ಸಾರಾಂಶ
ಮೈಸೂರು: ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಗುರುವಾರ ಒಂದು ಅಪರೂಪದ ಕಾರ್ಯಕ್ರಮ. ಶತಾಯುಷಿ ಸಿ.ಎಸ್. ಮಂಗಳಮ್ಮ ಅವರು ರಚಿಸಿರುವ ವಿಶ್ವರೂಪ ದರ್ಶನ ಹಾಗೂ ಜೀವನ ಧರ್ಮದರ್ಶಿನಿ ಕೃತಿಗಳನ್ನು ಅವರ ಸ್ವಗೃಹದಲ್ಲಿ ಅವರ ಸಮ್ಮುಖದಲ್ಲಿಯೇ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಬಿಡುಗಡೆ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ, ಸಾಹಿತಿಯಾಗಿರುವ ಸಿ.ಎಸ್. ಮಂಗಳಮ್ಮ ಅವರು ಈವರೆಗೆ 16 ಕೃತಿಗಳನ್ನು ರಚಿಸಿದ್ದಾರೆ. ಕೊನೆಯ ಎರಡು ಕೃತಿಗಳನ್ನು ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಪ್ರಕಟಿಸಿದ್ದಾರೆ. ಜೂ.22 ರಂದು ಸಿ.ಎಸ್. ಮಂಗಳಮ್ಮ ಅವರ ನೂರನೇ ಜನ್ಮದಿನ. ಆದರೆ ಮೂರು ದಿನ ಮುಂಚಿತವಾಗಿಯೇ ಅವರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.ಶತಾಯುಷಿ ಮಂಗಳಮ್ಮನವರ ಎರಡು ಕೃತಿಗಳ ಲೋಕಾರ್ಪಣೆ
ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್. ಶಿವಲಿಂಗಪ್ಪ, ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ, ನಿವೃತ್ತ ಶಿಕ್ಷಕರಾದ ಎ. ಸಂಗಪ್ಪ, ಎನ್.ಕೆ. ಕಾವೇರಿಯಮ್ಮ, ಜಿ.ಎಸ್. ಸೀತಾರಾಂ, ನರಹರಿ, ಸರಳರಾವ್ ಮೊದಲಾದವರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ಅಪರೂಪದ ಮಹಿಳೆ:ಅಕ್ಷರಶಃ ಇದೊಂದು ಅಪರೂಪದ ಸಮಾರಂಭ. ಶತಾಯುಷಿ ಮಾತ್ರವಲ್ಲ ಅದಕ್ಕೆ ತಕ್ಕ ಮಹಾ ಸಾಧನೆ ಮಾಡಿದ್ದಾರೆ.
ಸಿ.ಎಸ್. ಮಂಗಳಮ್ಮ ಅವರು ಎಲ್ಲಾ ದೃಷ್ಟಿಯಿಂದಲೂ ಓರ್ವ ಅಪರೂಪದ ಮಹಿಳೆ ಎಂದು ಹಿರಿಯ ಸಾಹಿತಿ ಡಾ,ಸಿಪಿಕೆ ಶ್ಲಾಘಿಸಿದರು.ನಮ್ಮನ್ನು ಇಳಿವಯಸ್ಸಿನವರು ಎಂದು ಹೇಳುತ್ತಾರೆ. ಆದರೆ ನಮ್ಮದು ಏರು ವಯಸ್ಸು. ಮಂಗಳಮ್ಮ ಅವರು ಶತಾಯುಷಿ. ಫುಲ್ಲ ಶತಪತ್ರೆ. ಅವರದು ವಯೋನುಗುಣವಾದ ಮಹತ್ವಪೂರ್ಣ ಸಾಧನೆ. ಒಂದು ಕಡೆ ದಿವ್ಯ ವಾಜ್ಞಯೋಪಾಸನೆ ಮತ್ತೊಂದೆಡೆ ವೈವಿಧ್ಯಯುತ ಸಮಾಜ ಕೈಂಕರ್ಯ. ಎರಡೂ ಅವರ ಎರಡು ಕೈಗಳು. ಅವರು ಹತ್ತಾರು ಬೋಧಪ್ರದ ಪುಸ್ತಕಗಳ ರೂವಾರಿ ಎಂಬುದು ಗಮನಾರ್ಹ. ಇವತ್ತು ಬಿಡುಗಡೆಯಾದ ಎರಡು ಹೊತ್ತಿಗೆಗಳು ಕೂಡ ಎರಡು ಮುತ್ತುಗಳು, ಮಾಣಿಕ್ಯಗಳು.ಇವುಗಳಲ್ಲಿ ಸಂಸ್ಕೃತಿ ದ್ಯೋತಕಗಳಾದ ಮಾಧುರ್ಯ ಮತ್ತು ದೀಪ್ತಿ ಔಚಿತ್ಯಪೂರ್ವಣವಾಗಿ ಸಂಗಮಿಸಿವೆ ಎಂದರು.
