೨೬ ದಿನದಲ್ಲಿ ಮಂಡ್ಯ ಜಿಲ್ಲೆಯಲ್ಲಿ ೧೪೫ ಮಿ.ಮೀ. ದಾಖಲೆಯ ಮಳೆ

| Published : May 27 2025, 12:01 AM IST

ಸಾರಾಂಶ

ಹದಿನೈದು ವರ್ಷಗಳ ಬಳಿಕ ಮಂಡ್ಯ ಜಿಲ್ಲೆಯೊಳಗೆ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಮೇ ತಿಂಗಳಲ್ಲಿ ಬೀಳಬೇಕಿದ್ದ ೮೩.೫ ಮಿ.ಮೀ. ಮಳೆಗೆ ೧೪೫.೫ ಮಿ.ಮೀ. ಮಳೆ ಸುರಿದಿದೆ. ಮುಂಗಾರು ಎಂಟು ದಿನ ಮುಂಚಿತವಾಗಿ ಆಗಮಿಸಿರುವುದರಿಂದ ಎಲ್ಲೆಡೆ ವರುಣ ಬಿರುಸುಗೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹದಿನೈದು ವರ್ಷಗಳ ಬಳಿಕ ಮಂಡ್ಯ ಜಿಲ್ಲೆಯೊಳಗೆ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಮೇ ತಿಂಗಳಲ್ಲಿ ಬೀಳಬೇಕಿದ್ದ ೮೩.೫ ಮಿ.ಮೀ. ಮಳೆಗೆ ೧೪೫.೫ ಮಿ.ಮೀ. ಮಳೆ ಸುರಿದಿದೆ. ಮುಂಗಾರು ಎಂಟು ದಿನ ಮುಂಚಿತವಾಗಿ ಆಗಮಿಸಿರುವುದರಿಂದ ಎಲ್ಲೆಡೆ ವರುಣ ಬಿರುಸುಗೊಂಡಿದ್ದಾನೆ.

ಮೇ ತಿಂಗಳಲ್ಲಿ ಈ ವರ್ಷ ಕೆ.ಆರ್.ಪೇಟೆ ತಾಲೂಕಿನಲ್ಲಿ ೧೭೧.೭ ಮಿ.ಮೀ., ಮದ್ದೂರು-೧೫೫.೩ ಮಿ.ಮೀ., ಮಳವಳ್ಳಿ-೧೫೧ ಮಿ.ಮೀ., ಮಂಡ್ಯ-೧೪೭.೬ ಮಿ.ಮೀ., ನಾಗಮಂಗಲ-೧೨೦.೭ ಮಿ.ಮೀ., ಪಾಂಡವಪುರ ೧೨೮.೩ ಮಿ.ಮೀ. ಹಾಗೂ ಶ್ರೀರಂಗಪಟ್ಟಣ ತಾಲೂಕಿನಲಲ್ಲಿ ೧೪೪.೧ ಮಿ.ಮೀ. ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.

ಕಳೆದೆರಡು ದಿನಗಳಿಂದ ಜಿಲ್ಲಾದ್ಯಂತ ವರ್ಷಧಾರೆ ಚುರುಕನ್ನು ಪಡೆದುಕೊಂಡಿದೆ. ಭಾನುವಾರ ಬೆಳಗ್ಗೆ ೮.೩೦ರಿಂದ ಸೋಮವಾರ ಬೆಳಗ್ಗೆ ೮ ಗಂಟೆಯವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ ೪.೭ ಮಿ.ಮೀ.ಗೆ ಬದಲಾಗಿ ೧೭.೨ ಮಿ.ಮೀ. ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ೨೧.೬ ಮಿ.ಮೀ., ಮದ್ದೂರು- ೧೩.೨ ಮಿ.ಮೀ., ಮಳವಳ್ಳಿ-೧೧..೮ ಮಿ.ಮೀ., ಮಂಡ್ಯ-೧೪.೭ ಮಿ.ಮೀ., ನಾಗಮಂಗಲ ೯.೭ ಮಿ.ಮೀ., ಪಾಂಡವಪುರ-೨೦.೭ ಮಿ.ಮೀ. ಹಾಗೂ ಶ್ರೀರಂಗಪಟ್ಟಣದಲ್ಲಿ ೨೬.೧ ಮಿ..ಮೀ. ಮಳೆಯಾಗಿದೆ.

ಕಳೆದೆರಡು ದಿನಗಳಿಂದ ಮಂಡ್ಯ ಜಿಲ್ಲೆಯಲ್ಲಿ ಮಳೆ ಚುರುಕನ್ನು ಪಡೆದುಕೊಂಡಿದೆ. ಒಮ್ಮೊಮ್ಮೆ ಬಿರುಸನ್ನು ಪಡೆದುಕೊಂಡರೆ ಉಳಿದಂತೆ ಜಿಟಿ ಜಿಟಿಯಾಗಿ ಮಳೆ ಸುರಿಯುತ್ತಿರುತ್ತದೆ. ಇದರಿಂದ ವಾತಾವರಣ ತಂಪಾಗಿದ್ದು, ಮಳೆಯಿಂದ ಜನಜೀವನಕ್ಕೆ ಸ್ವಲ್ಪ ಅಡಚಣೆ ಉಂಟಾಗಿದೆ.

