ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಲಾದ ಧಾರ್ಮಿಕ ಸಭಾ

ಮಂಗಳೂರು: ಜಾತ್ಯತೀತ ಬದುಕಿಗೆ ಧಾರ್ಮಿಕ ಕಾರ್ಯಕ್ರಮಗಳು ಮುನ್ನುಡಿಯಾಗಬೇಕು. ದ್ವಂದ್ವಗಳು ತುಂಬಿರುವ ನಮ್ಮ ಮನಸ್ಸಿನಲ್ಲಿರುವ ದ್ವೇಷ, ರಾಕ್ಷಸಿ ಮನೋಧರ್ಮ ನಾಶವಾಗಬೇಕು. ಧರ್ಮ ಹಾಗೂ ಸಮಾಜ ಸಮಾನವಾಗಿ ಮುನ್ನಡೆಯಬೇಕು. ಸೇವೆಗೆ ಹಣ ಮಾನದಂಡವಾದಾಗ ಧರ್ಮಕ್ಕೆ ಅಪಾಯವಿದೆ. ವಿಜ್ಞಾನವನ್ನು ಅವೈಜ್ಞಾನಿಕವಾಗಿ ಅಥೈರ್ಸಿದಾಗ ಅಪಾರ್ಥಗಳು ಉಂಟಾಗುತ್ತವೆ ಎಂದು ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಗಣೇಶ್‌ ಎಸ್‌. ರಾವ್‌ ಹೇಳಿದರು.ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ದೇವಸ್ಥಾನ ಹಾಗೂ ಶರೀರ ಎಂದರೆ ‘ಕ್ಷೇತ್ರ’ ಎಂಬ ಅರ್ಥವಿದೆ. ದೇವಸ್ಥಾನಗಳ ನಿರ್ಮಿಸಿದ ಶರೀರ ನಾಶವಾದರೂ, ಕ್ಷೇತ್ರಗಳಿಗೆ ಅಳಿವಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅರ್ಪಣಾ ಭಾವದಿಂದ ಕ್ಷೇತ್ರ ಅಭಿವೃದ್ಧಿಯಲ್ಲಿ ಕೈಜೋಡಿಸಿದಾಗ ನಾವು ಉನ್ನತ ಮಟ್ಟತಲುಪುತ್ತೇವೆ ಎಂದು ಮನುಷ್ಯ ವೈಮನಸ್ಸು, ಜಿಡ್ಡು ಹಿಡಿದ ಸಂಪ್ರದಾಯಗಳಿಂದ ಹೊರಬಂದು ಸಹೋದರತೆ, ಸಾಮರಸ್ಯದಿಂದ ಬದುಕುವ ಕಲೆ ರೂಡಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ನಮ್ಮ ಸಂಸ್ಕತ್ರೃತಿ-ಸಂಪ್ರದಾಯ ಉಳಿಯುತ್ತದೆ ಎಂದರು.

ಉದ್ಯಮಿ ಶೈಲೇಂದ್ರ ವೈ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್‌ ಮತ್ತು ಉದ್ಯಮಿ ರಾಯ್‌ ಕ್ಯಾಸ್ಟಲಿನೋ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್‌ ಕೋಟ್ಯಾನ್‌ ಪಡು ಸ್ವಾಗತಿಸಿದರು. ಮಾಧ್ಯಮ ಸಮಿತಿ ಸಹಸಂಚಾಲಕ ದಿನೇಶ್‌ ಇರಾ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ ಸರಿಪಲ್ಲ ವಂದಿಸಿದರು.