ಮಂಗಳೂರು: ಪದವಿ ಪೂರ್ವ ಶಿಕ್ಷಣದಲ್ಲಿ ಇನ್ನುಮುಂದೆ ಕೋಚಿಂಗ್ ಮತ್ತು ಬೋರ್ಡ್ ಸಂಯೋಜಿತ ಪಠ್ಯ ಚಟುವಟಿಕೆಯನ್ನು ಅಳವಡಿಸಲು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಭರವಸೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಹು ಮಹಡಿಗಳ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಜೊತೆ ಕುಪ್ಮ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಈ ಭರವಸೆ ದೊರೆತಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗುವುದು. ವರ್ಗಾವಣೆ ಪತ್ರವನ್ನು ಡಿಜಿ ಲಾಕರ್ನಲ್ಲಿ ಅಳವಡಿಸುವ ಬಗ್ಗೆ ವಿಸ್ತೃತವಾದ ಚರ್ಚೆಯ ನಂತರ ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ರಶ್ಮಿ ಮಹೇಶ್ ತಿಳಿಸಿದರು.
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯು ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕುಪ್ಮ ಸಮಿತಿಯ ಸಭೆಯನ್ನು ೩ ತಿಂಗಳಿಗೊಮ್ಮೆ ನಡೆಸಲು ತೀರ್ಮಾನಿಸಿತು. ಈ ಸಭೆಯಲ್ಲಿ ಶೈಕ್ಷಣಿಕ ಹಾಗೂ ಇತರೆ ಸಮಸ್ಯೆಗಳ ಕುರಿತಂತೆ ಚರ್ಚೆಯನ್ನು ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಅಭಿಪ್ರಾಯ ಪಡಲಾಯಿತು.ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇನ್ನು ಮುಂದೆ ಕುಪ್ಮದ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡುವ ಬಗ್ಗೆಯು ಚರ್ಚಿಸಲಾಯಿತು. ನಕಲಿ ಕಾಲೇಜುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕುಪ್ಮ ಸರ್ಕಾರಕ್ಕೆ ಮನವಿ ಮಾಡಿತು. ಬೋಧನ ಶುಲ್ಕಕ್ಕೆ ಸಂಬಂಧಪಟ್ಟ ಹಾಗೆ ಶಿಕ್ಷಣ ಕಾಯ್ದೆಯ ನಿಯಮಾವಳಿ ಪ್ರಕಾರ ಸೂತ್ರವನ್ನು ಅಳವಡಿಸಿ ಬೋಧನಾ ಶುಲ್ಕವನ್ನು ಮಾರ್ಗಸೂಚಿಯಲ್ಲಿ ನಮೂದಿಸುವಂತೆ ಚರ್ಚಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಭರತ್, ಕುಪ್ಮ ರಾಜ್ಯಾಧ್ಯಕ್ಷ ಡಾ. ಮೋಹನ್ ಆಳ್ವ, ರಾಜ್ಯ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್, ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯುವರಾಜ್ ಜೈನ್, ಜಯರಾಮ್ ಶೆಟ್ಟಿ, ರಾಜ್ಯ ಸಹಕಾರ್ಯದರ್ಶಿ ವಿಶ್ವನಾಥ್ ಶೇಷಾಚಲ, ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಕೀರ್ತನ್ ಕುಮಾರ್, ಕಾರ್ಯದರ್ಶಿ ಡಾ. ದೇವರಾಜ್, ಬೆಂಗಳೂರು ದಕ್ಷಿಣ ವಲಯ ಕಾರ್ಯದರ್ಶಿ ಡಾ. ಕುಮಾರ್ ಹೆಚ್, ದಾವಣಗೆರೆ ಜಿಲ್ಲಾಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ವಿನಯ್, ಧಾರವಾಡ ಜಿಲ್ಲಾಧ್ಯಕ್ಷ ವಿಶ್ವನಾಥ್ ಕೊರ್ವಿ, ಕಾರ್ಯದರ್ಶಿ ವೈ. ಬಿ. ಅಣ್ಣಿಗೇರಿ, ಮೈಸೂರು ಜಿಲ್ಲಾಧ್ಯಕ್ಷ ಮಂಜುನಾಥ್, ಉಡುಪಿ ಜಿಲ್ಲಾಧ್ಯಕ್ಷ ಸಿ. ಎ. ಗೋಪಾಲಕೃಷ್ಣ ಭಟ್, ಹಾವೇರಿ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಕಾರ್ಯದರ್ಶಿ ನಯನ ಮಾಧವ್ ನಾಯಕ್, ಸತೀಶ್ ಎಂ.ಬಿ., ರಾಜ್ಯ ಕೋಶಾಧಿಕಾರಿ ರಮೇಶ್ ಕೆ. ಇದ್ದರು.