಡುವ ಪೂಜೆಗೆ ನಿನ್ನನ್ನು ಸೆಲೆಕ್ಟ್ ಮಾಡಬೇಕಾದರೆ ನೀನು ಬೆತ್ತಲೆ ಫೋಟೋ ಕಳಿಸು ಎಂದು ರಾತ್ರಿ ವೇಳೆ ಮೆಸೇಜ್‌ ಮಾಡುತ್ತಿದ್ದನು.

ಆ ಮೆಸೇಜ್‌ನಲ್ಲಿ ನಾನು ಬೆಂಗಳೂರಿನಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದೇನೆ. ಇದಕ್ಕೆ ಮೈ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕೂರಬೇಕು. ಆ ಪೂಜೆಗೆ ನಿನ್ನನ್ನು ಸೆಲೆಕ್ಟ್ ಮಾಡಲು ನಿನ್ನ ಬೆತ್ತಲೆ ಫೋಟೊ ಕಳುಹಿಸು. ಪೂಜೆ ಮುಗಿದ ಬಳಿಕ 30 ಲಕ್ಷ ರುಪಾಯಿ ಹಣ ಕೊಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದನು. ಇಷ್ಟೇ ಅಲ್ಲದೆ, ಇತರ ಕೆಲವು ಯುವತಿಯರ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ನಂಬಿಸಲು ಯತ್ನಿಸಿದ್ದಾನೆ.

ಏಪ್ರಿಲ್ 12ರಂದು ಆರೋಪಿ ಕಿರಣ್ ಕರೆ ಮಾಡಿದ್ದಾನೆ. ಇದರಿಂದ ರೋಸಿಹೋದ ಯುವತಿ ಮತ್ತು ಅವರ ಕುಟುಂಬಸ್ಥರು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕಿರಣ್ ಪರಾರಿಯಾಗಿದ್ದಾನೆ. ಎರಡು ದಿನಗಳ ಹಿಂದೆ ಮಹಿಳಾ ಠಾಣೆಗೆ ದೂರು ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.


ಮಾಟ-ಮಂತ್ರದ ಹೆಸರಿನಲ್ಲಿ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.