ಸಾರಾಂಶ
ಮಾನ್ಯತಾ ಟೆಕ್ಪಾರ್ಕ್ನಲ್ಲಿ ರೋಲ್ಸ್-ರಾಯ್ಸ್ ಕಂಪನಿ ಸ್ಥಾಪಿಸಿರುವ ಅತಿದೊಡ್ಡ ಜಾಗತಿಕ ಇಂಜಿನಿಯರಿಂಗ್ ಮತ್ತು ಸಾಮರ್ಥ್ಯ ಕೇಂದ್ರವನ್ನು (ಜಿಇಸಿಸಿ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಏರೋಸ್ಪೇಸ್ ವಲಯದಲ್ಲಿ ರಾಜ್ಯವು ಮತ್ತೊಂದು ಮೈಲುಗಲ್ಲು ಸಾಧಿಸಿದ್ದು ಇಡೀ ದೇಶದಲ್ಲಿ ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ರಾಜಧಾನಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದರು.ಬುಧವಾರ ಮಾನ್ಯತಾ ಟೆಕ್ಪಾರ್ಕ್ನಲ್ಲಿ ರೋಲ್ಸ್-ರಾಯ್ಸ್ ಕಂಪನಿ ಸ್ಥಾಪಿಸಿರುವ ಅತಿದೊಡ್ಡ ಜಾಗತಿಕ ಎಂಜಿನಿಯರಿಂಗ್ ಮತ್ತು ಸಾಮರ್ಥ್ಯ ಕೇಂದ್ರವನ್ನು (ಜಿಇಸಿಸಿ) ಉದ್ಘಾಟಿಸಿ ಮಾತನಾಡಿ, ರೋಲ್ಸ್-ರಾಯ್ಸ್ ಬೆಂಗಳೂರಿನಲ್ಲಿ ಅತಿದೊಡ್ಡ ಜಿಇಸಿಸಿ ಸ್ಥಾಪಿಸಿರುವುದು ಸಂತಸದ ಸಂಗತಿ. ಇಲ್ಲಿನ ಆವಿಷ್ಕಾರ ಮತ್ತು ಪ್ರತಿಭೆ ವಿಶ್ವವನ್ನು ಮುನ್ನಡೆಸುತ್ತಿರುವುದು ರಾಜ್ಯಕ್ಕೇ ಹೆಮ್ಮೆಯ ಸಂಗತಿ. 400ಕ್ಕೂ ಹೆಚ್ಚು ಜಿಸಿಸಿಗಳೊಂದಿಗೆ ಕರ್ನಾಟಕವು ದೇಶದ ಜಿಸಿಸಿ ರಾಜಧಾನಿ ಮಾತ್ರವಲ್ಲ, ಜಗತ್ತಿನ ಟಾಪ್ ಮೂರು ಏರೋಸ್ಪೇಸ್ ಕೇಂದ್ರಗಳಲ್ಲಿ ಒಂದಾಗಿದೆ. ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದರಿಂದ ಯುವಕರಿಗೆ ಹೆಚ್ಚಿನ ಗುಣಮಟ್ಟದ ಉದ್ಯೋಗಗಳು, ಕೌಶಲ್ಯಾಭಿವೃದ್ಧಿ ಅವಕಾಶಗಳು ಹಾಗೂ ಎಂಎಸ್ಎಂಇಗಳ ಬೆಳವಣಿಗೆ, ಎಂಜಿನಿಯರಿಂಗ್ ಜೊತೆಗೆ ಆಧುನಿಕ ತಯಾರಿಕೆಯನ್ನು ಮುನ್ನಡೆಸಿ ಆತ್ಮನಿರ್ಭರ ರಾಜ್ಯವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೋಲ್ಸ್ ರಾಯ್ಸ್ ಗ್ಲೋಬಲ್ ಸಿಎಫ್ಒ ಹೆಲೆನ್ ಮ್ಯಾಕಬೆ, ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕೆಮರಾನ್, ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.