ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಮಂಗಳಗಂಗೋತ್ರಿ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಕನಕಾಭಿಯಾನ ಕಾರ್ಯಕ್ರಮವು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ನಡೆಯಿತು.

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಮಂಗಳಗಂಗೋತ್ರಿ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಕನಕಾಭಿಯಾನ ಕಾರ್ಯಕ್ರಮವು ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ನಡೆಯಿತು.ಕನಕ ಚಿಂತನೆ ಪ್ರಸಾರ ಮಾಲಿಕೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಕನಕದಾಸರ ಸಾಹಿತ್ಯ, ಚಿಂತನೆ ಹಾಗೂ ಸಾಮಾಜಿಕ ಸಂದೇಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಲ ಎಸ್.ಎನ್.ಎಚ್.ಎಸ್. ಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲ್ ವಹಿಸಿದ್ದರು.

ಕನಕಾಭಿಯಾನದ ಕಾಸರಗೋಡು ಜಿಲ್ಲಾ ಸಂಯೋಜಕಿ ರಾಜಶ್ರೀ ಟಿ. ರೈ, ಪೆರ್ಲ ಅವರು ಕನಕದಾಸರ ಸಾಹಿತ್ಯದ ಮೂಲಕ ಸಮಾನತೆ, ಮಾನವೀಯತೆ, ಸಾಮಾಜಿಕ ಜಾಗೃತಿ ಮತ್ತು ಭಕ್ತಿಯ ಸಂದೇಶಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಕನಕಾಭಿಯಾನ ಮಹತ್ವದ ಬಗ್ಗೆ ಆಶಯ ನುಡಿಗಳನ್ನಾಡಿದರು.

ವಿದ್ಯಾರಣ್ಯ ವಿದ್ಯಾವರ್ಧಕ ಸಂಘ, ಪೆರ್ಲದ ಉಪಾಧ್ಯಕ್ಷ ವೆಂಕಟ್ರಾಜ್ ಮಿತ್ರ ಹಾಗೂ ಪಿ.ಟಿ.ಎ. ಅಧ್ಯಕ್ಷ ಪುರುಷೋತ್ತಮ ಬಿ. ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ, ಸಾಯಿಸುಮಾ ನಾವಡ ಕಾರಿಂಜ ಭಾಗವಹಿಸಿ ಕನಕದಾಸರ ಜೀವನ, ಸಾಹಿತ್ಯ ಹಾಗೂ ಅವರ ಚಿಂತನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಕನಕದಾಸರ ಕೃತಿಗಳು, ಜೀವನಘಟ್ಟಗಳು ಹಾಗೂ ಅವರ ಸಾಹಿತ್ಯಿಕ ಕೊಡುಗೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಲಾ ಶಿಕ್ಷಕ ತೇಜಸ್ ಆಚಾರ್ಯ ಕೊಲ್ಲಂಗಾನ ಸ್ವಾಗತಿಸಿ ಕೃಷ್ಣರಾಜ ಜಿ.ವಂದಿಸಿದರು. ಉದಯ ಶಂಕರ ಅಮೈ ನಿರೂಪಿಸಿದರು.