ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಸಾಮೂಹಿಕ ವಿವಾಹ ಬಡವರ ಮದುವೆಯಲ್ಲ. ಅದು ಭಾಗ್ಯವಂತರ ಮದುವೆ. ವಿವಾಹ ಪವಿತ್ರವಾದ ಸಂಸ್ಕಾರ. ಭವಿಷ್ಯದ ಉದ್ದಾರಕ್ಕಾಗಿ ಮನುಷ್ಯ ಸಮಾಜದಲ್ಲಿ ರೂಪಿಸಿಕೊಂಡಿರುವ ಸಂಸ್ಕಾರವಾಗಿದೆ. ಸಾಮೂಹಿಕ ವಿವಾಹದಲ್ಲಿ ಮಹಾಸ್ವಾಮೀಜಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳು ಭಾಗ್ಯವಂತರು ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಶ್ರೀಗಳು ಹೇಳಿದರು.ನಗರದ ಶ್ರೀ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸರಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಕ್ತಿ, ಗುರುಭಕ್ತಿ, ದೈವಿ ಭಕ್ತಿಗೆ ಪ್ರಸಿದ್ಧವಾದದ್ದು ಇಂಡಿ ತಾಲೂಕು. ಪಂಚಪೀಠಾಧಿಶರನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ನಗರ ಇಂಡಿ. ಶಾಂತೇಶ್ವರ ಜಾತ್ರೆ ಕೇವಲ ಧಾರ್ಮಿಕ ಸಮಾರಂಭವಾಗಬಾರದು ಎಂಬ ಉದ್ದೇಶದಿಂದ ಸರ್ವಧರ್ಮದ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ. ಕೆಲವರು ತಮ್ಮ ಸಮುದಾಯದ ಸಾಮೂಹಿಕ ವಿವಾಹ ಸಮಾರಂಭಗಳನ್ನು ಮಾಡುತ್ತಾರೆ. ವೀರಶೈವ ಧರ್ಮದಲ್ಲಿ ಎಲ್ಲರೂ ನನ್ನವರು ಎಂದು ತಿಳಿದುಕೊಳ್ಳುವುದಾಗಿದೆ. ವೀರಶೈವ ವೈಶಿಷ್ಟ್ಯ ಎಂದರೆ, ಕೇವಲ ನಮ್ಮ ಸಮಾಜ ಎನ್ನದೇ, ಎಲ್ಲರೂ ನಮ್ಮವರೇ ಎಂದು ತಿಳಿಯುವುದಾಗಿದೆ ಎಂದು ಸ್ಪಷ್ಟಪಡಿಸಿದರು.
ಧರ್ಮದಿಂದಲೇ ಮುಕ್ತಿ ಎಂಬ ಘೋಷಣೆಯೊಂದಿಗೆ ವೀರಶೈವ ಧರ್ಮ ಎಲ್ಲರನ್ನು ಪ್ರೀತಿಸುವ ಧರ್ಮ. ಶ್ರೀ ಶಾಂತೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬಹುದಿತ್ತು. ಆದರೆ, ಸಾಮೂಹಿಕ ವಿವಾಹದಲ್ಲಿ ಎಲ್ಲ ವಧುವರರು ನನ್ನ ಮಕ್ಕಳಂತೆ ಎಂದು ತಿಳಿದು ಮಗಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ನಡೆಸಿಕೊಟ್ಟಿದ್ದು ಮಾದರಿ ಎಂದರು.ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಶಾಂತೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ಮುಂದಿನ ವರ್ಷದ ಜಾತ್ರೆಯೊಳಗಾಗಿ ಶ್ರೀ ಶಾಂತೇಶ್ವರ ದೇವರಿಗೆ ಬಂಗಾರದ ಕಿರೀಟ ತಯಾರಿಸಿ ಜಾತ್ರೆ ದಿನದಂದು ಬಂಗಾರದ ಕಿರೀಟ ಧಾರಣ ಮಾಡಲಾಗುತ್ತದೆ ಎಂದು ಹೇಳಿದರು. ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು, ಗೊಳಸಾಗರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಅಭಿನವ ರಾಚೋಟೇಶ್ವರ ಶ್ರೀಗಳು, ಹೊಟಗಿ ಮಠದ ಶ್ರೀಗಳು ಮೊದಲಾದವರು ಆಶೀರ್ವಚನ ನೀಡಿದರು.ವಿರುಪಾಕ್ಷಯ್ಯ ಹಿರೇಮಠ, ಜಾವೀದ ಮೋಮಿನ, ಅನೀಲಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸುಧೀರ ಕರಕಟ್ಟಿ, ಉಮೇಶ ದೇಗಿನಾಳ, ಶ್ರೀಕಾಂತ ಕುಡಿಗನೂರ, ಬಿ.ಕೆ.ಮಸಳಿ, ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಹೊಟಗಿ, ಶಾಂತೇಶ್ವರ ಬ್ಯಾಂಕ್ನ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ರಮೇಶ ಗುತ್ತೆದಾರ, ಚನ್ನುಗೌಡ ಪಾಟೀಲ, ಎಂ.ಆರ್.ಪಾಟೀಲ, ಭೀಮರಾಯಗೌಡ ಮದರಖಂಡಿ, ವಿಜು ಮಾನೆ, ಶಂಕರಗೌಡ ಬಿರಾದಾರ ಮೊದಲಾದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 12 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಧನರಾಜ ಮುಜಗೊಂಡ, ಬಸವರಾಜ ಗೊರನಾಳ ನಿರೂಪಿಸಿದರು. ---
9ಐಎನ್ಡಿ1,ಇಂಡಿ ಶ್ರೀ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾಶೀ ಜಗದ್ಗುರುಗಳು ಉದ್ಘಾಟಿಸಿದರು.9ಐಎನ್ಡಿ2,ಇಂಡಿ ಶ್ರೀ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಾಶೀ ಜಗದ್ಗುರುಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.
9ಐಎನ್ಡಿ3,ಇಂಡಿ ಶ್ರೀ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 12 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.ಕೋಟ್
ಹಿಂದೂ ಸಂಸ್ಕೃತಿಯಲ್ಲಿ ಅಗ್ನಿ ಸಾಕ್ಷಿಯಾಗಿ ವಿವಾಹ ಮಾಡುವ ಪದ್ದತಿ ಇದೆ. ಆದರೆ, ಸನಾತನ ವೀರಶೈವ ಧರ್ಮದಲ್ಲಿ ಕೇವಲ ಒಂದು ಅಗ್ನಿಸಾಕ್ಷಿ ಬೇಡ, ಪಂಚಭೂತಗಳ ಅಧಿಪತಿಗಳಾಗಿರುವ ಪಂಚಾಚಾರ್ಯರ ಸಾಕ್ಷಿಯಾಗಿ ವಿವಾಹ ಮಾಡುವುದು ಶ್ರೇಷ್ಠ ಎನ್ನುವ ಪರಂಪರೆ ಇದೆ. ಜಗತ್ತಿನ ಎಲ್ಲ ಜೀವಿಗಳು ಸುಖವಾಗಿರಬೇಕು ಎಂದು ಬಯಸಿದ್ದು ಸನಾತನ ವೀರಶೈವ ಧರ್ಮ.ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶೀ ಪೀಠ