ಈ ಕೃತಿಗಳಲ್ಲಿರುವ ಬರಹಗಳು ಮೌಲ್ಯಪ್ರತಿಪಾದಕ, ಮಾರ್ಗದರ್ಶಕ ಸ್ವರೂಪದವು ಎಂಬುದು ಮುಖ್ಯ. ವ್ಯಷ್ಟಿ,ಸಮಷ್ಟಿಗಳಿಗೆ ಶ್ರೇಯ, ಪೇಯಗಳನ್ನು ಇವು ದಾನಗೈಯುತ್ತವೆ. ಅವುಗಳನ್ನು ಓದಿದವರು ಅನನ್ಯ ಧನ್ಯರಾಗುತ್ತಾರೆ. ಅವರಿಗೆ ಹೊಸಬಾಳು ಸಿದ್ಧಿಸುತ್ತದೆ. ಇವು ಶ್ರದ್ಧೆಯನ್ನು ಉದ್ದೀಪಿಸುತ್ತವೆ ಎಂದು ಅವರು ಹೇಳಿದರು.ಅವರ ಜೀವನದಿ ನೂರನ್ನು ಮೀರಿ, ಪುರೋಗಾಮಿಯಾಗಿ ಪ್ರವಹಿಸಲಿ. ದಿವ್ಯತ್ರಯರ ಆಶೀರ್ವಾದ ಹಸ್ತಗಳು ಅವರ ನೆತ್ತಿಯ ಮೇಲಿರಲಿ ಎಂದು ಸಿಪಿಕೆ ಆಶಿಸಿದರು.
ಇದೇ ಮೊದಲು: ಲೋಕಪ್ಪನಮ್ಮ ಪ್ರಕಾಶದ ಮೂಲಕ ಈವರೆಗೆ ಸಾವಿರಾರು ಪುಸ್ತಕಗಳನ್ನು ಪ್ರಕಾಶನ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಶತಾಯುಷಿಯೊಬ್ಬರ ಪುಸ್ತಕಗಳನ್ನು ಪ್ರಕಟಿಸಿ, ಅವರ ಸಮ್ಮುಖದಲ್ಲಿಯೇ ಬಿಡುಗಡೆ ಮಾಡಿದ್ದೇವೆ. ಇದು ಸಾರ್ಥಕ ಕ್ಷಣ ಎಂದು ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ಸಂತಸ ವ್ಯಕ್ತಪಡಿಸಿದರು.
---------ಬಾಕ್ಸ್ಜೀವನ ಇವತ್ತು ಹೇಗೆ ನಡೆಯುತ್ತೆ ಗೊತ್ತಿಲ್ಲ, ನಾಳೆ ಅರ್ಥವಾಗಲ್ಲ: ಮಂಗಳಮ್ಮ
ತಮ್ಮ ನಿವಾಸಕ್ಕೆ ಬಂದು ಕೃತಿ ಬಿಡುಗಡೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಸಿ.ಎಸ್. ಮಂಗಳಮ್ಮ ಅವರು, ಜೀವನ ಇವತ್ತು ಹೇಗೆ ನಡೆಯುತ್ತೋ ಯಾರಿಗೂ ಗೊತ್ತಿಲ್ಲ. ನಾಳೆ ಅರ್ಥವಾಗಲ್ಲ. ಆದರೆ ಜೀವನದಿ ಹಾಗೆಯೇ ಹರಿದು ಮುಂದೆ ಸಾಗುತ್ತಿದೆ. ಮನಸ್ಸಿಗೆ ಬೇಜಾರಾದಾಗ ಕಷ್ಟ, ಹಿತವಾದಾಗ ಸುಖ ಎಂದುಕೊಳ್ಳಬಾರದು. ಎಲ್ಲಕ್ಕೂ ಒಂದು ಪ್ರೇರಣೆ, ಒಬ್ಬ ಪ್ರೇರಕ ಇರುತ್ತಾನೆ. ಅವನಿಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಸಿದ್ಧಗಂಗೆ ಶ್ರೀಗಳು 111 ವರ್ಷ ಇದ್ದರು. ನನ್ನ ಜೀವನವೂ ಬಸವನಹುಳುವಿನಂತೆ ಸಾಗುತ್ತಿದೆ, ಸಜ್ಜನರ ಸಹವಾಸ ಇಲ್ಲಿಯವರೆಗೆ ಕರೆತಂದಿದೆ. ಎಲ್ಲರೂ ತಾಯಿ ಮತ್ತು ತಾಯಿನೆಲದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದರು.ತಾವು 118 ವರ್ಷ ಬದುಕಿರಬೇಕು. ಜಮುನಾರಾಣಿ ಮಿರ್ಲೆ ಅವರ ನೃತ್ಯ ನೋಡಬೇಕು ಎಂಬ ಹೆಬ್ಬಕೆಯನ್ನು ಅವರು ವ್ಯಕ್ತಪಡಿಸಿದರು.