ಕನ್ನಡಪ್ರಭ ವಾರ್ತೆ ವಿಜಯಪುರ
ಕಾಣೆಯಾಗಿದ್ದ ಯುವತಿಯೊಬ್ಬಳು ಅನ್ಯಕೋಮಿನ ಹುಡುಗನನ್ನು ಪ್ರೀತಿಸಿ, ವಿವಾಹವಾಗಿ ಪೊಲೀಸ್ ಠಾಣೆಗೆ ಹಾಜರಾದ ಘಟನೆ ನಗರದ ಮಹಿಳಾ ಪೊಲೀಸ್ ಠಾಣೆ ಹೊರಭಾಗದಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ವೇಳೆ ಹೆತ್ತವರು ಪೊಲೀಸ್ ಠಾಣೆಯ ಮುಂದೆಯೇ ಮನೆಗೆ ಬರುವಂತೆ ಮಗಳ ಬಳಿ ಅಂಗಲಾಚಿ ಕಣ್ಣೀರು ಹಾಕಿದ ದೃಶ್ಯ ಕೂಡ ಎಲ್ಲರ ಮನ ಕಲಕುವಂತಿತ್ತು.ಜಿಲ್ಲೆಯ ಇಂಡಿ ತಾಲೂಕಿನ ಕೆಸರಾಳ ತಾಂಡಾ ನಿವಾಸಿಗಳಾದ ಶಾನುಬಾಯಿ- ಪಂಡಿತ ಚವ್ಹಾಣ ದಂಪತಿ ಪುತ್ರಿ ನಿಶಾ ಚವ್ಹಾಣ ಹಾಸ್ಟೆಲ್ಗೆ ಹೋಗುತ್ತೇನೆ ಎಂದು ಹೇಳಿ ಅಲ್ಲಿಗೆ ಹೋಗದೆ ಫೆ.2ರಂದು ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ವಿಜಯಪುರ ಮಹಿಳಾ ಠಾಣೆಯಲ್ಲಿ ನಿಶಾ ತಾಯಿ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಳು. ಆದರೆ ಯುವತಿ ನಿಶಾ ಚವ್ಹಾಣ ತನ್ನ ಪ್ರಿಯಕರ ಮೊಹಮದ್ ಸಲಿಂ ಸುತಾರ ಜೊತೆಗೆ ಹೋಗಿ ಮದುವೆಯಾಗಿ ಸೋಮವಾರ ರಾತ್ರಿ ಮಹಿಳಾ ಠಾಣೆಗೆ ಹಾಜರಾಗಿದ್ದಾಳೆ. ಇದರಿಂದ ವಿಚಲಿತ ಯುವತಿ ಪೋಷಕರು ಸಾಕಷ್ಟು ಬಾರಿ ಆಕೆಯ ಮನವೊಲಿಸುವ ನಡೆಸಿದ ಪ್ರಯತ್ನ ಕೂಡ ವ್ಯರ್ಥವಾಗಿದೆ.ಆಘಾತದಲ್ಲಿಯೇ ಪೋಷಕರು ಮನೆಗೆ ಬಾ ಎಂದು ಠಾಣೆ ಎದುರೇ ಪುತ್ರಿ ನಿಶಾಳನ್ನು ಕೇಳಿಕೊಂಡು, ಗೋಳಾಡಿದ್ದಾರೆ. ಈ ವೇಳೆ ನಾನು ಕಾಣೆಯಾಗಿಲ್ಲ. ನಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾಳೆ ಯುವತಿ. ಅಲ್ಲದೆ ನಾವಿಬ್ಬರೂ ಪ್ರಾಪ್ತ (ವಯಸ್ಕ)ರಾಗಿದ್ದು, ಹೆತ್ತವರ ಬಳಿಗೆ ನಾನು ಹೋಗುವುದಿಲ್ಲ, ಮದುವೆಯಾಗಿರುವ ಪ್ರಿಯಕರನ ಜೊತೆಗೆ ಇರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ವೇಳೆ ಹೀಗೆಲ್ಲ ಮಾಡಬೇಡ ಬಾ ಎಂದು ಮಗಳನ್ನ ಮನೆಗೆ ಕರೆದ ತಂದೆ ತಾಯಿ ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ. ಆದರೂ ಯುವತಿ ನಾನು ಹುಡುಗನ ಜೊತೆಗೆ ಹೋಗುತ್ತೇನೆ. ನಿಮ್ಮ ಜೊತೆಗೆ ಬರಲ್ಲ ಎಂದು ಹೇಳಿದ್ದಾಳೆ.ನಾವು ಬಡತನದಲ್ಲಿದ್ದರೂ ಮಗಳಿಗೆ ಯಾವುದೇ ಕಷ್ಟ ಬಾರದಂತೆ 20 ವರ್ಷ ಸಾಕಿ ಬೆಳೆಸಿದ್ದೇವೆ. ಇದೀಗ ಅನ್ಯಕೋಮಿನ ಹುಡುಗ ನಿಶಾಳ ತಲೆಕೆಡಿಸಿ ತನ್ನಂತೆ ಮಾಡಿಕೊಂಡಿದ್ದಾನೆ. ನಮ್ಮದೇ ಜಾತಿಯವರಾಗಿದ್ದರೆ ನಾವೂ ಒಪ್ಪಿಕೊಳ್ಳಬಹುದಿತ್ತು. ಆದರೆ ಆತ ಅನ್ಯ ಕೋಮಿನವನಾಗಿದ್ದು, ಯಾವಾಗ ಮೋಸಮಾಡಿ ಮಗಳಿಗೆ ವಂಚಿಸುತ್ತಾನೋ ಗೊತ್ತಿಲ್ಲ. ದಯಮಾಡಿ ನಮ್ಮ ಮಗಳನ್ನು ನಮಗೆ ಒಪ್ಪಿಸಿ ಎಂದು ಬೇಡಿಕೊಳ್ಳುತ್ತೇವೆ.
- ಶಾನುಬಾಯಿ ಚವ್ಹಾಣ, ನಿಶಾ ತಾಯಿ.