ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಲ್ಕೂರ ಪ್ರತಿಷ್ಠಾನ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ‘ಮಾವು- ಹಲಸು ಮೇಳ’ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಾಸಾದ’ ಆವರಣದಲ್ಲಿ ಶನಿವಾರ ಆರಂಭಗೊಂಡಿದೆ.ರಾಮನಗರ, ಮಂಡ್ಯ, ಮೈಸೂರು, ಬೆಳಗಾವಿ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸಿದ್ದು, ವಿವಿಧ ತಳಿಯ ಹಲಸು, ಮಾವಿನ ಹಣ್ಣುಗಳು, ಇವುಗಳ ಮೌಲ್ಯವರ್ಧಿತ ಖಾದ್ಯಗಳು, ಸಸಿಗಳು, ದೇಸಿ ತರಕಾರಿ ಬೀಜಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳ ಪ್ರದರ್ಶನ, ಮಾರಾಟ ಎರಡು ದಿನ ನಡೆಯಿತು.
ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಐಷಾರಾಮದ ಬದುಕನ್ನು ಮಾತ್ರ ಕಂಡಿರುವ ನಗರವಾಸಿ ಇಂದಿನ ಪೀಳಿಗೆಯ ಮಕ್ಕಳಿಗೆ ಹಳ್ಳಿಯ ಕೃಷಿ ಬದುಕಿನ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ರೈತರ ಪರಿಶ್ರಮ, ಕಷ್ಟಗಳ ತಿಳುವಳಿಕೆ ಮೂಡಿಸುವುದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು.ಮೇಳವನ್ನು ಉದ್ಘಾಟಿಸಿದ ಹಿರಿಯ ಸಾಮಾಜಿಕ ಕಾರ್ಯಕರ್ತೆ ಆರೂರು ಲಕ್ಷ್ಮೀ ರಾವ್ ಮಾತನಾಡಿ, ಹಳೆಯ ಕಾಲದ ಸಾವಯವ ಕೃಷಿ ಬೆಳೆಗಳು ಹಾಗೂ ಅವುಗಳ ಉತ್ಪನ್ನಗಳನ್ನು ಪುನರಪಿ ನಗರದ ಜನತೆಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವ ಕಾರ್ಯ ಸ್ತುತ್ಯರ್ಹ ಎಂದರು.ವಿಶೇಷ ಉಪನ್ಯಾಸ ನೀಡಿದ ಪರಿಸರ ತಜ್ಞ ಡಾ. ಮನೋಹರ ಉಪಾಧ್ಯಾಯ, ಹಿಂದಿನ ತಲೆಮಾರಿನ ಆರೋಗ್ಯಪೂರ್ಣ ದೇಸಿ ತಳಿಗಳ ಸಂರಕ್ಷಣೆ ಹಾಗೂ ಪೋಷಣೆಯ ಸಲುವಾಗಿ ಸಹಕಾರಿ ತತ್ವದ ಆಧಾರದಲ್ಲಿ ಸ್ಥಳವನ್ನು ಖರೀದಿಸಿ ಹಣ್ಣು ಹಂಪಲುಗಳ ಬೆಳೆ ಬೆಳೆಸುವಂತಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮ ಆಯೋಜಕ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಾಮೀಜಿ ಜಿತಕಾಮಾನಂದ ಮಹಾರಾಜ್, ಶರವು ರಾಘವೇಂದ್ರ ಶಾಸ್ತ್ರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಹರಿಕೃಷ್ಣ ಪುನರೂರು, ಡಾ.ಎಂ.ಬಿ. ಪುರಾಣಿಕ್, ಸಾವಯವ ಕೃಷಿ ಗ್ರಾಹಕ ಬಳಗದ ರತ್ನಾಕರ, ಮಾಜಿ ಕಾರ್ಪೊರೇಟರ್ ಶಕಿಲಾ ಕಾವ, ವಿಜಯಲಕ್ಷ್ಮೀ ಬಿ.ಶೆಟ್ಟಿ, ವಿನೋದ ಕಲ್ಕೂರ, ಪೂರ್ಣಿಮಾ ಪ್ರಭಾಕರ ರಾವ್ ಮತ್ತಿತರರು ಇದ್ದರು.