- ಹಿಂದೂ ಜಾಗೃತಿ ಸಮಿತಿಯಿಂದ ಹರ್ ಘರ್ ಯೋಧ ಶೌರ್ಯ ತರಬೇತಿ ಸಮಾರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ಸಾಂಪ್ರದಾಯಿಕ ಭಾರತೀಯ ಸಮರ ಕಲೆಗಳು ದೈಹಿಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.ನಗರದ ಗಿರಿಯಮ್ಮ ಕಾಲೇಜು ಆವರಣದಲ್ಲಿ ಹಿಂದೂ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹರ್ ಘರ್ ಯೋಧ ಶೌರ್ಯ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಎದುರಾಳಿಯ ದಾಳಿಯನ್ನು ತಡೆಯಲು ಮತ್ತು ನಿಯಂತ್ರಿಸಲು ಈ ರೀತಿಯ ಶಿಬಿರಗಳು ವಿಶೇಷವಾಗಿ ಮಹಿಳೆಯರಿಗೆ ಸಹಕಾರಿಯಾಗಲಿದೆ. ಅನ್ಯ ಧರ್ಮದವರೊಂದಿಗೆ ದಾಳಿ ಮಾಡಲು ಈ ಶಿಬಿರನ್ನು ಹಮ್ಮಿಕೊಂಡಿಲ್ಲ. ನಮ್ಮನ್ನು ನಾವು ರಕ್ಷಿಸಿ ಕೊಳ್ಳಲು ಈ ತರಬೇತಿ ನೀಡಲಾಗುತ್ತಿದೆ ಎಂದರು.
ನಗರದಲ್ಲಿ ಹಮ್ಮಿಕೊಂಡಿದ್ದ ಶೌರ್ಯ ತರಬೇತಿ ಶಿಬಿರ ನಡೆಸದಂತೆ ಆಯೋಜಕರಿಗೆ ಇಲಾಖೆಗಳು ಸೇರಿದಂತೆ ಹಲವರು ತೊಂದರೆಯನ್ನು ನೀಡಿದ್ದು ಸರಿಯಲ್ಲ. ಅತಿಯಾದ ಓಲೈಕೆಯೂ ಸರಿಯಲ್ಲ ಎನ್ನುವದನ್ನು ಆವರು ಮನಗಾಣಬೇಕಿದೆ. ನಮ್ಮತನಕ್ಕೆ ದಕ್ಕೆಯುಂಟಾದರೆ ಸಹಿಸಲು ಸಾದ್ಯವಿಲ್ಲ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಹಿಂದೂಗಳು ಉಳಿದರೆ ಈ ದೇಶ ಉಳಿಯುತ್ತದೆ ಎನ್ನುವವರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ನಮ್ಮ ಹೆಣ್ಣುಮಕ್ಕಳಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅನುಸರಿಸಬೇಕಾದ ಕಲೆಗಳನ್ನು ಇಂಥ ತರಬೇತಿ ಶಿಬಿರದಲ್ಲಿ ನೀಡಲಾಗಿದೆ ಎಂದರು.
ಏಳು ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಲಾಠಿ ವರಸೆ, ನಾನ್ ಚಾಕ್, ಸ್ವಯಂರಕ್ಷಣೆ, ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸಮಾರೋಪದ ಹಿನ್ನಲೆ ಅತಿಥಿಗಳ ಸಮ್ಮುಖದಲ್ಲಿ ಶಿಬಿರಾರ್ಥಿಗಳು ನೀಡಿದ ಪ್ರದರ್ಶನ ರೋಮಾಂಚನಗೊಳಿಸಿತು.ಸಮಾರಂಭದ ಸಾನಿಧ್ಯವನ್ನು ನಗರದ ರಾಮಕೃಷ್ಣ ಆಶ್ರಮದ ಆತ್ಮಾನಂದ ಮಹಾರಾಜ್ ವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ್, ನಿವೃತ್ತ ಪೋಲಿಸ್ ಅಧಿಕಾರಿ ಕೋಮಲ್, ಉದ್ಯಮಿ ಎಚ್.ಪಿ.ಬಾಬಣ್ಣ, ಹರಿಹರದ ಪತಂಜಲಿ ಯೋಗ ಕೇಂದ್ರದ ನಿರಂಜನ್, ಬಿ.ವಿಶ್ವನಾಥ್, ತರಬೇತಿದಾರ ಸಾಗರ್ ದಳವಾಯಿ, ಎಚ್.ದಿನೇಶ್, ಲೋಕೇಶ್ ಮುರ್ಕಲ್, ಶಿವಕುಮಾರ್, ಗೋಪಾಲ್, ಶಾಂತಾರಾಜ್, ರೂಪಾ ಪವಾರ್, ಲೆಕ್ಕ ಪರಿಶೋಧಕಿ ಸಾವಿತ್ರ, ಸಾಕ್ಷಿ ಶಿಂದೆ, ಮಿನಾಕ್ಷಿ ನಿರಂಜನ್ ಹಾಗೂ ಇತರರಿದ್ದರು.
- - --01ಎಚ್ಆರ್ಆರ್01: ಶೌರ್ಯ ತರಬೇತಿ ಶಿಬಿರದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಶಾಸಕರು ಪುಷ್ಪಾರ್ಚನೆ ಸಲ್ಲಿಸಿದರು.
-01ಎಚ್ಆರ್ಆರ್01A: ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಲಾಠಿ ವರಸೆ ಕಲೆ ಪ್ರದರ್ಶಿಸಿದರು.