ಸಾರಾಂಶ
ಉಡುಪಿ: ಮಂಗಳೂರು ಕುದ್ರೋಳಿಯ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಎಲ್ಲಾ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ ಇದೇ ಪ್ರಪ್ರಥಮ ಬಾರಿಗೆ ‘ಜಾಗತಿಕ ಬಿಲ್ಲವರ ಕ್ರೀಡೋತ್ಸವ’ ಮುಂಬರುವ ಜ.18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ನವೀನ್ಚಂದ್ರ ಸುವರ್ಣ ನೇತೃತ್ವದಲ್ಲಿ ನಡೆಯಲಿದೆ.
ಈ ಬಗ್ಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ನ ಉಪಾಧ್ಯಕ್ಷ ಕೆ.ಟಿ.ಸುವರ್ಣ ಹಾಗೂ ಕ್ರೀಡಾಕೂಟದ ಮಹಾ ಸಂಚಾಲಕ ಡಾ.ಸಂತೋಷ್ ಭೈರಂಪಳ್ಳಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬಿಲ್ಲವರ ಎಲ್ಲಾ 26 ಉಪಪಂಗಡಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಸಂಯೋಜಿಸಲಾಗುತ್ತಿದೆ. ದ.ಕ., ಉಡುಪಿ, ಉತ್ತರ ಕನ್ನಡ ಅಲ್ಲದೆ ದುಬಾಯಿ, ಮಸ್ಕತ್ ಸೇರಿದಂತೆ ವಿಶ್ವವ್ಯಾಪಿಯಲ್ಲಿ ನೆಲೆಸಿರುವ ಬಿಲ್ಲವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಪಂದ್ಯಾಟದ ಲೋಗೋವನ್ನು ಖ್ಯಾತ ಸಿನಿನಟ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅವರು ಉಪಸ್ಥಿತರಿರುವರು ಎಂದರು.ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟವಿದೆ. ಪುರುಷರ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 2 ಲಕ್ಷ ರು., ದ್ವಿತೀಯ 1 ಲಕ್ಷ ರು, ತೃತೀಯ 50 ಸಾವಿರ ರು., ಚತುರ್ಥ 25 ಸಾವಿರ ರು.. ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಮಹಿಳಾ ಕಬ್ಬಡ್ಡಿ, ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ವಿಜೇತರಿಗೆ ಪ್ರಥಮ ಬಹುಮಾನ 1 ಲಕ್ಷ ರು., ದ್ವಿತೀಯ 50 ಸಾವಿರ ರು., ತೃತೀಯ 25 ಸಾವಿರ ರು. ಹಾಗೂ ಚತುರ್ಥ 10 ಸಾವಿರ ರು. ಮತ್ತು ಟ್ರೋಫಿ ನೀಡಲಾಗುವುದು. ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ವೈಯುಕ್ತಿಕ ಬಹುಮಾನ ಕೂಡಾ ಇರಲಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಹಿರಿಯ ಕಬಡ್ಡಿ ಆಟಗಾರ್ತಿ ಅಮಿತಾ ನಿತ್ಯಾನಂದ, ಪ್ರಮುಖರಾದ ಮಿಥುನ್ ಅಮೀನ್, ಶಬರಿ ಸುವರ್ಣ, ಗಣೇಶ್ ಕೋಟ್ಯಾನ್, ಲಕ್ಷ್ಮಣ ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಪದಾಧಿಕಾರಿ ವಿಶ್ವನಾಥ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಪದಾಧಿಕಾರಿ ಸುಕುಮಾರ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))