ಸಾರಾಂಶ
ಮಂಗಳೂರಿನಿಂದ ಮೂಡುಬಿದಿರೆ- ಕಾರ್ಕಳಕ್ಕೆ ಇದೇ ಮೊದಲ ಬಾರಿಗೆ ಆರಂಭವಾಗಿರುವ ಸರ್ಕಾರಿ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಿಂದ ಮೂಡುಬಿದಿರೆ- ಕಾರ್ಕಳಕ್ಕೆ ಇದೇ ಮೊದಲ ಬಾರಿಗೆ ಆರಂಭವಾಗಿರುವ ಸರ್ಕಾರಿ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಪ್ರಯೋಜನ ಈ ಭಾಗದ ಜನರಿಗೆ ಇದೇ ಮೊದಲ ಬಾರಿಗೆ ತಲುಪುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ತೆಂಗಿನ ಕಾಯಿ ಒಡೆದು, ಆರತಿ ಎತ್ತಿ ಬಸ್ಸು ಸಂಚಾರಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಶುಭ ಕೋರಿದರು.ಬಳಿಕ ಮಾತನಾಡಿದ ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಮೂಡುಬಿದಿರೆ- ಕಾರ್ಕಳ ರಸ್ತೆಯಲ್ಲಿ ಸರ್ಕಾರಿ ಬಸ್ ಇಲ್ಲದೆ ಶಕ್ತಿ ಯೋಜನೆ ಜಾರಿಗೆ ತೊಡಕಾಗಿತ್ತು. ಇದೀಗ ಸಾರಿಗೆ ಸಚಿವರು ಮತ್ತು ಪಕ್ಷದ ಎಲ್ಲ ನಾಯಕರ ಪ್ರಯತ್ನದಿಂದ ಈ ಭಾಗಕ್ಕೂ ಸರ್ಕಾರಿ ಬಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಸ್ಗಳ ಸಂಖ್ಯೆ ಹೆಚ್ಚಿಸಲಾಗುವುದು. ಮಂಗಳೂರಿನ ಧಾರ್ಮಿಕ, ಪ್ರವಾಸಿ ಕೇಂದ್ರಗಳಿಗೂ ಸರ್ಕಾರಿ ಬಸ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್, ಕಾರ್ಪೊರೇಟರ್ ನವೀನ್ ಡಿಸೋಜ, ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ನೀರಜ್ ಚಂದ್ರಪಾಲ್, ನಝೀರ್ ಬಜಾಲ್,ಟಿ.ಕೆ.ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಎಂ.ಪಿ. ಮನೋರಾಜ್, ಭಾಸ್ಕರ್ ರಾವ್, ಅಲಿಸ್ಟರ್ ಡಿಕುನ್ಹ, ಶಾಂತಲಾ ಗಟ್ಟಿ, ಸಾರಿಕಾ ಪೂಜಾರಿ, ಪ್ರೇಮ್ ಬಲ್ಲಾಳ್ಬಾಗ್, ಸತೀಶ್ ಪೆಂಗಲ್, ಇಮ್ರಾನ್ ಎ.ಆರ್., ಯೋಗೀಶ್ ನಾಯಕ್ ಮತ್ತಿತರರಿದ್ದರು.