ಮಾರ್ಕೋನಹಳ್ಳಿ ದುರಂತ: 2 ಶವ ಪತ್ತೆ ಇನ್ನಿಬ್ಬರಿಗಾಗಿ ಹುಡುಕಾಟ

| Published : Oct 09 2025, 02:00 AM IST

ಸಾರಾಂಶ

ಮಾರ್ಕೋನಹಳ್ಳಿ ಜಲಾಶಯದ ಕೆರೆಯ ಕೋಡಿಯಲ್ಲಿ ಆಟವಾಡಲು ಹೋಗಿದ್ದ ಒಂದೇ ಕುಟುಂಬದ 6 ಮಂದಿ ನೀರಿನ ರಭಸಕ್ಕೆ ಮಂಗಳವಾರ ಸಂಜೆ ಕೊಚ್ಚಿ ಹೋದ ಪ್ರಕರಣದಲ್ಲಿ ಬುಧವಾರ ಮತ್ತಿಬ್ಬರ ಮೃತ ದೇಹಗಳು ಸಿಕ್ಕಿದ್ದು, ಇನ್ನಿಬ್ಬರ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆ ಗುರುವಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಮಾರ್ಕೋನಹಳ್ಳಿ ಜಲಾಶಯದ ಕೆರೆಯ ಕೋಡಿಯಲ್ಲಿ ಆಟವಾಡಲು ಹೋಗಿದ್ದ ಒಂದೇ ಕುಟುಂಬದ 6 ಮಂದಿ ನೀರಿನ ರಭಸಕ್ಕೆ ಮಂಗಳವಾರ ಸಂಜೆ ಕೊಚ್ಚಿ ಹೋದ ಪ್ರಕರಣದಲ್ಲಿ ಬುಧವಾರ ಮತ್ತಿಬ್ಬರ ಮೃತ ದೇಹಗಳು ಸಿಕ್ಕಿದ್ದು, ಇನ್ನಿಬ್ಬರ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆ ಗುರುವಾರ ನಡೆಯಲಿದೆ.

ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಮೋಹಿದ್ (4) ವರ್ಷದ ಮಗು ಹಾಗೂ ಶಭಾನಾ(44) ಮೃತದೇಹ ಪತ್ತೆ ಆಗಿದ್ದ ಬಷೀರಾ (18) ಹಾಗೂ ಮೋಸಿನಾ (31) ಎಂಬುವವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಕುಣಿಗಲ್‌ ಶಾಸಕ ಡಾ. ರಂಗನಾಥ್ ಭೇಟಿ ನೀಡಿ ತಲಾ 50 ಸಾವಿರ ಪರಿಹಾರ ನೀಡಿದ್ದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ತುಮಕೂರು ವಾಸಿಗಳಾದ ಮೃತರು ಕುಣಿಗಲ್ ತಾಲೂಕಿನ ಮಾಗಡಿಪಾಳ್ಯದ ಸಂಬಂಧಿ ಮೋಸಿನ್ರ ವರ ಮನೆಗೆ ರಜೆ ಕಳೆಯಲು ಬಂದಿದ್ದರು. ಶಾಲೆ ಪ್ರಾರಂಭವಾಗುವ ಮುನ್ನ ಮಾರ್ಕೋನಹಳ್ಳಿ ಜಲಾಶಯಕ್ಕ ಹೋಗಿ ಬರಲು ನಿರ್ಧರಿಸಿ ನೀರಿಗಿಳಿಸಿದ್ದರು. ಇದ್ದಕ್ಕಿದ್ದಂತೆ ಜಲಾಶಯದಿಂದ 1040 ಕ್ಯೂಸೆಕ್ಸ್ ನೀರು ಸ್ವಯಂ ಚಾಲಿತ ಸೈಪೋನ್ ಮುಖಾಂತರ ಹರಿದಿದ್ದು, ತನ್ನ ಕುಟುಂಬವನ್ನು ರಕ್ಷಿಸುವಲ್ಲಿ ಮೋಸಿನ್ ಕಷ್ಟಪಟ್ಟಿದ್ದಾರೆ. ಸಾಹಸ ಮಾಡಿ ಒಂದು ಗಂಡು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರನ್ನು ರಕ್ಷಿಸಿಕೊಳ್ಳುವ ಅವರ ಪ್ರಯತ್ನ ವಿಫಲವಾಯಿತು ಎಂದು ಶಾಸಕರ ಮುಂದೆ ಕಣ್ಣೀರಿಟ್ಟರು. ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ನಿಫ್ರಾ(4) , ತಬಸುಮ್(46) ಮೃತ ದೇಹ ಸಿಕಿತ್ತು. ಒಟ್ಟು ಆರು ಜನರಲ್ಲಿ 4 ಜನರ ಮೃತ ದೇಹಗಳು ಸಿಕ್ಕಿವೆ. ಇನ್ನೂ ನೀರಿನ ಸೆಳೆತಕ್ಕೆ ಸಿಲುಕಿ ಬದುಕುಳಿದಿರುವ ನವಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.