ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತಕ್ಕೆ ಪರ್ಯಾಯ ವಸ್ತು ಯಾವುದೂ ಇಲ್ಲ. ರಕ್ತಕ್ಕೆ ರಕ್ತವೇ ಮೂಲ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವುದು ಸಮಾಜಕ್ಕೆ ಮಾದರಿ ಕಾರ್ಯ ಎಂದು ಚರ್ಮರೋಗ ಮತ್ತು ಕುಷ್ಠರೋಗ ಲೈಂಗಿಕ ತಜ್ಞ ಡಾ.ಎಸ್.ಸಿ.ಶಂಕರೇಗೌಡ ತಿಳಿಸಿದರು.

ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಚನ್ನಮ್ಮನವರ ಉತ್ತರ ಕ್ರಿಯಾದಿ ಭೂ ಶಾಂತಿ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಅಗಲಿದವರ ಹೆಸರಿನಲ್ಲಿ ನಡೆಸುವ ರಕ್ತದಾನದಿಂದ ಉಸಿರಿಲ್ಲದಿದ್ದರೂ ಹೆಸರು ಶಾಶ್ವತವಾಗಿ ಇರುವಂತೆ ಮಾಡುತ್ತದೆ. ಎಲ್ಲ ವಸ್ತುಗಳು ದುಬಾರಿಯಾಗಿರುವ ಪ್ರಸ್ತುತ ದಿನಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸಾಮಾಜಿಕ ಕಳಕಳಿ ಇಟ್ಟುಕೊಂಡು ರಕ್ತದಾನ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಕ್ತದಾನ, ಸಸಿ ವಿತರಿಸಿ ಪುಣ್ಯಸ್ಮರಣೆಯನ್ನು ಮೊಮ್ಮೊಗ, ಮಗ, ಕುಟುಂಬದವರು ಸೇರಿ ನೆರವೇರಿಸಿದರು. ಚನ್ನಮ್ಮನವರ ಮೊಮ್ಮೊಗ ಟಿ.ಪ್ರತಾಪ್ ನೆಲದನಿ ಬಳಗದ ಮುಖ್ಯಸ್ಥರಾಗಿ ನಿರಂತರ ೪೫ ನೇ ಬಾರಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ಸಸಿ ವಿತರಿಸಿದರು.

ಅಲೈ ಕೆ.ಟಿ.ಹನುಮಂತು, ಅಲೈ ಶಶಿಧರ ಈಚಗೆರೆ, ನೆಲದನಿ ಬಳಗದ ಪೋಷಕರು ರುಕ್ಮಿಣಿ ಶಂಕರೇಗೌಡ, ವಕೀಲ ಮಲ್ಲಯ್ಯನದೊಡ್ಡಿ ಎಂ.ಕೆ. ಶ್ರೀನಿವಾಸಮೂರ್ತಿ, ಜಿ.ಎನ್.ಕೆಂಪರಾಜು, ಎಲ್ಲರೊಳಗೊಂದಾಗು ಎಂ.ವಿನಯ್‌ಕುಮಾರ್, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಮಹಮ್ಮದ್ ರಫಿ, ತಿಮ್ಮೇಗೌಡ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್, ಎಂ.ಸಿ.ಕುಮಾರ್‌ಗೌಡ, ರಕ್ಷಿತ್‌ರಾಜ್, ರಶ್ಮಿ ಪ್ರತಾಪ್, ಸುನೀತಾ ಲಂಕೇಶ್, ಶಿವಮಲ್ಲು ಲೋಕಸರ ಮತ್ತಿತರರಿದ್ದರು.