ಸಾರಾಂಶ
- ಒಂದು ವರ್ಷ ಎರಡು ದಿನಗಳ ಪಾದಯಾತ್ರೆ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಕಳೆದ ೨೦೨೩ರ ಜ.೩೦ರಂದು ಉಪ್ಪಿನಂಗಡಿಯ ಪೆರಿಯಡ್ಕದಿಂದ ಮುಸಲ್ಮಾನರ ಪವಿತ್ರ ನಗರಿ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಕ್ಷೇತ್ರಕ್ಕೆ ಕಾಲ್ನಡಿಗೆಯ ಯಾತ್ರೆ ಕೈಗೊಂಡಿದ್ದ ಅಬ್ದುಲ್ ಖಲೀಲ್ ಸೋಮವಾರ ಮೆಕ್ಕಾ ತಲುಪಿದ್ದಾರೆ. ಈ ಮೂಲಕ ತಮ್ಮ ಸುದೀರ್ಘಾವಧಿಯ ಕಾಲ್ನಡಿಗೆ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಬ್ದುಲ್ ಯಾತ್ರೆ ಪೂರ್ಣಗೊಳಿಸಲು ಒಂದು ವರ್ಷ ಎರಡು ದಿನಗಳ ಸಮಯ ತೆಗೆದುಕೊಂಡಿದ್ದು, ಬರೋಬ್ಬರಿ ೮೧೫೦ ಕಿ.ಮೀ. ದೂರವನ್ನು ನಡಿಗೆಯ ಮೂಲಕ ಕ್ರಮಿಸಿದ್ದಾರೆ. ಅದಕ್ಕಾಗಿ ಅವರು ಭಾರತ, ಪಾಕಿಸ್ತಾನ, ಓಮನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ದಾಟಿದ್ದಾರೆ. ಪಾಕಿಸ್ತಾನದಲ್ಲಿ ಮಾತ್ರ ಅವರ ಕಾಲ್ನಡಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಘಾ ಗಡಿಯ ಮೂಲಕ ಪಾಕ್ ಪ್ರವೇಶಿಸಿದ ಬಳಿಕ ವಿಮಾನದಲ್ಲಿ ಒಮಾನ್ ದೇಶವನ್ನು ಪ್ರವೇಶಿಸಿ ಅಲ್ಲಿಂದ ಕಾಲ್ನಡಿಗೆಯನ್ನು ಮುಂದುವರೆಸಿದ್ದರು. ಉಳಿದೆಲ್ಲಾ ದೇಶಗಳಲ್ಲಿಯೂ ಅವರಿಗೆ ಅಲ್ಲಿನ ಆಡಳಿತ ಪೂರ್ಣ ಪ್ರಮಾಣದ ಸಹಕಾರವನ್ನು ಒದಗಿಸಿತ್ತು.ಈ ಬಗ್ಗೆ ಮೆಕ್ಕಾ ನಗರದಿಂದಲೇ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅಬ್ದುಲ್, ಸುದೀರ್ಘ ಪ್ರಯಾಣದ ನನ್ನ ಯಾತ್ರೆ ಗುರಿ ತಲುಪಿದಾಗ ಭಾವಪರವಶನಾದೆ. ನನ್ನ ಈ ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ. ಹುಟ್ಟು ಭಾರತೀಯನಾದ ನಾನು ಭಾರತೀಯ ಜೀವನ ಪರಂಪರೆಯಲ್ಲಿ ಕಾಣಸಿಗುವ ಕಾಲ್ನಡಿಗೆ ಯಾತ್ರೆಯ ಬಗ್ಗೆ ಆಸಕ್ತನಾಗಿದ್ದೆ. ಅದಕ್ಕಾಗಿ ಇಷ್ಟು ದೂರದ ಯಾತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಎಲ್ಲರೂ ಜಾತಿ, ಮತ ತಾರತಮ್ಯವಿಲ್ಲದೆ ನನಗೆ ಸಹಕಾರ ನೀಡಿದ್ದಾರೆ. ಮೆಕ್ಕಾದಲ್ಲಿ ನಾಲ್ಕು ತಿಂಗಳ ಕಾಲ ಇದ್ದು, ಹಜ್ ನಿಯಾವಳಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ವಾಪಸ್ ಬರುವುದಾಗಿ ತಿಳಿಸಿದ್ದಾರೆ.