ಕೊಡವ ಸಂಸ್ಕೃತಿಯ ಹೆಗ್ಗುರು ಮಂದ್‌ಗಳನ್ನು ಪುನರುಜ್ಜೀವನಗೊಳಿಸಬೇಕು: ಡಾ. ಅಮೃತ್ ನಾಣಯ್ಯ

| Published : Dec 02 2023, 12:45 AM IST

ಕೊಡವ ಸಂಸ್ಕೃತಿಯ ಹೆಗ್ಗುರು ಮಂದ್‌ಗಳನ್ನು ಪುನರುಜ್ಜೀವನಗೊಳಿಸಬೇಕು: ಡಾ. ಅಮೃತ್ ನಾಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಸಂಸ್ಕೃತಿಯ ಹೆಗ್ಗುರುತಾದ ಮಂದ್‌ಗಳ ಪುನರ್ಜೀವನ ಗೊಳಿಸಬೇಕಾಗಿದೆ. ಮಂದ್‌ಗಳು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ವೇದಿಕೆಯಾಗಬೇಕು ಎಂದು ಗೋಣಿಕೊಪ್ಪ ಲೋಪಾಮುದ್ರಾ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥರಾದ ಮುಕ್ಕಾಟಿರ ಡಾ. ಅಮೃತ್ ನಾಣಯ್ಯ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡವ ಸಂಸ್ಕೃತಿಯ ಹೆಗ್ಗುರುತಾದ ಮಂದ್‌ಗಳ ಪುನರ್ಜೀವನ ಗೊಳಿಸಬೇಕಾಗಿದೆ. ಮಂದ್‌ಗಳು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ವೇದಿಕೆಯಾಗಬೇಕು ಎಂದು ಗೋಣಿಕೊಪ್ಪ ಲೋಪಾಮುದ್ರಾ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥರಾದ ಮುಕ್ಕಾಟಿರ ಡಾ. ಅಮೃತ್ ನಾಣಯ್ಯ ಪ್ರತಿಪಾದಿಸಿದರು.

ಅವರು ಟಿ. ಶೆಟ್ಟಿಗೇರಿಯ ಐತಿಹಾಸಿಕ ತಾಳೇರಿ ಮೂಂದ್ ನಾಡ್ ಕೋಲ್ ಮಂದ್್‌ನಲ್ಲಿ ಪುತ್ತರಿ ಕೋಲ್ ಮಂದ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ಪೂರ್ವಜರ ಕಾಲದಲ್ಲಿ ಕೊಡಗಿನಲ್ಲಿ ಒಗ್ಗಟ್ಟು ಬಲವಾಗಿತ್ತು. ತಂದೆ ಮತ್ತು ನಮ್ಮ ಕಾಲದಲ್ಲಿ ಉದ್ಯೋಗ ಶಿಕ್ಷಣ ಇನ್ನಿತರ ಕಾರಣದಿಂದ ನಾವು ಜಿಲ್ಲೆಯಿಂದ ಹೊರಗೆ ನೆಲೆಸಿದಂತ ಸಂದರ್ಭದಲ್ಲಿ ಆಚರಣೆ ಮತ್ತು ಸಾಂಸ್ಕೃತಿಕ ವೈಭವ ಕಡಿಮೆಯಾಯಿತು. ಈಗಿನ ಪೀಳಿಗೆ ಮತ್ತೆ ಗತವೈಭವ ಪುನರ್‌ಸ್ಥಾಪಿಸಲು ಉತ್ಸುಕತೆ ತೋರಿಸುತ್ತಿದ್ದಾರೆ. ಸಮಯಕ್ಕೆ ತಕ್ಕಂತೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲಕ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಣಿಕೊಪ್ಪ ಲೋಪಾಮುದ್ರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮುಕ್ಕಾಟೀರ ಡಾ. ಸೌಮ್ಯ ಗಣೇಶ್ ನಾಣಯ್ಯ ಮಾತನಾಡಿ ಮಕ್ಕಳಿರುವಾಗಲೇ ಶಿಕ್ಷಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ಭಾಷೆ ಸಂಸ್ಕೃತಿ ಪದ್ಧತಿ ಪರಂಪರೆಗೆ ಅರಿವು ಬೆಳೆಸಿಕೊಂಡು ಅದರ ಬೆಳವಣಿಗೆಗೆ ಒತ್ತು ನೀಡಬೇಕು. ನಾವು ಕೊಡಗಿನ ಹೊರಗೆ ಹೋದರೂ ಕೊಡಗಿನ ಬಗ್ಗೆ ಯೋಚಿಸಬೇಕು ನಮ್ಮ ತಾಯಿ ಬೇರು ಕೊಡಗು ನಮ್ಮ ಸಂಸ್ಕೃತಿ ನಮ್ಮ ನಾಡಿನ ಪರಂಪರೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು ನಮ್ಮ ಜೊತೆ ನಮ್ಮ ಜನರನ್ನು ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಳೇರಿ ಮೂಂದ್ ನಾಡ್ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಪ್ರತಿ ವರ್ಷ ಈ ಮಂದ್‌ನಲ್ಲಿ ಈ ಸಮಾಜಕ್ಕೆ ಮಣ್ಣಿನಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸನ್ಮಾನ ಮಾಡುವ ಪದ್ಧತಿ ನಡೆಸಲಾಗುತ್ತಿದೆ. ಮುಂದಿನ ವರ್ಷದಿಂದ ಈ ತಾಳೇರಿ ಮಂದ್‌ಗೆ ಸೇರಿದ ಮರೆನಾಡ್ ವ್ಯಾಪ್ತಿಯ ಜನರನ್ನು , ತಕ್ಕ ಮುಖ್ಯಸ್ಥರನ್ನು ಸಹ ಸೇರಿಸಿ ಪರಿಪೂರ್ಣವಾಗಿ ಮಂದ್ ಆಚರಿಸಲು ಪ್ರಯತ್ನಿಸಲಾಗುವುದು ಎಂದರು. ಸಾಂಪ್ರದಾಯಿಕ ಪುತ್ತರಿ ಕೋಲಾಟ್ ದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ: ‘ತಿಂಗಕೊರ್ ಮೊಟ್ಟ್ ತಲಕಾವೇರಿ’, ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಯ ತಂಡಗಳಿಂದ ಪುತ್ತರಿ ಕೋಲಾಟ್, ಪರಿಯಕಳಿ, ಉಮ್ಮತಾಟ್ ಹಾಗೂ ಕೊಡವ ಸಾಂಸ್ಕೃತಿಕ ನೃತ್ಯ ಪ್ರದರ್ಶನ, ಚೆಟ್ಟಂಗಡ ಲೇಖನ ಅಕ್ಕಮ್ಮ, ಮತ್ತು ಚೆಟ್ಟಂಗಡ ರಮ ಉತ್ತಪ್ಪ ಅವರ ಕೊಡವ ಹಾಡು ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಹಗ್ಗ ಜಗ್ಗಾಟ ಸ್ಪರ್ಧೆ: ಮಂದ್‌ನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಮಹಿಳೆಯರ ವಿಭಾಗದಲ್ಲಿ ವಗರೆ ತಂಡ ಪ್ರಥಮ ಸ್ಥಾನ,ಟಿ.ಶೆಟ್ಟಿಗೇರಿ ತಂಡ ದ್ವಿತೀಯ ಸ್ಥಾನ ಹಾಗೂ ನೆಮ್ಮಲೆ ತಂಡ ತೃತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ನೆಮ್ಮಲೆ ತಂಡ ಪ್ರಥಮ ಸ್ಥಾನ, ವಗರೆ ತಂಡ ದ್ವಿತೀಯ ಸ್ಥಾನ, ಮತ್ತು ತಾವಳಗೇರಿ ತಂಡ ತೃತೀಯ ಸ್ಥಾನ ಪಡೆಯಿತು.

