ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ದಲಿತ ನಾಯಕರ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಗುರವಾಗಿ ಮಾತನಾಡಿದ್ದಾರೆ ಎಂಬುದಾಗಿ ದಲಿತ ಸೋದರ ಸಂಘಟನೆಗಳ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಶಾಸಕರ ಹೇಳಿಕೆಯನ್ನು ತಿರುಚಿದ್ದಾರೆ. ಅಲ್ಲದೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವಂತಹ ಹಾಗೂ ಶಾಸಕರ ವಿರುದ್ಧ ರಾಜಕೀಯವಾಗಿ ಪಿತೂರಿ ನಡೆಸುತ್ತಿದ್ದಾರೆ ಎಂದು ದಲಿತ ಮುಖಂಡ ಕೋಟಪ್ಪ ಕೆಲ ದಲಿತ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಪಾತಪಾಳ್ಯ ಹೋಬಳಿ ಕೇಂದ್ರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎನ್.ಸುಬ್ಬಾರೆಡ್ಡಿ ಬ್ಲಾಕ್ಮೇಲ್ ಮಾಡುವ ಸಂಘಟನೆಗಳಿಗೆ ಭಯಪಡುವ ಅಗತ್ಯವಿಲ್ಲ ಎಂಬುದಾಗಿ ಬ್ಲಾಕ್ಮೇಲ್ ಮಾಡುವವರ ಬಗ್ಗೆ ಮಾತ್ರ ಮಾತನಾಡಿದ್ದಾರೆ.
ಈ ಹೇಳಿಕೆ ಕೇವಲ ಬ್ಲಾಕ್ಮೇಲ್ ಮಾಡುವವರಿಗೆ ಮತ್ರ ಅನ್ವಯಿಸುತ್ತದೆ ಹೊರತು ಸಾಮಾನ್ಯ ಡಿಎಸ್ಎಸ್ ಮುಖಂಡರಿಗೆ ಅನ್ವಯಿಸುವುದಿಲ್ಲ ಎಂದ ಅವರು, ಎಲ್ಲಿಯೂ ಸಹ ಶಾಸಕರು ರೋಲ್ಕಾಲ್ ಪದಬಳಕೆ ಮಾಡಿಲ್ಲ. ಆದರೆ ದಲಿತ ಸೋದರ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಹೇಳಿಕೆಯನ್ನು ತಿರುಚಿ, ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡಿದ್ದಾರೆ ಎಂದು ಖಂಡಿಸಿದರು.ಶಾಸಕರಾಗಿ ಆಯ್ಕೆಯಾಗುವ ಮೊದಲಿನಿಂದಲೂ ಸಹ ಅವರು ಈ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅನೇಕ ಜನಪರ ಕಾರ್ಯ ಮಾಡಿದ್ದಾರೆ. ಶಾಸಕರು ತಮ್ಮ ಅಧಿಕಾರಾಧಿಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 132 ಅಂಬೇಡ್ಕರ್ ಭವನಗಳನ್ನು ನಿರ್ಮಿಸಿದ್ದಾರೆ, 35 ಭವನಗಳು ಪ್ರಗತಿಯಲ್ಲಿವೆ, 650 ಕೊಳವೆಬಾವಿಗಳನ್ನು ದಲಿತರಿಗೆ ಕೊರೆಸಿದ್ದಾರೆ. ದರಖಾಸ್ತು ಸಮಿತಿ ಮೂಲಕ 750 ಹಕ್ಕುಪತ್ರಗಳನ್ನು ನೀಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದ 8 ಹಾಸ್ಟೆಲ್ಗಳನ್ನು ನಿರ್ಮಿಸಿದ್ದಾರೆ. 5 ಮುರಾರ್ಜಿ ದೇಸಾಯಿ ವಸತಿ ಮತ್ತು 2 ಅದರ್ಶ ಶಾಲೆಗಳನ್ನು ಸ್ಥಾಪಿಸಿದ್ದಾರೆ. ನೂತನ 9 ಬಿಸಿಎಂ ಹಾಸ್ಟೆಲ್ ಕಟ್ಟಡಗಳನ್ನು ಕಟ್ಟಿಸಿದ್ದಾರೆ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವುದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರೇ ಹೊರತು ನಿಮ್ಮ ಕೊಡುಗೆ ಏನೂ ಇಲ್ಲ. ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನಾದರೂ ಇದ್ದರೆ ತೋರಿಸಿ ಎಂದು ಸಂಸದರಿಗೆ ಸವಾಲು ಹಾಕಿದ ಅವರು, ಶಾಸಕರ ವಿರುದ್ಧ ಇಲ್ಲಸಲ್ಲದ, ಸುಳ್ಳು ಆರೋಪಗಳನ್ನು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.ದಸಂಸ ಸಂಚಾಲಕ ಎಲ್.ಎನ್.ನರಸಿಂಹಯ್ಯ ಜೀವಿಕ ನಾರಾಯಣಸ್ವಾಮಿ, ದಲಿತ ಮುಖಂಡರಾದ ಅಂಜನಪ್ಪ, ಬಿ.ನರಸಿಂಹಪ್ಪ, ಎಂ.ವೆಂಕಟರಮಣ, ಗುಟ್ಟಪಾಳ್ಯ ಗಂಗುಲಪ್ಪ, ಎಂ.ವಿ.ನರಸಿಂಹಪ್ಪ, ಸುಬ್ರಮಣಿ, ವೈ.ನಾರಾಯಣಸ್ವಾಮಿ, ಆದಿ, ಬಿ.ಎನ್.ಕೃಷ್ಣಮೂರ್ತಿ, ಎಂ.ಎನ್.ವೆಂಕಟೇಶ್, ಸುಧಾಕರ್, ಟೈಲರ್ ನರಸಿಂಹಪ್ಪ, ಜಿವಿಕ ಹರೀಶ್, ಭಗವಾನ್ ಮೂರ್ತಿ, ಆದಿನಾರಾಯಣ, ಕೆ.ನರಸಿಂಹಯ್ಯ, ದೇವಿಕುಂಟ ಸುಧಾಕರ, ಜಿ.ವಿ.ಮಂಜುನಾಥ್, ಗಿರಿಪ್ಪಲ್ಲ ನರಸಿಂಹಪ್ಪ, ಟೈಲರ್ ವೆಂಕಟೇಶ್ ಮತ್ತಿತರರು ಇದ್ದರು.