ಹುಬ್ಬಳ್ಳಿ:
ನಗರದ ಡಿಕೆಎಸ್ ಸೊಸೈಟಿಯ ಚೇತನ್ ಬಿಸಿನೆಸ್ ಸ್ಕೂಲ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ಚಕ್ರವ್ಯೂಹ 2ಕೆ26ಗೆ ಗುರುವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಡಾ. ವಿಎಸ್ವಿ ಪ್ರಸಾದ, ವಿಶ್ವಾದ್ಯಂತ ಸ್ಪರ್ಧಾತ್ಮಕ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ಯಶಸ್ಸು ಸಾಧಿಸಲು ಶಿಸ್ತು, ಸಮರ್ಪಣೆ ಹಾಗೂ ದೂರದೃಷ್ಟಿ ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು.
ಕೃತಕ ಬುದ್ಧಿಮತ್ತೆ ಅನುಕೂಲಕರವಾಗಿದ್ದರೂ ಅದರ ಮೇಲಿನ ಸಂಪೂರ್ಣ ಅವಲಂಬನೆ ಅಪಾಯಕಾರಿ ಎಂದು ಎಚ್ಚರಿಸಿದರು.ಹೆಡ್ ಆಫ್ ಪ್ರಾಡಕ್ಟ್ನ ವಿಷ್ಲೇಷಾ ಪಾಟೀಲ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ, ವ್ಯಕ್ತಿತ್ವ ವಿಕಾಸ ಹಾಗೂ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗುತ್ತವೆ. ಅಮೆರಿಕದಲ್ಲಿ ಇಂತಹ ಚಟುವಟಿಕೆಗಳು ಸಾಮಾನ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮೊಳಗಿನ ನಾಯಕತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿರಂತರ ಅಧ್ಯಯನ ಮತ್ತು ಹೊಂದಾಣಿಕೆಯ ಮನೋಭಾವ ಇಂದಿನ ಕಾಲದ ಅಗತ್ಯವೆಂದ ಅವರು, ಎಐನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಅದನ್ನು ಜವಾಬ್ದಾರಿಯುತ ಮತ್ತು ಸದುದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ವಿದ್ಯಾರ್ಥಿಗಳು ನ್ಯಾಯ, ಗೌರವ ಮತ್ತು ಕ್ರೀಡಾಸ್ಫೂರ್ತಿಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ನಿರ್ದೇಶಕ ಡಾ. ವಿ.ಎಂ. ಕೊರಾವಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಯೋಜಕ ಪ್ರೊ. ಶ್ರೇಯಸ್ ಮುರುಡೇಶ್ವರ, ಪ್ರೊ. ಅನಿರುದ್ಧ ಅಂಕೋಲೇಕರ್, ಪ್ರೊ. ಮಣಿಕ್, ಪ್ರೊ. ಮಂಗಳಾ ಯಾರಗಟ್ಟಿ, ಪ್ರೊ. ರಾಮಕಾಂತ ಕುಲಕರ್ಣಿ, ವಿದ್ಯಾರ್ಥಿ ಸಂಯೋಜಕರಾದ ಕಾವೇರಿ ಕುಲಕರ್ಣಿ ಮತ್ತು ಮೋಹಿತ್ ಧರ್ಮದಾಸ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.