ಇದಕ್ಕೂ ಮೊದಲು ಟಿ.ಶೆಟ್ಟಿಗೇರಿ ಕೊರಕೋಟ್ ಅಯ್ಯಪ್ಪ ದೇವರ ಕುದುರೆ, ತಾವಳಗೇರಿ ಮಹಾದೇವರ ಕುದುರೆ ಮಂದ್‌ಗೆ ಪ್ರವೇಶಿಸಿದ ನಂತರ ಕಾರ್ಯಕ್ರಮ ಆರಂಭವಾಯಿತು.

ವೇದಿಕೆಯಲ್ಲಿ ತಾವಳಗೇರಿ ಮಹಾದೇವರ ತಕ್ಕರಾದ ತಡಿಯಂಗಡ ರಮೇಶ್, ತಾವಳಗೇರಿ ಸುಬ್ರಮಣ್ಯ ದೇವರ ತಕ್ಕರಾದ ಕುಪ್ಪುಡೀರ ತಿಲಕದಾಸ್, ತಾವಳಗೇರಿ ಭದ್ರಕಾಳಿ ದೇವ ತಕ್ಕರಾದ ಮನ್ನೇರ ರಾಜು ಮೊಣ್ಣಪ್ಪ, ತಾವಳಗೇರಿ ಮುತ್ತಪ್ಪ ದೇವರ ತಕ್ಕರಾದ ಮಾಂಗುಟ್ಟಿರ ಕಾಶಿ ಉತ್ತಪ್ಪ, ಟಿ-ಶೆಟ್ಟಿಗೇರಿ ಕೊರ ಕೋಟ್ ಅಯ್ಯಪ್ಪ ದೇವ ತಕ್ಕರಾದ ಚೊಟ್ಟೆ ಕೊರಿಯಂಡ ಶ್ರೀನಿವಾಸ್, ಟಿ-ಶೆಟ್ಟಿಗೇರಿ ವಗರೆ ಅಯ್ಯಪ್ಪ ದೇವ ತಕ್ಕರಾದ ಕಟ್ಟೇರ ಅಚ್ಚಪ್ಪ, ನೆಮ್ಮಲೆ ಗ್ರಾಮದೇವರ ತಕ್ಕರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ ಹಾಜರಿದ್ದರು.

ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿದರು. ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಸ್ವಾಗತಿಸಿದರು. ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿದರು. ಕಟ್ಟೇರ ಈಶ್ವರ ವಂದಿಸಿದರು. ಮಂದ್ ಸಮಿತಿ ಅಧ್ಯಕ್ಷ ಕೈಬುಲೀರ ಸುರೇಶ್, ಕಾರ್ಯದರ್ಶಿ ಕೊಟ್ರಮಾಡ ಸುಮಂತ್ ಹಾಜರಿದ್ದರು.