ಸಾರಾಂಶ
ಬಾಗಲಕೋಟೆ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಪಡೆಯಲು ವ್ಯಕ್ತಿಯೊಬ್ಬ ಮಹಿಳೆಯ ರೀತಿ ಸೀರೆಯುಟ್ಟು ಫೋಟೋ ತೆಗೆಸಿಕೊಂಡ ಹಾಗೂ ಒಂದೇ ಫೋಟೋವನ್ನು 3 ಕಡೆ ವಿವಿಧ ಹೆಸರಿನಲ್ಲಿ ಅಪ್ಲೋಡ್ ಮಾಡಿ ಕೂಲಿ ಹಣ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕನಾಳ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ನಡೆದಿತ್ತು. ಅದರ ಕೂಲಿ ಹಣ ಪಡೆಯಲು ವ್ಯಕ್ತಿಯೋರ್ವ ಮಹಿಳೆಯ ರೀತಿ ವೇಷ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋವನ್ನು ಸ್ವತ ಗ್ರಾಮ ಪಂಚಾಯತಿ ಅಧಿಕಾರಿಗಳೇ ಅಪ್ಲೋಡ್ ಮಾಡಿದ್ದಾರೆ. ಸೀರೆಯುಟ್ಟ ಪುರುಷನ ಫೋಟೋವನ್ನು ಮಂಗಳಮ್ಮ ಆರಿ ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡಿ ಬಿಲ್ ಪಡೆಯಲಾಗಿದೆ.
ಒಂದೇ ಫೋಟೊವನ್ನು ಮೂರು ಕಡೆ ಅಪ್ಲೋಡ್ ಮಾಡಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಹೇಗೆ ನಡೆಯಿತು ವಂಚನೆ?
- ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ಫೆಬ್ರವರಿಯಲ್ಲಿ ಖಾತ್ರಿ ಕಾಮಗಾರಿ
- ಅದರ ಕೂಲಿ ಹಣ ಪಡೆಯಲು ಮಹಿಳೆಯ ರೀತಿ ವೇಷ ಧರಿಸಿ ಫೋಟೋ ತೆಗೆಸಿಕೊಂಡ ಗ್ರಾಮದ ವ್ಯಕ್ತಿ
- ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಲೇ ಈ ಫೋಟೋ ಅಪ್ಲೋಡ್. ಬಿಲ್ ಮಂಜೂರು!
- ಮಂಗಳಮ್ಮ ಆರಿ ಎಂಬ ಹೆಸರಿಟ್ಟು ಕೂಲಿ ಹಣ ವಿತರಣೆ. ಭಾರಿ ಗೋಲ್ಮಾಲ್ ಕುರಿತು ತೀವ್ರ ಚರ್ಚೆ
- ಈ ಅಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂದು ದಟ್ಟ ಶಂಕೆ