ಗುರುವಾರ ಗೌರಿ ಅಂಗಳದಲ್ಲಿರುವ ಸೈಯ್ಯದ್ ಮರ್ದಾನ ಶರೀಫ್ ಮನೆಯಿಂದ ಗಂಧವು ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯಿಂದ ಹೊರಟು ದರ್ಗಾಕ್ಕೆ ೯-೩೦ ಗಂಟೆಗೆ ತಲುಪಲಿದೆ.

ಕೊಪ್ಪಳ: ನಗರದ ಕೋಟೆ ಏರಿಯಾದ ಮರ್ದಾನ ಗೈಬ್ ಅಲಿ ದರ್ಗಾದ ಉರೂಸ್‌ ಕಾರ್ಯಕ್ರಮ ಫೆ. ೬ ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಮರ್ದಾನಗೈಬ್ ದರ್ಗಾರದ ಉರೂಸ್‌ ಸಮಿತಿ ಅಧ್ಯಕ್ಷ ಕಾಟನ ಪಾಷಾ ಹೇಳಿದ್ದಾರೆ.

ನಗರದ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷ ಉರೂಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿದರು.

ಗುರುವಾರ ಗೌರಿ ಅಂಗಳದಲ್ಲಿರುವ ಸೈಯ್ಯದ್ ಮರ್ದಾನ ಶರೀಫ್ ಮನೆಯಿಂದ ಗಂಧವು ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯಿಂದ ಹೊರಟು ದರ್ಗಾಕ್ಕೆ ೯-೩೦ ಗಂಟೆಗೆ ತಲುಪಲಿದೆ. ನಂತರ ಗಂಧ ಕಾರ್ಯಕ್ರಮ ನೆರವೇರಿದೆ. ೭ರಂದು ಜಿಯಾರತ್ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಮರ್ದಾನಗೈಬ್ ದರ್ಗಾದ ಉರೂಸ್‌ ಕಾರ್ಯಕ್ರಮದಲ್ಲಿ ಎಲ್ಲ ಜಾತಿ, ಧರ್ಮದವರು ಸಹ ಭಾಗಿಯಾಗುತ್ತದೆ. ಯಾವುದೇ ಬೇಧಭಾವ ಇಲ್ಲದೆ ಪ್ರತಿಯೊಬ್ಬರು ಪರಸ್ಪರ ಪ್ರೀತಿಯಿಂದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

ಮರ್ದಾನೆ ಗೈಬ್ ದರ್ಗಾದ ಬಳಿ ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜು ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ರಕ್ತದಾನ ಶಿಬಿರ: ಉರೂಸ್‌ ಕಾರ್ಯಕ್ರಮ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.

ಕಮಿಟಿ ಸದಸ್ಯ ಮಹಮ್ಮದ ಮುನೀರ್‌, ಯಾಕ್ಬಲ್ ಸಿದ್ದಿಕಿ, ಅಯೂಬ್‌ ಅಡ್ಡೆವಾಲೆ, ಮಾನ್ವಿ ಪಾಷಾ ಇದ್ದರು.