ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ಅಂಗಸಂಸ್ಥೆಯಾದ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸನ್ಸ್ (ಎಂ.ಎಸ್.ಎಲ್.ಎಸ್.)ನಲ್ಲಿ ‘ಪ್ರೊ. ಜೆ.ವಿ. ಭಟ್ ಸ್ಮಾರಕ ವಾರ್ಷಿಕ ಉಪನ್ಯಾಸ’ವನ್ನು ಇತ್ತೀಚೆಗೆ ಆಯೋಜಿಸಿದ್ದು, ಇದರಲ್ಲಿ ದೆಹಲಿಯ ವಲ್ಲಭಭಾಯಿ ಚೆಸ್ಟ್ ಇನ್ಸ್ಟಿಟ್ಯೂಟ್ನ ಡಾ.ಅನುರಾಧಾ ಚೌಧರಿ ಅವರು ಉಪನ್ಯಾಸ ನೀಡಿದರು. ಅವರಿಗೆ ಈ ಸಂದರ್ಭ ಪ್ರೊ.ಜೆ.ವಿ.ಭಟ್ ದತ್ತಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ರೋಗಕಾರಕ ಶಿಲೀಂಧ್ರಗಳ ಬಗ್ಗೆ ಮಾತನಾಡುತ್ತಾ, ರೋಗ ನಿರೋಧ ಔಷಧ ಕ್ಷೇತ್ರಕ್ಕೆ ಸವಾಲಾಗಿ ಜಗತ್ತಿನಲ್ಲೆಲ್ಲ ಶಿಲೀಂಧ್ರಗಳು ಹರಡುತ್ತಿದೆ. ಸಾವಿನ ಸಂಖ್ಯೆಗಳು ಅಧಿಕವಾಗುತ್ತಿವೆ. ಕೋವಿಡ್-19ರ ಸಮಯದಲ್ಲಿ ಶಿಲೀಂಧ್ರ ಸೋಂಕಿನಿಂದ ಆದ ಅಪಾಯವನ್ನು ಗಂಭೀರವಾಗಿ ಗಮನಿಸಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಕೃಷಿ ಮತ್ತು ಪಶುಪಾಲನ ಕ್ಷೇತ್ರದಲ್ಲಿಯೂ ಶಿಲೀಂಧ್ರ ಸೋಂಕಿನ ಅಪಾಯಗಳು ಕಾಣಿಸುತ್ತಿವೆ ಎಂದರು.ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹಉಪಕುಲಪತಿ ಡಾ. ಶರತ್ ಕೆ. ರಾವ್ ಅಧ್ಯಕ್ಷತೆ ವಹಿಸಿದ್ದು, ಜೀವವಿಜ್ಞಾನ ಕ್ಷೇತ್ರದಲ್ಲಿ ಡಾ. ಜೆ.ವಿ. ಭಟ್ ಅವರ ಸಾಧನೆಯನ್ನು ಸ್ಮರಿಸಿಕೊಂಡರು.ಡಾ. ಜೆ.ವಿ. ಭಟ್ ಅವರ ಹೆಸರಿನಲ್ಲಿ ಅವರ ಕುಟುಂಬದವರು, ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಸೇರಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಬಯೋಟೆಕ್ನಾಲಜಿ ಪದವಿಯನ್ನು ಪೂರ್ಣಗೊಳಿಸಿದ ಅತ್ಯುತ್ತಮ ವಿದ್ಯಾರ್ಥಿಗೆ ಚಿನ್ನದ ಪದಕವನ್ನು ಹಸ್ತಾಂತರಿಸಲಾಯಿತು.
ಎಂ.ಎಸ್.ಎಲ್.ಎಸ್.ನ ನಿರ್ದೇಶಕ ಡಾ. ಬಿ.ಎಸ್. ಸತೀಶ್ ರಾವ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಟಿ.ಎಸ್. ಮುರಳಿ ಸಭಿಕರನ್ನು ಸ್ವಾಗತಿಸಿದರು. ಸಂಶೋಧನ-ಸಹನಿರ್ದೇಶಕಿ ಡಾ. ಪದ್ಮಲತಾ ಎಸ್. ವಂದಿಸಿದರು.