ಮಡಿಕೇರಿ: ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ 4.83 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ. ಮಂತರ್‌ ಗೌಡ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಮಡಿಕೇರಿ: ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ 4.83 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ವಯಂ ಚಾಲಿತ ಚಾಲನಾ ಪಥ ಕಾಮಗಾರಿಗೆ ಶಾಸಕ ಡಾ. ಮಂತರ್‌ ಗೌಡ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 4.83 ಕೋಟಿ ರು. ವೆಚ್ಚದಲ್ಲಿ 2.12 ಎಕರೆ ಜಾಗದಲ್ಲಿ ಕಾಮಗಾರಿ ನಿರ್ಮಾಣವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ವಾಹನ ಚಾಲನೆ ಮಾಡಲು ಸಹಕಾರವಾಗುತ್ತದೆ ಎಂದರು.

ಕಾಮಗಾರಿಯ ವಿವರಣೆಯನ್ನು ಮೈಸೂರು ವಿಭಾಗದ ಎಂಜಿನಿಯರ್ ವಿವರಣೆ ನೀಡಿ, ಈ ಕಾಮಗಾರಿಯನ್ನು ಕೆಎಸ್ ಆರ್ ಟಿಸಿ (ಸಿಇ ವಿಭಾಗ) ಬೆಂಗಳೂರು ಇವರು ನಿರ್ವಹಿಸಲಿದ್ದು, ಮಳೆಯನ್ನು ಹೊರತುಪಡಿಸಿ 12 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೆನ್ನಿರಾ ಮೈನಾ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರು ಹೆಚ್ಚಿನ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಮುಖರಾದ ಎಚ್.ಎ. ಹಂಸ, ಪ್ರಕಾಶ್ ಆಚಾರ್ಯ, ವಿ.ಜಿ. ಮೋಹನ್, ಜಾನ್ಸನ್ ಪಿಂಟೋ, ಕೋಚನ ಚೇತನ್, ಹರಿಪ್ರಸಾದ್, ಕೊತ್ತೋಳಿ ಕವನ್, ಅರ್ಜುನ, ಶರಣ್, ಶಶಿ, ಸದಾಮುದ್ದಪ್ಪ, ಜಿ.ಸಿ. ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್, ಇನ್‌ ಸ್ಪೆಕ್ಟರ್ ಮೋಹನ್ ಕುಮಾರ್, ವ್ಯವಸ್ಥಾಪಕರಾದ ಸಲೀಮಾ, ಸೌಮ್ಯ, ರೀಟಾ ಇತರರು ಇದ್ದರು.