ಗುಣಮಟ್ಟದ ಚಿಕಿತ್ಸೆ ಕಾವೇರಿ ಆಸ್ಪತ್ರೆಯ ಮೂಲಮಂತ್ರ:ಡಾ. ಲೋಹಿತ್

| Published : May 23 2024, 01:01 AM IST

ಸಾರಾಂಶ

ರೋಗಿಗಳ ನೋವಿಗೆ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡುವುದೇ ನಮ್ಮ ಆಸ್ಪತ್ರೆಯ ಮೂಲಮಂತ್ರವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಖರ್ಚಿನ ಅರ್ಧ ಭಾಗ ಕಡಿಮೆ ಖರ್ಚಿನಲ್ಲಿ ನಾವು ಉತ್ತಮ ಚಿಕಿತ್ಸೆ ನೀಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಹುಣಸೂರು

ರೋಗಿಗಳ ನೋವಿಗೆ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡುವುದೇ ಕಾವೇರಿ ಆಸ್ಪತ್ರೆಯ ಮೂಲಮಂತ್ರವಾಗಿದೆ ಎಂದು ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಹಿತ್ ಎಂದು ಹೇಳಿದರು.

ಪಟ್ಟಣದಲ್ಲಿ ಬುಧವಾರ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಸಾರ್ವಜನಿಕ ಸೇವೆಗೆ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಗಿಗಳ ನೋವಿಗೆ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡುವುದೇ ನಮ್ಮ ಆಸ್ಪತ್ರೆಯ ಮೂಲಮಂತ್ರವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಖರ್ಚಿನ ಅರ್ಧ ಭಾಗ ಕಡಿಮೆ ಖರ್ಚಿನಲ್ಲಿ ನಾವು ಉತ್ತಮ ಚಿಕಿತ್ಸೆ ನೀಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸಾಮಾನ್ಯವಾಗಿ ಸ್ಥಾಪಿಸುವುದಿಲ್ಲ. ಕಾರಣ ಲಾಭದಾಯಕ ಘಟಕವಾಗುವುದಿಲ್ಲ, ಆದರೆ ನಾನು ಈ ಭಾಗದ ಜನರ ಬವಣೆಯನ್ನು ಕಂಡು ತೆರೆದಿದ್ದೇನೆ. ನಾಲ್ಕು ಹಾಸಿಗೆಗಳ ಸಾಮರ್ಥ್ಯದ ಡಯಾಲಿಸಿಸ್ ಘಟಕದಲ್ಲಿ ಪ್ರತಿದಿನ ಕನಿಷ್ಟ 20 ಮಂದಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ. ಜಪಾನ್ ನಿರ್ಮಿತ ಉತ್ಕೃಷ್ಟ ಗುಣಮಟ್ಟದ ಡಯಾಲಿಸಿಸ್ ಘಟಕವನ್ನು ಹೊಂದಿದ್ದೇವೆ. ಗ್ರಾಮೀಣ ಜನರು ಸೌಲಭ್ಯ ಪಡೆದುಕೊಳ್ಳಬೇಕೆಂದು ಕೋರಿದರು.

ಉತ್ತಮ ಸೇವೆಗೆ ಎಚ್. ವಿಶ್ವನಾಥ್ ಶ್ಲಾಘನೀಯ

ಡಯಾಲಿಸಿಸ್ ಘಟಕವನ್ನು ಸಾರ್ವಜನಿಕ ಸೇವೆ ಸಮರ್ಪಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಉತ್ತಮ ಆರೋಗ್ಯ ಪಡೆಯುವ, ತನ್ನಿಚ್ಛೆಯ ಶಿಕ್ಷಣ ಕಲಿಯುವ ಮತ್ತು ಉದ್ಯೋಗ ನಿರ್ವಹಿಸುವ ಸ್ವಾತಂತ್ರ್ಯ ಇರಬೇಕೆಂದು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಅದನ್ನು ಸಂವಿಧಾನದಲ್ಲೂ ತಿಳಿಸಿದ್ದಾರೆ ಎಂದರು.

ಆದರೆ ಇಂದು ನಾವು ಅಂಬೇಡ್ಕರ್ ಅವರ ಮಾತಿಗೆ ಮತ್ತು ಸಂವಿಧಾನ ಎರಡಕ್ಕೂ ಬೆಲೆ ನೀಡುತ್ತಿಲ್ಲ. ಜನರು ನೋವು ಅನುಭವಿಸುತ್ತಿರುವ ವಿಷಯಗಳ ಕುರಿತು ಸರ್ಕಾರಗಳು ಗಮನಿಸಿ ಅದಕ್ಕೆ ಪರಿಹಾರ ನೀಡಬೇಕೆ ಹೊರತು ಗ್ಯಾರೆಂಟಿಗಳನ್ನು ನೀಡಿದ್ದೇವೆಂದು ಪ್ರಯೋಜನವಿಲ್ಲದ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.

7 ಲಕ್ಷ ಕೋಟಿ ರು.ಗಳ ಸಾಲ ರಾಜ್ಯದ ಜನರ ತಲೆಮೇಲಿದೆ. ತೀರಿಸುವವರು ಯಾರು? ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಮಾರುಹೋಗಿ ಮತ ಚಲಾಯಿಸುವುದು ಅಂಬೇಡ್ಕರ್ ನೀಡಿದ ಪ್ರಜಾಪ್ರಭುತ್ವವಲ್ಲ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸರ್ಕಾರಗಳು ಜನರ ಬವಣೆ ತೀರಿಸಬೇಕು. ಹುಣಸೂರು ಉಪವಿಭಾಗವ್ಯಾಪ್ತಿಯಲ್ಲಿ ಕಾವೇರಿ ಆಸ್ಪತ್ರೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ಡಯಾಲಿಸಿಸ್ ನಂತಹ ಘಟಕಗಳು ಅವಶ್ಯಕತೆ ಅತ್ಯಗತ್ಯವಾಗಿತ್ತು ಎಂದರು.

ನಗರಸಭಾ ಸದಸ್ಯರಾದ ಗಣೇಶ್, ಕುಮಾರಸ್ವಾಮಿ, ಕೃಷ್ಣರಾಜ ಗುಪ್ತಾ, ಶರವಣ, ರಾಧಾ, ರಾಣಿ ಪೆರುಮಾಳ್, ದೇವರಾಜ್, ಸಿರಾಜ್, ನಾಗರಾಜ ಮಲ್ಲಾಡಿ, ಸತೀಶ್ ಪಾಪಣ್ಣ, ಶಿವಶೇಖರ್, ಸರ್ದಾರ್, ವಾಸೇಗೌಡ, ಡಿ.ಕೆ. ಕುನ್ನೇಗೌಡ, ಡಿ. ಕುಮಾರ್, ನಿಂಗರಾಜ ಮಲ್ಲಾಡಿ, ವೆಂಕಟರಮಣ, ಎ.ಪಿ. ಸ್ವಾಮಿ, ನರಸಿಂಹ, ಬಲ್ಲೇನಹಳ್ಳಿ ಕೆಂಪರಾಜು ಇದ್ದರು.