ಮೈದುಂಬಿದ ಕಾವೇರಿ, ಹೇಮಾವತಿ:

ಕಳೆದೆರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದೇ ರೀತಿ ಹೇಮಾವತಿ ಜಲಾನಯನ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಕೆಆರ್‌ಎಸ್ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಹಾರಂಗಿ ಜಲಾಶಯ ಹಾಗೂ ಹೇಮಾವತಿ ಜಲಾನಯನ ಪ್ರದೇಶದ ಹೇಮಾವತಿ ಜಲಾಶಯ ಭರ್ತಿಯಾದ ನಂತರವಷ್ಟೇ ಕೆಆರ್‌ಎಸ್‌ಗೆ ಅಧಿಕ ಪ್ರಮಾಣದ ಒಳಹರಿವು ದಾಖಲಾಗಲಿದೆ.

ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ:

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಸೋಮವಾರ ಜಲಾಶಯದಲ್ಲಿ ೮೯.೩೫ ಅಡಿ ನೀರು ದಾಖಲಾಗಿತ್ತು. ಜಲಾಶಯಕ್ಕೆ ೨೦೫೩ ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ೩೪೭ ಕ್ಯುಸೆಕ್ ನೀರನ್ನು ಹೊರಗೆ ಹರಿಯಬಿಡಲಾಗುತ್ತಿತ್ತು. ಜಲಾಶಯದಲ್ಲಿ ಹಾಲಿ ೭.೧೭೬ ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.ಜೂ.೧ರವರೆಗೆ ಮಳೆಯ ವಾತಾವರಣ ಮುಂದುವರೆಯಲಿದೆ. ರೈತರು ಹೊಲಗಳಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿಕೊಳ್ಳುವುದು ಉತ್ತಮ. ರಾಗಿ- ಭತ್ತವನ್ನು ಈಗಲೇ ಕಟಾವು ಮಾಡುವುದು ಬೇಡ. ಜೂ.೧ರ ನಂತರ ಮಳೆ ಕಡಿಮೆಯಾಗುವುದರಿಂದ ಆ ಸಮಯದಲ್ಲಿ ಕಟಾವು ಮಾಡುವುದು ಒಳ್ಳೆಯದು. ಮುಂಗಾರು ಮಳೆ ಎಂಟು ದಿನ ಮುಂಚಿತವಾಗಿ ಕಾಲಿಟ್ಟಿದ್ದು, ಆರಂಭದಲ್ಲೇ ಚುರುಕನ್ನು ಪಡೆದಿರುವುದರಿಂದ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ.

- ಡಾ.ಸುಮಂತ್‌ಕುಮಾರ್, ಹವಾಮಾನ ತಜ್ಞರು

ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ವ್ಯಾನ್‌ ಜಖಂ

ಕಿಕ್ಕೇರಿ:

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ರಾಜ್ಯ ಹೆದ್ದಾರಿಗೆ ಬೃಹತ್ ಮರ ಬುಡಮೇಲಾಗಿ ಬಿದ್ದು ವ್ಯಾನ್ ಜಖಂಗೊಂಡು, ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು. ಭಾನುವಾರ ತಡರಾತ್ರಿಯಿಂದ ಎಡಬಿಡದೆ ಸುರಿದ ಮಳೆ ಆರ್ಭಟಕ್ಕೆ ಭೂಮಿ ಹಸಿಯಾಗಿದ್ದ ಕಾರಣ ಬೃಹತ್ ಮರ ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಹಳೆಯ ಮರ ಬಿದ್ದ ಕಾರಣ ರಾಜ್ಯ ಹೆದ್ದಾರಿ ಕೆಲಕಾಲ ಬಂದ್‌ ಆಗಿತ್ತು.

ಕೆ.ಆರ್.ಪೇಟೆ ಮಾರ್ಗವಾಗಿ ಕಿಕ್ಕೇರಿ ಬರುತ್ತಿದ್ದ ಒಮ್ನಿ ವ್ಯಾನ್ ಮೇಲೆ ಮರ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮರದ ಬಳಿ ನಿಲ್ಲಿಸಲಾಗಿದ್ದ ಸ್ಕೂಟಿ ದ್ವಿಚಕ್ರ ವಾಹಣ ಸಂಪೂರ್ಣ ಹಾಳಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಎಡೆ ಬಿಡದೆ ಸುರಿದ ಮಳೆಯಿಂದ ಇಡೀ ವಾತಾವರಣ ಶೀತಗಾಳಿಮಯವಾಯಿತು. ವಯೋವೃದ್ಧರು, ಮಕ್ಕಳು ಶೀತಗಾಳಿಯಿಂದ ಮನೆಯಿಂದ ಹೊರಬರಲಾಗದೆ ಚಡಪಡಿಸಿದರು. ರೈತರು ಜಮೀನುಗಳಿಗೆ ತೆರಳಲು ಪರದಾಡಿದರು.