ಸೆ.14ರಂದು ಸೋಮವಾರ ಪ್ರತಿ ಹಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ಸೆ.16 ರಂದು ನಗರದ ಮಳವಳ್ಳಿ ರಸ್ತೆಯ ಈಶ್ವರ ದೇವಾಲಯದ ಬಳ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಗಣೇಶೋತ್ಸವದ ಅಂಗವಾಗಿ ಸೆ.16ರಂದು ಜೆಡಿಎಸ್ ಮತ್ತು ಬಿಜೆಪಿಯಿಂದ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಗುವುದು ಎಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ನಾಯಕರು ಶನಿವಾರ ತಿಳಿಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ಪೈಕಿ 108 ಮೂರ್ತಿಗಳನ್ನು ಮೈತ್ರಿ ಪಕ್ಷದ ಗಣೇಶ ಮೂರ್ತಿಯೊಂದಿಗೆ ನಗರಕ್ಕೆ ತಂದು ಭವ್ಯಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಸೆ.14ರಂದು ಸೋಮವಾರ ಪ್ರತಿ ಹಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ಸೆ.16 ರಂದು ನಗರದ ಮಳವಳ್ಳಿ ರಸ್ತೆಯ ಈಶ್ವರ ದೇವಾಲಯದ ಬಳ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು.

ನಗರದ ಪ್ರವಾಸಿ ಮಂದಿರ ವೃತ್ತ, ಹಳೆ ಎಂ.ಸಿ.ರಸ್ತೆ ಪೇಟೆ ಮೂಲಕ ಆಕರ್ಷಕ ಜಾನಪದ, ಕಲಾತಂಡ, ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳ ನೃತ್ಯ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದರು.

ನಂತರ ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಶಿಂಶಾ ನದಿಯಲ್ಲಿ ನೂರೆಂಟು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಗುವುದು. ಕಳೆದ ವರ್ಷ ಗಣೇಶ ನಡೆದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡಸಿ ಗಲಭೆ ಉಂಟು ಮಾಡಿದ್ದರು. ಹೀಗಾಗಿ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಸಾಮೂಹಿಕ ಗಣೇಶ ವಿಸರ್ಜನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ಬಾರಿ ಗಲಭೆ ಕಾರಣವಾದ ಹಳೆ ಎಂ.ಸಿ.ರಸ್ತೆಯ ಮಸೀದಿ ಬಳಿ ಮೆರವಣಿಗೆ ಹೋಗಬಾರದು ಎಂದು ಪೊಲೀಸರು ಕೆಲವು ಷರತ್ತು ವಿಧಿಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು. ಪೊಲೀಸರ ಈ ಕ್ರಮದಿಂದ ಹಿಂದೂ ಜನಾಂಗದ ಭಾವನೆಗಳಿಗೆ ದಕ್ಕೆ ಉಂಟಾಗುತ್ತಿದೆ. ಮೆರವಣಿಗೆ ನಡೆಯಲು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ನೀಡಬೇಕು. ಮೆರವಣಿಗೆಗೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಕೆ.ಸತೀಶ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಎಸ್. ಬಿ. ಮಹದೇವು, ನಾಗೇಶ, ಕೆ.ಟಿ. ರಾಜಣ್ಣ, ಕುಳಗೆರೆ ಶೇಖರ್, ಎಂ.ಸಿ.ಸತೀಶ್, ಎಂ. ಸಿ.ಸಿದ್ದು, ಎಂ.ಎಸ್.ಜಗನ್ನಾಥ್ ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಭಾಗವಹಿಸಿದ್ದರು.23 ಮಂದಿ ವಿರುದ್ಧ ನ್ಯಾಯಾಲಯದಿಂದ ಸಮನ್ಸ್ ಜಾರಿ

ಮದ್ದೂರು:

ಪಟ್ಟಣದಲ್ಲಿ ಕಳೆದ ವರ್ಷ ಗಣೇಶನ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆ ವಿರೋಧಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗದ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್ ಸೇರಿದಂತೆ 23 ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಹಿಂದೂಪರ ಸಂಘಟನೆ ಕಾರ್ಯಕರ್ತರಾದ ಬಿ.ಗಿರೀಶ್, ಸೌಮ್ಯ, ರಮ್ಯಾ, ಜ್ಯೋತಿ, ಧನು, ನಿಂಗರಾಜು, ಯೋಗರಾಜು, ಪ್ರಕಾಶ್, ವರದರಾಜು, ಮಧು, ರಾಕೇಶ್, ಭಾಸ್ಕರ, ಸೌಮ್ಯ, ವರುಣ್. ಅಕುಲ್, ಎಸ್. ಪಿ ಚಂದನ್, ದರ್ಶನ್, ಸಚ್ಚಿನ್ ಹಾಗೂ ಇಂದ್ರೇಶ್ ಸೇರಿದಂತೆ 23 ಕಾರ್ಯಕರ್ತರಿಗೆ ಜೆಎಂಎಫ್‌ಸಿ 2 ನೇ ಹೆಚ್ಚುವರಿ ನ್ಯಾಯಾಲಯ ಸಮಸ್ ಜಾರಿಗೊಳಿಸಿದ್ದು, ಸೆ.28ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ಹೊರಡಿಸಿದೆ.