ಕನ್ನಡಪ್ರಭ ವಾರ್ತೆ ಗುಬ್ಬಿ

ಸಮಾಜದಲ್ಲಿ ಮನುಷ್ಯ ಉನ್ನತಿ ಪಡೆಯಲು ನಿರಂತರ ಶ್ರಮ ಜೀವಿಯಾಗಿ ದುಡಿಯಬೇಕು ಎಂದು ಬಾಳೆ ಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ನಿಟ್ಟೂರು ಹೋಬಳಿ ಬಾಗೂರು ಗೇಟ್ ಹತ್ತಿರ ಬಾಲಾಜಿ ಬಡಾವಣೆಯಲ್ಲಿ ಧರ್ಮ ಜಾಗೃತಿ ಸಮಾರಂಭ, ಇಷ್ಟಲಿಂಗ ಪೂಜೆ, ಹಾಗೂ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ವ್ಯಕ್ತಿ ಶ್ರಮಜೀವಿಯಾಗಿ ದುಡಿಯುತ್ತಾನೆಯೋ ಯಶಸ್ಸು ಐಶ್ವರ್ಯ ತಾನಾಗಿಯೇ ಬರುತ್ತದೆ. ತಂದೆ ತಾಯಿಗಳಿಗೆ 60 ವರ್ಷ ತುಂಬುತ್ತಿದ್ದಂತೆ ಶಕ್ತಿ ಕಡಿಮೆಯಾಗುವುದರಿಂದ ಮಕ್ಕಳು ತಂದೆ ತಾಯಿಗಳನ್ನು ಪೋಷಿಸಿ ಬೆಳೆಸುವುದು ಆದ್ಯ ಕರ್ತವ್ಯ. ತಂದೆ ತಾಯಿಯ ಬಯಕೆಯನ್ನು ಅರಿತು ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಿ ಅವರ ಇಷ್ಟ ಲಿಂಗ ಪೂಜೆ ಜೊತೆಗೆ ಗುರುಭಕ್ತಿ, ಧರ್ಮನಿಷ್ಠೆಯಿಂದ ವರ್ತಕ ಸಚಿನ್ ಮಾಡಿರುವುದು ಸಾರ್ಥಕವಾದ ಸೇವೆಯಾಗಿದೆ ಎಂದರು. ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ತಂದೆ ತಾಯಿಗಳ ಆಸೆಯಂತೆ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭಕ್ಕೆ ಸುಮಾರು 25 ರಿಂದ 30 ಸ್ವಾಮೀಜಿಗಳನ್ನು ಕರೆಸಿ ಆಶೀರ್ವಾದ ಮಾಡಿಸುತ್ತಿರುವುದು ಸಮಾಜಕ್ಕೆ ಒಂದು ಮಾದರಿಯಾದ ಸಂದೇಶವಾಗಿದೆ ಎಂದರು.ಸಿದ್ದರಬೆಟ್ಟ ಮಠದ ಶ್ರೀ ವೀರಭದ್ರ ಸ್ವಾಮೀಜಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಸಂವತ್ಸರ ಲೆಕ್ಕದ ಆಚರಣೆ ಪ್ರಾಮುಖ್ಯತೆ ಪಡೆದಿದೆ. ಮನುಷ್ಯನ ಆಯಸ್ಸು 120 ವರ್ಷ ಎಂಬ ಮಾತು ಧಾರ್ಮಿಕ ಕ್ಷೇತ್ರದಲ್ಲಿದೆ. ಈ ಆಯಸ್ಸಿನ ಅರ್ಧ ಭಾಗ 60 ವರ್ಷ ಮನುಷ್ಯನ ಕುಗ್ಗುವಿಕೆ ತೋರುತ್ತದೆ. ಈ ಸಮಯ ಆಧ್ಯಾತ್ಮಿಕತೆಯತ್ತ ವಾಲಬೇಕು ಎಂಬ ನಿಟ್ಟಿನಲ್ಲಿ ಷಷ್ಠಿ ಪೂರ್ತಿ ಕಾರ್ಯಕ್ರಮ ನಡೆಯುತ್ತದೆ ಎಂದು ವಿವರಿಸಿದರು.ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ ಗುರಿಯ ಹಿಂದೆ ಗುರು ಇರಬೇಕು ಎಂಬ ಮಾತು ಅಕ್ಷರಶಃ ಸತ್ಯ. ಎಲ್ಲಾ ವರ್ಗದ ಜನರೊಂದಿಗೆ ಇಷ್ಟಲಿಂಗ ಪೂಜೆ ಆಯೋಜಿಸಿದ ವರ್ತಕ ಸಚಿನ್ ನಡೆ ಯುವಕರಿಗೆ ದಾರಿ ಎಂದರು. ಸಮಾರಂಭದಲ್ಲಿ ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಎಡೆಯೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ, ಚನ್ನಗಿರಿ ಮಠದ ಶ್ರೀ ಕೇದಾರಲಿಂಗ ಶಿವಶಾಂತ ವೀರ ಸ್ವಾಮೀಜಿ, ಸಂಗೊಳ್ಳಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಹೊನ್ನುಡಿಕೆ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಪಿ. ಬಿ.ಚಂದ್ರಶೇಖರಬಾಬು, ಎನ್.ಸಿ.ಪ್ರಕಾಶ್, ಜಿಪಂ ಮಾಜಿ ಸದಸ್ಯೆ ಡಾ.ನವ್ಯಬಾಬು, ತೆವಡೇಹಳ್ಳಿಯ ಸದಾಶಿವಯ್ಯ, ಪ್ರಸನ್ನಕುಮಾರ್, ದಕ್ಷಿಣಾಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಚಂದ್ರಶೇಖರ, ಉಷಾ, ಲತಾ, ವರ್ತಕ ಸಚಿನ್, ಇತರರು ಇದ್ದರು.